janadhvani

Kannada Online News Paper

“ಮುಸ್ಲಿಮರು ಧ್ವೇಷಿಸುವವರಲ್ಲ, ಪ್ರೀತಿಸುವವರು” ಸೌದಿಯಲ್ಲಿರುವ ಹಿಂದೂ ಸಹೋದರನ ಬರಹ

ವಿಶ್ವಾದ್ಯಂತ ಕೊರೋನಾ ಮಹಾಮಾರಿಯಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಇದನ್ನು ಹಿಮ್ಮೆಟ್ಟಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ.

ಆದರೆ, ಭಾರತದಲ್ಲಿ ಕೊರೋನಾಕೆ ಕೋಮು ಬಣ್ಣ ಹಚ್ಚಿ, ಕೆಲವು ಕಿಡಿಗೇಡಿಗಳು ಭಾರತೀಯರ ಮಧ್ಯೆ ವಿಷಬೀಜವನ್ನು ಬಿತ್ತಲು ಹರಸಾಹಸ ಪಡುತ್ತಿದ್ದಾರೆ. ಈ ಸನ್ನಿವೇಷದಲ್ಲಿ ವಿದೇಶದಲ್ಲಿ ದುಡಿಯುತ್ತಿರುವ ಓರ್ವ ಹಿಂದು ಸಹೋದರನ ಬರಹವೊಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ಅದನ್ನು ಓದುಗರ ಮುಂದಿಡುತ್ತಿದ್ದೇವೆ. ಇದು ವಿದೇಶದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತಿಳಿದ ವಿಷಯವೇ, ಆದರೂ ತಿಳುವಳಿಕೆಯಿಲ್ಲದವರಿಗಾಗಿ ಸಮರ್ಪಣೆ.


ನಮಸ್ಕಾರ ಸ್ನೇಹಿತರೇ,

ನನ್ನ ಹೆಸರು ಕೃಷ್ಣ. ನಾನು ಮಂಗಳೂರಿನವ. ನಾನು ಕಾಲೇಜು ಕಲಿಯುವ ಸಮಯದಿಂದಲೂ ಭಜರಂಗದಳದ ಕಾರ್ಯಕರ್ತ. ನಾನು ಈಗ ವಿದೇಶದಲ್ಲಿ ಇದ್ದೀನಿ. ನಾನು ಊರಲ್ಲಿರುವಾಗ ಸದಾ ಮುಸ್ಲಿಂ ವಿರೋಧಿಯಾಗಿದ್ದೆ. ಮುಸ್ಲಿಮರನ್ನು ಕಂಡರೆ ನನಗೆ ಆಗುತ್ತಿರಲಿಲ್ಲ. ಹೊಡಿಬೇಕು, ಸಾಯಿಸ್ಬೇಕು ಅಂತನೇ ಅನಿಸ್ತಾ ಇತ್ತು. ನಾನು ನಮ್ಮ ಕಾರ್ಯಕರ್ತರ ಜೊತೆಗೂಡಿ ಅದೆಷ್ಟೋ ಜನರಿಗೆ ಹೊಡೆದಿದ್ದೀವಿ. ಕಾಲೇಜು ಕಲಿತು ಮುಗಿದ ಮೇಲೆ ದಿನಾ ಕಾರ್ಯಕರ್ತರ ಜೊತೆಗೂಡಿ ಎಣ್ಣೆ ಹೊಡಿಯೂದು, ಮುಸ್ಲಿಮರ ಮೇಲೆ ಧ್ವೇಷ ಸಾದಿಸುವುದೇ ನಮ್ ಕೆಲಸ.

ಕಾಲೇಜು ಮುಗಿಸಿ ಕೆಲ ವರ್ಷ ಊರಲ್ಲೇ ಇದ್ದೆ. ಕೆಲಸ ಇಲ್ದೆ ಅಲೆದಾಡ್ತಾ ಇದ್ದೆ. ಅವಾಗ್ಲೂ ಇದೇ ಕೆಲಸ. ಒಂದಿನ ಸೌದಿಯಲ್ಲಿರುವ ಗೆಳೆಯ ಶೇಖರ ಒಂದು ಡ್ರೈವಿಂಗ್ ವಿಸಾ ಇದೆ, ಒಳ್ಳೆಯ ಸಂಬಳ ಇದೆ, ಫ್ರೀಡಂ ಡ್ಯೂಟಿ ಅಂದ. ನಾವು ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಇದ್ವಿ. ಮನೆಯಲ್ಲಿ ತಂದೆ ತಾಯಿ ಎರಡು ತಂಗಿಯರು ಇದ್ದಾರೆ. ಮನೆಯಲ್ಲಿ ತುಂಬಾ ಕಷ್ಟ ಇದ್ದ ಕಾರಣ ಡ್ರೈವರ್ ಆಗಿ ಹೋಗಲು ಇಷ್ಟ ಇಲ್ಲದಿದ್ದರೂ ಒಳ್ಳೆಯ ಸಂಬಳ ಮತ್ತು ಗೆಳೆಯ ಇದ್ದ ಕಾರಣ ನಾನು ಆ ವಿಸಾಗೆ ಟ್ರೈ ಮಾಡಿದೆ.

