janadhvani

Kannada Online News Paper

“ಹೃದಯ ಹೃದಯಗಳನ್ನು ಬೆಸೆಯೋಣ”:ಕರಾವಳಿ ನೆಲದಲ್ಲಿ ಸೌಹಾರ್ದ ಸಂಚಾರ

ಕೃಷಿ, ಕೈಗಾರಿಕೆ, ಮೀನುಗಾರಿಕೆ, ಶಿಕ್ಷಣ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಮೇಲೇರುತ್ತಲೇ ಇರುವ ನಾಡು, ಮಾನವೀಯತೆಯ ವಿಷಯದಲ್ಲಿ ಮಾತ್ರ ಬಡವಾಗುತ್ತಿದೆ.

ಉಡುಪಿ : ಸುನ್ನೀ ಯುವಜನ ಸಂಘ'(SYS) ವತಿಯಿಂದ ಸೌಹಾರ್ದ ಸಂಚಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು SYS ಉಡುಪಿ ಜಿಲ್ಲಾ ಝೋನ್ ಪ್ರಕಟನೆಯಲ್ಲಿ ತಿಳಿಸಿದೆ.
ಒಂದು ಕಾಲದಲ್ಲಿ ಶಾಂತಿ, ಸೌಹಾರ್ದತೆಯ ಸಂಕೇತವಾಗಿದ್ದ ಕರಾವಳಿ ಕರ್ನಾಟಕದಲ್ಲಿ ಈಗ
ಹಲ್ಲೆ, ಹತ್ಯೆಗಳು ಸಾಮಾನ್ಯವಾಗುತ್ತಿದೆ. ಯಾರೂ ಯಾರನ್ನೂ ನಂಬಲಾಗದಂತೆ ಆತಂಕ ಕವಿದಿದೆ. ಕೃಷಿ, ಕೈಗಾರಿಕೆ, ಮೀನುಗಾರಿಕೆ, ಶಿಕ್ಷಣ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಮೇಲೇರುತ್ತಲೇ ಇರುವ ನಾಡು, ಮಾನವೀಯತೆಯ ವಿಷಯದಲ್ಲಿ ಮಾತ್ರ ಬಡವಾಗುತ್ತಿದೆ. ಮನುಷ್ಯ ಮನಸ್ಸುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ಜಾತಿ ಮತ ಪಥ ಪಂಥ ಪಕ್ಷ ಪಂಗಡಗಳ ಹೆಸರಿನಲ್ಲಿ ಪರಸ್ಪರ ಮಾಂಸ ಕೀಳುವ , ರಕ್ತ ಹರಿಸುವ, ಒಬ್ಬರನ್ನೊಬ್ಬರು ಕೊಲ್ಲುವ ತನಕ ವೈರ, ವಿದ್ವೇಷಗಳು ಮಿತಿ ಮೀರಿವೆ. ಇದಕ್ಕೊಂದು ಇತಿಶ್ರೀ ಹಾಕುವ ಉದ್ದೇಶದಿಂದ ಸುನ್ನೀ ಯುವಜನ ಸಂಘ (SYS) ವತಿಯಿಂದ ಸೌಹಾರ್ದ ಸಂಚಾರವನ್ನು ಹಮ್ಮಿಕೊಳ್ಳಲಾಗಿದೆ.

ಮನುಷ್ಯರೆಲ್ಲರ ಜೀವ ಒಂದೇ. ರಕ್ತ ಮಾಂಸಗಳೆಲ್ಲ ಒಂದೇ. ಉಸಿರಿರುವ ತನಕ ಬಡಿಯುತ್ತಲೇ ಇರುವ ಹೃದಯ ಒಂದೇ. ಒಬ್ಬರನ್ನೊಬ್ಬರು ಅರಿತು, ಬೆರೆತು ಬದುಕಿದರೆ ಮಾತ್ರ ಸ್ವಸ್ಥ ಜೀವನ ಸಾಧ್ಯ. ಮತ ಪಥಗಳು ಭಿನ್ನವಾದರೂ ಎಲ್ಲರನ್ನೂ ಮನುಷ್ಯರನ್ನಾಗಿ ಕಾಣುವ ಹೃದಯವಂತಿಕೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮನುಷ್ಯರನ್ನು ಜೊತೆ ಸೇರಿಸುವ, ಹೃದಯ ಹೃದಯಗಳನ್ನು ಬೆಸೆದು ಸಾಗುವ ಕಾರ್ಯಕ್ರಮವನ್ನು SYS ಹಮ್ಮಿಕೊಂಡಿದೆ.

ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬೌದ್ದಾದಿ ವಿವಿಧ ಜಾತಿ ಮತಗಳಿಗೆ ಸೇರಿದ ಸರ್ವ ಜನರೂ ಒಗ್ಗೂಡಿ, ಕೈ ಕೈ ಹಿಡಿದು ಸಾಗುವ ಕಾರ್ಯಕ್ರಮವಿದು. ‘ನಾವೆಲ್ಲ ಒಂದು, ನಾವೆಲ್ಲ ಬಂಧು’ ಎಂದು ಸಮಾಜದ ಮುಂದೆ ಸಾರುತ್ತಾ ಸಾಗುವ ಮಾನವತೆಯ ಸಂಚಾರ. ಜುಲೈ 14 15 16 ದಿನಾಂಕಗಳಲ್ಲಿ ಕರಾವಳಿಯ ನೆಲದಲ್ಲಿ ಪ್ರೀತಿ, ವಿಶ್ವಾಸ, ಸಹಬಾಳ್ವೆಯ ವ್ಯಕ್ತಿ ಹೆಜ್ಜೆಗಳನ್ನು ಇಟ್ಟು ಮುನ್ನಡೆಯಲಿದ್ದು, ಜುಲೈ 14 ರಂದು ಉಡುಪಿ ಜಿಲ್ಲಾ ಸೌಹಾರ್ದ ಸಂಚಾರವು ಮಧ್ಯಾಹ್ನ 12.00 ಗಂಟೆಯ ವೇಳೆ ಉಡುಪಿ ಮೂಲಕ ಜಾಥ ಸಾಗಲಿದೆ.

ಸೋಮವಾರ ಮಧ್ಯಾಹ್ನ 12.15 ವೇಳೆ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಮಧ್ಯಾಹ್ನ 1ಗಂಟೆ ವೇಳೆ ಉಡುಪಿ ಜಾಮಿಯಾ ಮಸೀದಿ ಆವರಣದಲ್ಲಿ
ಸೌಹಾರ್ದ ಸಂದೇಶ ಕಾರ್ಯಕ್ರಮ ನಡೆಯಲಿದೆ. ಬಳಿಕ ಉಡುಪಿ ಮದರ್ ಸೋರೋಸ್ ಚರ್ಚ್ ರಸ್ತೆಯ ಮೂಲಕ ಸೌಹಾರ್ದ ಸಂಚಾರ ಹಾದುಹೋಗಲಿದೆ. ಕಾರ್ಯಕ್ರಮಕ್ಕೆ ಸರ್ವ ಧರ್ಮದ ಪಂಡಿತರು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ನಾಯಕರು ಹಾಗೂ ಸರ್ವರೂ ಪಾಲ್ಗೊಳ್ಳುತ್ತಿದ್ದು, SYS ಉಡುಪಿ ಝೋನ್ ನಾಡಿನ ಎಲ್ಲರನ್ನೂ ಆಹ್ವಾನಿಸುತ್ತಿದೆ.