ಮಂಗಳೂರು, ಏ.10: ಶುಕ್ರವಾರ ಬೆಳಗ್ಗೆಯಿಂದ ಜಿಲ್ಲೆ ಸೀಲ್ಡ್ ಡೌನ್ ಆಗಲಿದೆ ಎನ್ನುವ ಸುಳ್ಳು ಸುದ್ದಿಯಿಂದ, ಜನರು ಆತಂಕಗೊಂಡಿದ್ದರು. ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಜಿಲ್ಲಾಡಳಿತ “ಇದೊಂದು ಸುಳ್ಳು ಸುದ್ದಿ” ಎಂದು ಹೇಳಿದೆ.
“ಈಗಾಗಲೇ ಲಾಕ್ ಡೌನ್ ಇರುವುದರಿಂದ, ಜಿಲ್ಲೆಯನ್ನು ಸಂಪೂರ್ಣವಾಗಿ ಸೀಲ್ಡ್ ಡೌನ್ ಮಾಡುವ ಯಾವ ಪ್ರಕ್ರಿಯೆಗಳೂ ನಡೆಯುತ್ತಿಲ್ಲ. ರಾಜ್ಯ ಸರಕಾರದಿಂದ ಯಾವ ಸುತ್ತೋಲೆಗಳೂ ಬಂದಿಲ್ಲ” ಎಂದು ಜಿಲ್ಲಾಡಳಿತ ಅತ್ಯಂತ ಸ್ಪಷ್ಟವಾಗಿ ಹೇಳಿದೆ.
“ಮುಂದಿನ ಕೆಲವು ದಿನ ಲಾಕ್ ಡೌನ್ ಮುಂದುವರಿಯಲಿದೆ. ಇದನ್ನೇ ನಾವು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದೇವೆಯೇ ಹೊರತು, ಸೀಲ್ಡ್ ಡೌನ್ ಇಲ್ಲ. ಜನರು ವದಂತಿಯನ್ನು ನಂಬಬೇಡಿ” ಎಂದು ಜಿಲ್ಲಾಡಳಿತ, ಸಾರ್ವಜನಿಕರಲ್ಲಿ ಮನವಿ ಮಾಡಿದೆ.
“ಸುದ್ದಿ ಪ್ರಸಾರ ಮಾಡುವ ಮೊದಲು, ಸಂಬಂಧ ಪಟ್ಟ ಇಲಾಖೆಯಿಂದ ದೃಢೀಕರಿಸಲು ಕೋರಲಾಗಿದೆ. ಆದರೂ, ಇಂತಹ ಸುಳ್ಳುಸುದ್ದಿಗಳು ಪ್ರಸಾರವಾಗುತ್ತಿವೆ. ಇದರಿಂದ, ಅನಗತ್ಯವಾಗಿ ಸಾರ್ವಜನಿಕರು ಗಾಭರಿಗೊಳಗಾಗುತ್ತಾರೆ” ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಎಚ್ಚರಿಕೆಯನ್ನು ನೀಡಿದ್ದಾರೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ತೆಗೆದುಕೊಂಡ ಕ್ರಮದ ರೀತಿಯಲ್ಲಿ, ರಾಜ್ಯದ ಕೆಲವು ಜಿಲ್ಲೆಗಳು ಸೀಲ್ಡ್ ಡೌನ್ ಆಗಲಿದೆ. ಇದರಿಂದ, ಸಾರ್ವಜನಿಕರಿಗೆ ದೈನಂದಿನ ಪದಾರ್ಥಗಳೂ ಸಿಗುವುದಿಲ್ಲ ಎನ್ನುವ ಸುದ್ದಿ ಶುಕ್ರವಾರ ಬೆಳಗ್ಗೆ, ದಟ್ಟವಾಗಿ ಜಿಲ್ಲೆಯಲ್ಲಿ ಹರಿದಾಡುತ್ತಿತ್ತು