ಹೈದಾರಾಬಾದ್: ಕೆಲವು ದಿನಗಳ ಹಿಂದೆಯಷ್ಟೇ ಇಂದೋರ್ನಲ್ಲಿ ಹಿಂದೂ ಮಹಿಳೆಯೊಬ್ಬಾಕೆ ಸಾವಿಗೆ ಶರಣಾದಾಗ ಸಮಾಜದ ಮುಸ್ಲಿಂ ಯುವಕರು ಅಂತ್ಯ ಸಂಸ್ಕಾರ ಮಾಡಲು ನೆರವಾಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದರು.
ಇದೀಗ ಇದಕ್ಕೆ ಸಮಾನವಾದ ಘಟನೆ ಹೈದರಾಬಾದ್ನಿಂದ ವರದಿಯಾಗಿದೆ. ಕ್ಷಯರೋಗದಿಂದಾಗಿ ಸಾವಿಗೆ ಶರಣಾದ ಆಟೋ ರಿಕ್ಷಾ ಚಾಲಕನ ಮೃತದೇಹಕ್ಕೆ ಹೆಗಲು ಕೊಟ್ಟಿರುವ ಐವರು ಮುಸ್ಲಿಂ ಬಾಂಧವರು ಅಂತ್ಯಸಂಸ್ಕಾರ ಮಾಡಲು ನೆರವಾಗಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ಡೌನ್ ಕೂಡಾ ಜಾರಿಯಲ್ಲಿರುವದರಿಂದ ಅಂತ್ಯಸಂಸ್ಕಾರ ಮಾಡಲು ನೆರೆಯವರು ಹಾಗೂ ಸಂಬಂಧಿಕರು ನೆರವಾಗಿರಲಿಲ್ಲ. ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಮೃತದೇಹಕ್ಕೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ಮಾಡಲು ನೆರವಾಗಿದ್ದಾರೆ.
ಏಪ್ರಿಲ್ 16ರಂದು ಖೈರತಾಬಾದ್ ನಿವಾಸಿ ಹಾಗೂ ಆಟೋ ಚಾಲಕ ವೇಣು ಮುದಿರಾಜ್ (50) ಎಂಬವರು ಕ್ಷಯರೋಗದಿಂದಾಗಿ ನಿಧನರಾಗಿದ್ದರು. ಈ ಸಂದರ್ಭದಲ್ಲಿ ಮೃತದೇಹವನ್ನು ಮನೆಗೆ ತಂದಾಗ ನೆರೆಯವರು ಗಲಭೆ ಆರಂಭಿಸಿದರು. ಈತ ಕೊರೊನಾ ವೈರಸ್ನಿಂದಾಗಿ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಯಿತು. ನೆರೆಯವರು ನೆರವಾಗಲು ನಿರಾಕರಿಸಿದ ಸಂದರ್ಭದಲ್ಲಿ ಅದೇ ಪರಿಸರ ನಿವಾಸಿಯಾಗಿರುವ ಸಾದೀಕ್ ಬಿನ್ ಸಲಾಂ ಹಾಗೂ ಆತನ ನಾಲ್ವರು ಸ್ನೇಹಿತರು ಸೇರಿ ಅಂತ್ಯ ಸಂಸ್ಕಾರ ಮಾಡಲು ನೆರವಾಗಿದ್ದಾರೆ.
ಪೊಲೀಸರಿಂದ ಅನುಮತಿ ಪಡೆದು ಸ್ನೇಹಿತರಾದ ಮೊಹಮ್ಮದ್ ಮಜೀದ್, ಅಬ್ದುಲ್ ಮುಕ್ತಾದಿರ್, ಮೊಹಮ್ಮದ್ ಅಹ್ಮದ್ ಹಾಗೂ ಶೈಕ್ ಖಾಸೀಂ ನೆರವಿನೊಂದಿಗೆ ಸಾದೀಕ್ ಬಿನ್ ಸಲಾಂ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ವೇಣು ಮುದಿರಾಜ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ತಾಯಿ ಕೆಲವು ವರ್ಷಗಳೇ ಹಿಂದೆಯೇ ಸಾವಿಗೆ ಶರಣಾಗಿದ್ದರು. ಇದರಿಂದಾಗಿ ಅಂತ್ಯಸಂಸ್ಕಾರ ಮಾಡಲು ಹಣ ಕೂಡಾ ಇರಲಿಲ್ಲ. ಇದೀಗ ಮುಸ್ಲಿಂ ಬಾಂಧವರ ಮಾನವೀಯತೆ ಗುಣಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.