ಧಾರವಾಡ: ಇಲ್ಲಿನ ನುಗ್ಗಿಕೆರಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಮುಸ್ಲಿಮರಿಗೆ ಸೇರಿದ್ದ ಅಂಗಡಿಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಶನಿವಾರ ಧ್ವಂಸಗೊಳಿಸಿದ್ದರಿಂದ ಸ್ಥಳದಲ್ಲಿ ಭಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಹಲವು ವರ್ಷಗಳಿಂದ ಹೂವು, ಹಣ್ಣು ಕಾಯಿ ಹಾಗೂ ಕಲ್ಲಂಗಡಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದ ಮುಸ್ಲಿಮರಿಗೆ ಸೇರಿದ್ದ ನಾಲ್ಕು ಅಂಗಡಿಗಳಿಗೆ ನುಗ್ಗಿದ ಶ್ರೀರಾಮ ಸೇನೆ ಕಾರ್ಯಕರ್ತರು ಅಲ್ಲಿದ್ದ ವಸ್ತುಗಳನ್ನು ಬೀದಿಗೆ ಎಸೆದಿದ್ದಾರೆ.
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಗುಂಪನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಪರ್ಯಾಯಸ್ಥ ನರಸಿಂಹಸ್ವಾಮಿ ದೇಸಾಯಿ, ‘ಇಲ್ಲಿ ಬಡ ಕುಟುಂಬಗಳಿಗೆ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿದೆ. ಇದರಲ್ಲಿ ಶೇ 99ರಷ್ಟು ಜನ ಹಿಂದೂಗಳೆ ಇದ್ದಾರೆ. ಘಟನೆ ಕುರಿತು ಇತರ ಪರ್ಯಾಯಸ್ತರು ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.