ಶಾರ್ಜಾ: ಕೆ.ಸಿ.ಎಫ್ ಶಾರ್ಜಾ ಝೋನ್ ವತಿಯಿಂದ, ಮೀಲಾದ್ ಪ್ರಯುಕ್ತ ” ಅರಿವಿನ ಕ್ರಾಂತಿಗೆ ಪ್ರತಿಭೆಗಳ ನಡಿಗೆ” ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 1-11-19 ರಂದು ಶುಕ್ರವಾರ ಶಾರ್ಜಾದ ಅಲ್ ಖಾಸಿಮಿಯಾದಲ್ಲಿರುವ ರಯಾನ್ ಹೋಟೆಲಿನಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು.ಈ ಪ್ರಯುಕ್ತ ಶಾರ್ಜಾದಲ್ಲಿ ನೆಲೆಸಿರುವ ಕೆಸಿಎಫ್ ಕಾರ್ಯಕರ್ತರು, ಅನಿವಾಸಿ ಕನ್ನಡಿಗರು ಹಾಗೂ ಅವರ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾಷಣ ಸ್ಪರ್ಧೆ, ಹಾಡು, ಕ್ವಿಝ್, ಖಿರಾಅತ್, ಕಲರಿಂಗ್, ಮೆಮೊರಿ ಟೆಸ್ಟ್, ಚರಿತ್ರೆ ಬರಹ, ಅರಬಿಕ್ ಕೈ ಬರಹ, ಪ್ರಬಂಧ, ಬುರ್ದಾ ಆಲಾಪನೆ, ಕಸದಿಂದ ರಸ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರೋತ್ಸಾಹ ಬಹುಮಾನ ನೀಡಲಾಯಿತು. ಕೆ ಸಿ ಎಫ್ ಶಾರ್ಜ ಝೋನ್ ತಂಡದಿಂದ ಆಕರ್ಷಕ ದಫ್ ಪ್ರದರ್ಶನ ನಡೆಸಲಾಯಿತು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಲಯ ಅಧ್ಯಕ್ಷ ಬಹು! ಅಬೂಸ್ವಾಲಿಹ್ ಸಖಾಫಿಯವರು ಅಲಂಕರಿಸಿದರು. ಬಹು! ಇಬ್ರಾಹಿಂ ಸಖಾಫಿ ಕೆದುಂಬಾಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ನಿಝಾಮುದ್ದೀನ್ ಸಖಾಫಿಯವರು ಸ್ವಾಗತಿಸಿದರು. ಮುಖ್ಯ ಅತಿಥಿ ಆಗಿ ಮುಹಮ್ಮದ್ ಅಫ್ಝಲ್ ಉದ್ಯಾವರ ಅವರು ಆಗಮಿಸಿದ್ದರು ಕಾರ್ಯಕ್ರಮಕ್ಕೆ ಕೆ.ಸಿ.ಎಫ್ ರಾಷ್ಟೀಯ ಸಮಿತಿ ಯು.ಎ.ಇ. ಇದರ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮೀ, ಪ್ರಧಾನ ಕಾರ್ಯದರ್ಶಿ ಮೂಸ ಹಾಜಿ ಬಸರಾ, ರಾಷ್ಟ್ರೀಯ ನಾಯಕರಾದ ಝೈಯನುದ್ದೀನ್ ಹಾಜಿ, ಕೆ.ಸಿ.ಎಫ್ ಅಜ್ಮಾನ್ ಝೋನ್ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಅಮಾನಿ ಮುಂತಾದವರು ಶುಭ ಕೋರಿದರು.