ಏನೋ ದೇವರ ಪುಣ್ಯ ವಿಸಾ ಸಿಕ್ತು ಬಂದೆ. ಇಲ್ಲಿ ಬಂದು ನೋಡುವಾಗ ನಮ್ಮ ಕಂಪೆನಿಯ ಕೆಲಸಗಾರರಿಗೆ ಅಂತ ತುಂಬಾ ಬಿಲ್ಡಿಂಗ್ ಇವೆ. ನಮ್ಮ ಬಿಲ್ಡಿಂಗ್ ನಲ್ಲಿ ಇಲ್ಲಿರುವವರು ಎಲ್ರೂ ಮುಸ್ಲಿಂ, ನಾವಿಬ್ಬರೇ ಹಿಂದುಗಳು..!! ನನಗೆ ತುಂಬಾ ಭಯವೂ ಆಯಿತು. ಕಾರಣ ನಾನು ಮುಸ್ಲಿಮರ ಜೊತೆ ಅಷ್ಟೊಂದು ಧ್ವೇಷ ಕಟ್ಟಿದ್ದೆ. ಆದರೆ ಅವರೆಲ್ಲರೂ ತುಂಬಾ ಕೂಲಾಗಿ, ಫ್ರೆಂಡ್ಲಿಯಾಗಿ ಇದ್ದರು.

ನಾವು ಒಟ್ಟಿಗೆ ಅಂದರೆ ಒಂದೇ ತಟ್ಟೆಯಲ್ಲಿ ಎಲ್ಲರೂ ಕೈಯಾಕಿ ಊಟ ಮಾಡುವುದು, ಒಟ್ಟಿಗೆ ಮಲಗುವುದು. ಮೊದ ಮೊದಲು ನನಗೆ ಇದೆಲ್ಲಾ ಸರಿಯಾಗಲಿಲ್ಲ. ಊರಿನವ ಆದ ಕಾರಣ ಮುಸ್ಲಿಮರು ನನ್ನನ್ನು ಇನ್ನೂ ಹತ್ತಿರ ಮಾಡಿದರು. ನಾನು ಇವತ್ತಿಗೆ ಇಲ್ಲಿಗೆ ಬಂದು 3 ವರ್ಷ ಆಯ್ತು. ಇವಾಗ ಎಲ್ಲಾ ಮುಸ್ಲಿಮರೂ ನನ್ನ ಪ್ರಾಣ ಸ್ನೇಹಿತರು. ನಾನು ಊರಲ್ಲಿರುವಾಗ 1000 ರುಪಾಯಿ ಸಾಲ ಕೇಳಿದ್ರೂ ಯಾರೂ ಕೊಡ್ತಾ ಇರಲಿಲ್ಲ.

ಆದರೆ ನಾನು ಕಷ್ಟದಲ್ಲಿದ್ದಾಗ ಇವರು ಲಕ್ಷಾಂತರ ರುಪಾಯಿ ಸಾಲನೂ ಕೊಟ್ರು, ಫ್ರೀಯಾಗಿಯೂ ಕೊಟ್ರು, ನನ್ನ ತಂಗೀ ಮದುವೆ ಮಾಡಿಸಿದೆ. ನಂತರ ನನಗೆ ಸ್ವಂತ ಮನೆ ಇಲ್ಲಾ ಅಂತ ಗೊತ್ತಿದ್ದ ಕಾರಣ ಅವರೆಲ್ಲಾ ಒತ್ತಯಾ ಮಾಡಿಸಿ ನನ್ನಲ್ಲಿ ಮನೆ ಕಟ್ಟಲು ಹೇಳಿದರು. ಇವರ ಸಹಾಯದಲ್ಲಿ ಮನೇನೂ ಕಟ್ಟಿದೆ..! ಅದಕ್ಕೂ ನನಗೆ ಲಕ್ಷಾಂತರ ಸಾಲನೂ ಕೊಟ್ರು, ಸಹಾಯಾನೂ ಮಾಡಿದ್ರು. ಒಬ್ಬನೇ ಒಬ್ಬ ಮುಸ್ಲಿಂ ಹಿಂದೂ ವಿರೋಧಿಯಾಗಿ ನಾನು ಇವತ್ತಿನ ವರೆಗೂ ನೋಡಿಲ್ಲ. ನನಗೆ ಆಗಲೇ ತಪ್ಪಿನ ಅರಿವಾಗಿತ್ತು. ನಾನು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಟ್ಟೆ. ನಾವು ಮುಸ್ಲಿಮರನ್ನು ಹತ್ತಿರದಿಂದ ನೋಡುವ ಪ್ರಯತ್ನ ಮಾಡಲಿಲ್ಲ, ದೂರದಿಂದ ಮಾತ್ರ ನೋಡಿ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ವಿ.

