janadhvani

Kannada Online News Paper

ದುಬೈ, ಜೂ.8: ಒಮಾನ್ ನಿಂದ ದುಬೈಗೆ ಆಗಮಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಮೃತಪಟ್ಟ 12 ಭಾರತೀಯರನ್ನು ಭಾರತದಲ್ಲಿ ಅವರ ಕುಟುಂಬಕ್ಕೆ ಹಸ್ತಾಂತರಿಸುವ ಮುನ್ನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ದುಬೈಯಲ್ಲಿರುವ ಭಾರತೀಯ ದೂತಾವಾಸ ಕಚೇರಿ ನಿರತವಾಗಿದೆ.

ಒಮಾನ್ ರಾಜಧಾನಿ ಮಸ್ಕತ್ ನಿಂದ ದುಬೈಗೆ ಈದುಲ್ ಫಿತ್ವ್ ರ್ ರಜೆಯಲ್ಲಿ ಹಬ್ಬ ಮುಗಿಸಿಕೊಂಡು ಪ್ರಯಾಣಿಕರು ವಾಪಸ್ಸಾಗುತ್ತಿದ್ದ ವೇಳೆ ಬಸ್ ರಾಶಿದಿಯಾ ಮೆಟ್ರೊ ನಿಲ್ದಾಣದ ಹತ್ತಿರ ರಸ್ತೆಯೊಂದನ್ನು ತಪ್ಪಾಗಿ ಪ್ರವೇಶಿಸಿದ ಸಂದರ್ಭದಲ್ಲಿ ಕಳೆದ ಗುರುವಾರ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ದುಬೈಯ ವಿಧಿವಿಜ್ಞಾನ ಪ್ರಯೋಗಾಲಯ 11 ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದ್ದು ಇನ್ನೊಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಅಧಿಕಾರಿಗಳಿಂದ ಇನ್ನೂ ಸಿಗಬೇಕಿದೆ ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸಲ್ ಜನರಲ್ ವಿಪುಲ್ ಟ್ವೀಟ್ ಮಾಡಿದ್ದಾರೆ.

ಈ ವಿಧಿವಿಜ್ಞಾನ ಪರೀಕ್ಷೆ, ವರದಿಗಳ ಪರಿಶೀಲನೆ ಎಲ್ಲಾ ಮುಗಿದ ನಂತರ ಸಂಬಂಧಪಟ್ಟ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇಂದು ಸಂಜೆಯ ಹೊತ್ತಿಗೆ ಭಾರತಕ್ಕೆ ಕಳುಹಿಸುವ ಕಾರ್ಯ ನಡೆಯಲಿದ್ದು ಏರ್ ಇಂಡಿಯಾ ಮೂಲಕ ಹಸ್ತಾಂತರಿಸಲಾಗುವುದು. ಈ ನಿಟ್ಟಿನಲ್ಲಿ ದುಬೈ ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ಎಲ್ಲಾ ರೀತಿಯಲ್ಲಿ ನೆರವು ನೀಡಿದ್ದಾರೆ ಎಂದರು.

error: Content is protected !! Not allowed copy content from janadhvani.com