ಕೋಝಿಕ್ಕೋಡ್ |ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಯೆಮೆನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಬಿಡುಗಡೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ದ್ವೇಷಪೂರಿತ ಬರಹಗಳನ್ನು ಹರಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಆರ್ಜೆಡಿ ರಾಷ್ಟ್ರೀಯ ಮಂಡಳಿ ಸದಸ್ಯ ಸಲೀಂ ಮಡವೂರ್ ಅವರು ಡಿಜಿಪಿ ರವತ ಚಂದ್ರಶೇಖರ್ ಅವರಿಗೆ ದೂರು ನೀಡಿದ್ದಾರೆ.
ಕೊಲೆಯಾದ ತಲಾಲ್ ಅಬ್ದುಲ್ ಮಹ್ದಿ ಅವರ ಸಹೋದರ ಅಬ್ದುಲ್ ಫತ್ತಾಹ್ ಮಹ್ದಿ ಅವರ ಫೇಸ್ಬುಕ್ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಮತ್ತು ತಲಾಲ್ ಅವರ ಸಂಬಂಧಿಕರನ್ನು ಸಂದರ್ಶಿಸುವ ಮೂಲಕ ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೇರಳ ಮೂಲದ ಮುಬಾರಕ್ ರಾವತರ್ ಎಂಬ ವ್ಯಕ್ತಿ ತಲಾಲ್ ಗ್ರಾಮಸ್ಥರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಡಿಜಿಪಿ ರಾವತ್ ಚಂದ್ರಶೇಖರ್ ಅವರು, ಸ್ವೀಕರಿಸಿದ ದೂರನ್ನು ಕ್ರಮಕ್ಕಾಗಿ ಮೇಲ್ವಿಚಾರಣಾ ಸಮಿತಿಗೆ ರವಾನಿಸಲಾಗಿದೆ.
ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಪಾಲಕ್ಕಾಡ್ ಮೂಲದ ನಿಮಿಷಪ್ರಿಯ ಅವರ ಗಲ್ಲುಶಿಕ್ಷೆಯು ನಿನ್ನೆ ಜಾರಿಯಾಗಬೇಕಿದ್ದು, ಭಾರತೀಯ ಗ್ರಾಂಡ್ ಮುಪ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಯೆಮೆನ್ನ ಉನ್ನತ ಸೂಫೀ ವಿದ್ವಾಂಸರ ಮೂಲಕ ಮಧ್ಯಪ್ರವೇಶಿಸಿ ತ್ವರಿತ ಚರ್ಚೆಗಳ ಮೂಲಕ ಗಲ್ಲುಶಿಕ್ಷೆ ಜಾರಿಗೊಳಿಸುವುದನ್ನು ಮುಂದೂಡಲಾಯಿತು. ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯಸ್ಥಿಕೆಯನ್ನು ಉಲ್ಲೇಖಿಸಿ ಯೆಮೆನ್ನ ಪ್ರಮುಖ ಪತ್ರಿಕೆಗಳಾದ yemenownews, almashhad, msdernet ಮುಂತಾದವುಗಳು ಈ ವರದಿಯನ್ನು ಪ್ರಕಟಿಸಿದೆ.
ಭಾರತ ಸರ್ಕಾರವು ಸುಪ್ರೀಂಕೋರ್ಟ್ ಮೂಲಕ ತನ್ನ ಮಿತಿಯನ್ನು ದಾಟಿದೆ ಇನ್ನು ಸಾಧ್ಯವಿಲ್ಲ ಎಂದಿದೆ. ಈ ರೀತಿ ಎಲ್ಲಾ ಮೂಲಗಳಿಂದಲೂ ಅಸಹಾಯಕತೆ ವ್ಯಕ್ತಗೊಂಡು ಗಲ್ಲುಶಿಕ್ಷೆಯಿಂದ ತಪ್ಪಿಸಲು ಯಾವುದೇ ದಾರಿಯಿಲ್ಲ ಎಂಬ ನೆಲೆಯಲ್ಲಿದ್ದ ನಿಮಿಷಪ್ರಿಯ ಪ್ರಕರಣಕ್ಕೆ ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು ಮೃತ ತಲಾಲ್ ಕುಟುಂಬದೊಂದಿಗೆ ಚರ್ಚೆಗೆ ಅವಕಾಶವನ್ನು ಕಲ್ಪಿಸಿಕೊಟ್ಟರು.