ಈಗ ನಾನು ಇದನ್ನು ಬರೆಯಲು ಕಾರಣ, ಕೊರೋನಾ ರೋಗದ ಕಾರಣ ಊರಿನಲ್ಲಿ ಜನ ಹಣ ಇಲ್ಲದೆ, ಆಹಾರ ಸಾಮಾಗ್ರಿಗಳು ಇಲ್ಲದೆ ಕಷ್ಟಪಡುತ್ತಿರುವಾಗ ಇಲ್ಲಿರುವ ಪ್ರತಿಯೊಬ್ಬ ಮುಸ್ಲಿಮರೂ ಅವರವರ ಊರಿನ ವಿದೇಶದಲ್ಲಿ ಮತ್ತು ಸ್ವದೇಶದಲ್ಲಿ ಇರುವ ಯುವಕರನ್ನು ಒಟ್ಟುಗೂಡಿಸಿ ವಾಟ್ಸಪ್ ನಲ್ಲಿ ರಾತ್ರಿ ಹಗಲೂ ಅಂತ ಮೆಸೇಜ್ ಮಾಡುತ್ತಾ, ಕಾಲ್ ಮಾಡುತ್ತಾ, ವಾಯ್ಸ್ ಮೆಸೇಜ್ ಮಾಡುತ್ತಾ ಕಷ್ಟಪಟ್ಟು ಹಣ ಕಲೆಕ್ಷನ್ ಮಾಡಿ ತಮ್ಮೂರಿನ ಹಿಂದೂ ಮುಸ್ಲಿಂ ಕ್ರಿಸ್ಚಿಯನ್ ರಿಗೆ ಫ್ರೀಯಾಗಿ ತಿಂಗಳಿಗೆ ಬೇಕಾಗುವಷ್ಟು ಆಹಾರದ ಕಿಟ್ ವಿತರಿಸುತ್ತಿದ್ದಾರೆ…! ಇದನ್ನು ನೋಡಿ ನನಗೆ ನಿಜವಾಗಿಯೂ ಬೇಸರವಾಯಿತು..!

ನನಗೆ ಈತರ ಕಲೆಕ್ಷನ್ ಮಾಡಿ ನಮ್ಮೂರಿನ ಜನತೆಗೆ ಕೊಡಲು ಸಾಧ್ಯವಾಗುತ್ತಿಲ್ಲವಲ್ಲ ಅಂತ… ನಮ್ಮೂರಿನಲ್ಲಿ ನಮ್ಮವರು ಯಾರೂ ಈತರ ಕೆಲಸ ಮಾಡಿಲ್ಲ.. ಆದರೆ ಮುಸ್ಲಿಮರು ಆಹಾರ ಸಾಮಾಗ್ರಿಗಳನ್ನು ವಿತರಿಸುವಾಗ ನಮ್ಮವರು ಮುಸ್ಲಿಮರನ್ನು ತಡೆದಿದ್ದಾರೆ ಅಂತ ಗೊತ್ತಾಯಿತು… ಊರಿನಲ್ಲಿ ಭಜರಂಗದಳ, ಸಂಘಪರಿವಾರ, ಶ್ರೀರಾಮ ಸೇನೆಯಂತಹಾ ಹೆಸರಿನಲ್ಲಿರುವ ಮುಸ್ಲಿಂ ವಿರೋಧಿ ಸಂಘಟನೆಗಳಲ್ಲಿ ಇದ್ದು ಮುಸ್ಲಿಮರ ವಿರುದ್ಧ ಧ್ವೇಷ ಸಾಧಿಸುತ್ತಿರುವ ನನ್ನ ಸಹೋದರರಿಗೆ ಸತ್ಯ ತಿಳಿಸಬೇಕೆಂದು ಈ ಬರಹ ಬರೆದಿದ್ದೇನೆ. ದಯವಿಟ್ಟು ಅವರಿವರ ಮಾತು ಕೇಳಿ ಮುಸ್ಲಿಮರ ವಿರುದ್ಧ ಧ್ವೇಷ ಸಾಧಿಸಬೇಡಿ. ಅವರು ಧ್ವೇಷಿಸುವವರಲ್ಲ, ಪ್ರೀತಿಸುವವರು. ಅವರ ಜೊತೆ ಸೇರಿ ನೋಡಿ ಅವಾಗ ಗೊತ್ತಾಗುತ್ತದೆ.

error: Content is protected !! Not allowed copy content from janadhvani.com