janadhvani

Kannada Online News Paper

ರಿಯಾದ್ ಕ್ಷಿಪಣಿ ದಾಳಿ: ಗಾಯಗೊಂಡಿದ್ದ ಭಾರತೀಯ ಕಾರ್ಮಿಕ ಮೃತ್ಯು-ರಾಯಭಾರ ಕಚೇರಿ ಸಂತಾಪ

ಕ್ಷಿಪಣಿ ಅವಶೇಷಗಳು ಕೆಳಗೆ ಬಿದ್ದ ಪರಿಣಾಮ ರವಿ ಗೋಪಾಲ್ ಸೇರಿದಂತೆ ನಾಲ್ವರು ವಿದೇಶಿ ಕಾರ್ಮಿಕರು ಗಾಯಗೊಂಡಿದ್ದರು

ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ತಡೆಯುವ ವೇಳೆ, ಕ್ಷಿಪಣಿಯ ಅವಶೇಷಗಳು ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉತ್ತರ ಪ್ರದೇಶ ಮೂಲದ ಭಾರತೀಯ ಕಾರ್ಮಿಕ ಮೃತಪಟ್ಟಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ರವಿ ಗೋಪಾಲ್ ಎಂದು ಗುರುತಿಸಲಾಗಿದೆ. ಮಾರ್ಚ್ 18 ರಂದು ರಿಯಾದ್ ಮೇಲೆ ನಡೆದ ಕ್ಷಿಪಣಿ ದಾಳಿಯ ಸಂದರ್ಭದಲ್ಲಿ, ಸೌದಿ ರಕ್ಷಣಾ ಪಡೆಗಳು ಕ್ಷಿಪಣಿಯನ್ನು ಆಕಾಶದಲ್ಲೇ ಹೊಡೆದು ಉರುಳಿಸಿದ್ದವು. ಈ ವೇಳೆ ಅದರ ಅವಶೇಷಗಳು ರವಿ ಗೋಪಾಲ್ ಅವರ ಮೇಲೆ ಬಿದ್ದಿದೆ. ರವಿ ಗೋಪಾಲ್ ಅವರು ರಿಯಾದ್‌ನ ‘ನ್ಯೂ ಸನಾಯಿಯ’ ಎಂಬಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಮಾರ್ಚ್ 18 ರಂದು ರಿಯಾದ್‌ನ ಕೈಗಾರಿಕಾ ನಗರಿಯನ್ನು ಗುರಿಯಾಗಿಸಿಕೊಂಡು ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಆಗಮಿಸಿದೆ. ಇವುಗಳನ್ನು ಸೌದಿ ವಾಯು ರಕ್ಷಣಾ ಪಡೆ ಯಶಸ್ವಿಯಾಗಿ ತಡೆಹಿಡಿದಿತ್ತು. ಕ್ಷಿಪಣಿ ಅವಶೇಷಗಳು ಕೆಳಗೆ ಬಿದ್ದ ಪರಿಣಾಮ ರವಿ ಗೋಪಾಲ್ ಸೇರಿದಂತೆ ನಾಲ್ವರು ವಿದೇಶಿ ಕಾರ್ಮಿಕರು ಗಾಯಗೊಂಡಿದ್ದರು. ರವಿ ಅವರು ತಾವು ವಾಸವಿದ್ದ ಕಟ್ಟಡದ ಮೇಲೆ ನಿಂತಿದ್ದಾಗ ಈ ಅವಘಡ ಸಂಭವಿಸಿದೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಯಿತಾದರೂ, ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ರಾಯಭಾರ ಕಚೇರಿ ಸಂತಾಪ:
ರವಿ ಗೋಪಾಲ್ ಅವರ ನಿಧನಕ್ಕೆ ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೃತರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಈ ದುರದೃಷ್ಟಕರ ಘಟನೆಯಿಂದ ನಮಗೆ ತೀವ್ರ ದುಃಖವಾಗಿದೆ. ಮೃತರ ಕುಟುಂಬಕ್ಕೆ ನೆರವಾಗಲು ಮತ್ತು ಮೃತದೇಹವನ್ನು ತಾಯ್ನಾಡಿಗೆ ಕಳುಹಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ರಾಯಭಾರ ಕಚೇರಿ ಕಾರ್ಯನಿರ್ವಹಿಸುತ್ತಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೌದಿ ರಕ್ಷಣಾ ಸಚಿವಾಲಯವೂ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಗಾಯಗೊಂಡ ಇತರ ಕಾರ್ಮಿಕರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖಚಿತಪಡಿಸಿದೆ.