ತಮ್ಮ ಚಿರಕಾಲ ಪರಿಚಿತರಾದ ಕೇರಳಕ್ಕೆ ಹಲವು ಬಾರಿ ಭೇಟಿ ನೀಡಿರುವ ವಿಶ್ವ ವಿಖ್ಯಾತ ಸೂಫೀ ವಿದ್ವಾಂಸರಾದ ಯಮನಿನ ಶೈಖ್ ಹಬೀಬ್ ಉಮರ್ ಬಿನ್ ಹಫೀಝ್ ಅವರನ್ನು ಸಂಪರ್ಕಿಸಿ, ಧಾರ್ಮಿಕ ನೆಲೆಯಲ್ಲಿ ಹಂತಕರಿಗೆ ನೀಡಬಹುದಾದ ವಿನಾಯಿತಿ ಬಗ್ಗೆ ಮೃತರ ಕುಟುಂಬದೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸುವಂತೆ ಕೋರಿದರು. ಕಾಂತಪುರಂ ಉಸ್ತಾದರ ಕೋರಿಕೆಗೆ ಕೂಡಲೇ ಸ್ಪಂದಿಸಿದ ಶೈಖ್ ಹಬೀಬ್, ಗಲ್ಲುಶಿಕ್ಷೆಗೆ ಎರಡೇ ದಿನಗಳು ಬಾಕಿ ಉಳಿದಿರುವುದನ್ನು ಮನಗಂಡು ಮೃತರ ಕುಟುಂಬ ಹಾಗೂ ಬುಡಕಟ್ಟು ಜನಾಂಗದವರನ್ನು ಒಗ್ಗೂಡಿಸಿ ತ್ವರಿತ ಚರ್ಚೆ ನಡೆಸಿ, ಗಲ್ಲುಶಿಕ್ಷೆ ದಿನಾಂಕವನ್ನು ಮುಂದೂಡುವಲ್ಲಿ ಸಫಲರಾದರು.
ಇಸ್ಲಾಮಿಕ್ ಶರೀಅತ್ ಕಾನೂನಿನಡಿಯಲ್ಲಿ ಗಲ್ಲುಶಿಕ್ಷೆ ವಿಧಿಸಲ್ಫಟ್ಟ ಹಂತಕರಿಗೂ ದಿಯಾ’ಧನವನ್ನು ಸ್ವೀಕರಿಸಿ ಕ್ಷಮಾದಾನ ನೀಡುವ ಮಹತ್ವದ ಬಗ್ಗೆ ಮೃತ ತಲಾಲ್ ಕುಟುಂಬಕ್ಕೆ ನಯವಾಗಿ ಮನವರಿಕೆ ಮಾಡಿಕೊಟ್ಟು, ನಿಮಿಷಪ್ರಿಯ ಅವರನ್ನು ಗಲ್ಲುಶಿಕ್ಷೆಯಿಂದ ಪಾರುಮಾಡಲು ಅಲ್ಲಿನ ಉನ್ನತ ಉಲಮಾ ನೇತೃತ್ವವು ತೀವ್ರವಾಗಿ ಪ್ರಯತ್ನಿಸುವ ಮಧ್ಯೆ ಕೇರಳದ ಕೆಲವು ಕಿಡಿಗೇಡಿಗಳು ಅದಕ್ಕೆ ಅಡ್ಡದಾರಿ ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಇದು ಕೇರಳಕ್ಕೆ ಮಾತ್ರವಲ್ಲದೆ ಇಡೀ ಭಾರತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ.
ಇದರಲ್ಲಿ ಕೆಲವರು ಇಂಡಿಯನ್ ಗ್ರ್ಯಾಂಡ್ ಮುಫ್ತಿಯ ಮಧ್ಯಸ್ಥಿಕೆಯನ್ನು ಸಹಿಸಲಾಗದೆ, ಚಟಪಡಿಸುವವರೂ ಇದ್ದಾರೆ. ಇಷ್ಟು ವರ್ಷಗಳಿಂದ ನಿಮಿಷಪ್ರಿಯ ಸೇವಿಂಗ್ ಸಮಿತಿಯನ್ನು ರೂಪೀಕರಿಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ, ಮೃತ ತಲಾಲ್ ಕುಟುಂಬವನ್ನು ಸಂಪರ್ಕಿಸಲು ಈವರೆಗೆ ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಕಾಂತಪುರಂ ಉಸ್ತಾದರ ಮೂಲಕ ಅದು ಸಾಧ್ಯವಾಗಿರುವುದನ್ನು ಅರಗಿಸಿಕೊಳ್ಳಲಾಗದೆ, ನಿಮಿಷಪ್ರಿಯ ಬದುಕುಳಿಯದಿದ್ದರೂ ಪರವಾಗಿಲ್ಲ, ಉಸ್ತಾದರ ಶ್ರಮ ವಿಫಲವಾಗಬೇಕೆಂದು ಪಟತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ದ್ವೇಷ ಪ್ರರಚಾರದಲ್ಲಿ ತೊಡಗಿದ್ದಾರೆ.
ಏತನ್ಮಧ್ಯೆ, ತಲಾಲ್ ಕುಟುಂಬದೊಂದಿಗೆ ಚರ್ಚೆಗಳು ಮುಂದುವರಿದಿದ್ದು, ಪ್ರಜ್ಞಾವಂತ ಕೇರಳೀಯ ನಾಗರಿಕರು ಶುಭ ನಿರೀಕ್ಷೆಯಲ್ಲಿದ್ದಾರೆ.







