ದೇಶದ ರಾಜಧಾನಿಯಲ್ಲಿ ಹೆಮ್ಮೆಯಿಂದ ತಲೆಯೆತ್ತಿ ನಿಂತಿರುವ, ಐದು ನೂರು ವರ್ಷಗಳಷ್ಟು ಹಳೆಯದಾದ ದೆಹಲಿಯ ಜಮಾ ಮಸೀದಿಯು ಕುಸಿಯುವ ಭೀತಿಯಲ್ಲಿದೆ. ಮಳೆಗೆ ಸೋರುವ ರೀತಿಯಲ್ಲಿ ಮೇಲ್ಛಾವಣಿಗಳಲ್ಲೂ ಗುಮ್ಮಟಗಳಲ್ಲೂ ಬಿರುಕುಬಿಟ್ಟಿದೆ. ಮಿನಾರಗಳಿಂದ ಕಲ್ಲುಗಳು ಉದುರಿ ಬೀಳುತ್ತಿವೆ. ಕೂಡಲೇ ಆರ್ಥಿಕ ನೆರವು ನೀಡುವಂತೆ ಪ್ರಧಾನಿಗೆ ಮನವಿ ಮಾಡಲಾಗಿದೆ ಆದರೂ, ದುರಸ್ತಿ ಕಾರ್ಯದ ಹೊಣೆ ಹೊತ್ತಿರುವ ಕೇಂದ್ರ ಸರ್ಕಾರವೋ, ಪ್ರಾಚೀನ ವಸ್ತುಗಳ ಇಲಾಖೆಯೋ ಈ ವರೆಗೆ ತಿರುಗಿ ನೋಡಿಲ್ಲ.
ಮಸೀದಿಯ ಸ್ಥಿತಿ ತುಂಬಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ , ಶಾಹಿ ಇಮಾಮ್ ಅಹ್ಮದ್ ಅಲ್-ಬುಖಾರಿ ಅವರ ಮನವಿಯ ಮೇರೆಗೆ ದೆಹಲಿಯ ವಕ್ಫ್ ಮಂಡಳಿಯ ಅಧ್ಯಕ್ಷ ಎ.ಎಚ್.ಅಮನತುಲ್ಲಾ ಖಾನ್ ಮಸೀದಿಯನ್ನು ಪರಿಶೀಲಿಸಲು ಎಂಜಿನಿಯರ್ಗಳೊಂದಿಗೆ ಆಗಮಿಸಿದರು. ಮಸೀದಿಯ ಹಲವು ಭಾಗಗಳಿಂದ ಉದುರಿ ಬೀಳುತ್ತಿರುವ ಕಾರಣ ವಿದೇಶಿಯರೂ ಸೇರಿದಂತೆ ಪ್ರವಾಸಿಗರಿಗೆ ಭಾರೀ ಅಪಾಯವಿದೆ ಎಂದು ಶಾಹಿ ಇಮಾಮ್ ಎಚ್ಚರಿಸಿದರು.
ಪುನರ್ವಸತಿ ಮತ್ತು ನಿರ್ವಹಣೆಯ ಹೊಣೆಗಾರಿಕೆ ಕೇಂದ್ರ ಸರ್ಕಾರ ಮತ್ತು ಪ್ರಾಚೀನ ವಸ್ತುಗಳ ಇಲಾಖೆಯ ಮೇಲಿರುವುದರಿಂದ ಅಖಿಲ ಭಾರತ ಮಜ್ಲಿಸ್ ಎ ಮುಶಾವರ ಅಧ್ಯಕ್ಷ ನವೈದ್ ಹಾಮಿದ್ ಪ್ರಧಾನ ಮಂತ್ರಿಯವರ ಗಮನ ಸೆಳೆದು ಪತ್ರ ಬರೆದಿದ್ದರು. ಗೋಪುರ, ಗುಮ್ಮಟಗಳು ಮತ್ತು ಮೇಲ್ಛಾವಣಿಯ ಕೆಲವು ಭಾಗಗಳು ಉದುರಿ ಬೀಳಲಾರಂಭಿಸಿದ ಕಾರಣ ಪತ್ರ ಬರೆಯುತ್ತಿರುವದಾಗಿ ಉಲ್ಲೇಖಿಸಿದ್ದರು.
ಜಾಮಾ ಮಸೀದಿಯು ರಾಷ್ಟ್ರೀಯ ಪರಂಪರೆ ಮಾತ್ರವಲ್ಲದೆ ವಿದೇಶೀ ಆಡಳಿತಾಧಿಕಾರಿಗಳು, ಪ್ರತಿನಿಧಿಗಳು ನಿರಂತರ ಭೇಟಿ ನೀಡುವ ಪವಿತ್ರ ಸ್ಥಳವಾಗಿದೆ ಎಂದು ಪತ್ರದಲ್ಲಿ ಗಮನ ಸೆಳೆದಿದ್ದರು. 1956 ರಿಂದ, ಜಮಾ ಮಸೀದಿಯ ಕಾರ್ಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಕೇಂದ್ರ ಸರ್ಕಾರವಾಗಿದೆ.
ಜಮಾ ಮಸೀದಿಯ ಎಲ್ಲಾ ದುರಸ್ತಿ ಕೆಲಸಗಳನ್ನು ಪೂರ್ಣಗೊಳಿಸಿ, ಮಸೀದಿಯ ಘನತೆಯು ನೆಲೆನಿಲ್ಲುವಂತೆ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಸೌದಿ ಅರೇಬಿಯಾ 2004 ರಲ್ಲಿ ಭರವಸೆ ನೀಡಿತ್ತು,ಆದರೆ, ಜಮಾ ಮಸೀದಿಯ ಭಾವನಾತ್ಮಕ ಪರಿಣಾಮವನ್ನು ಪರಿಗಣಿಸಿ, ಅಂದಿನ ಕೇಂದ್ರ ಸರ್ಕಾರ ಸೌದಿ ಅರೇಬಿಯಾದ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು ಎಂದು ನವೈದ್ ಹಾಮಿದ್ ನೆನೆಪಿಸಿದರು. ನವೀಕರಣ ಮತ್ತು ಆಧುನೀಕರಣಕ್ಕೆ 100 ಕೋಟಿ ರೂ. ತಕ್ಷಣದ ಆರ್ಥಿಕ ನೆರವು ನೀಡುವಂತೆಯೂ ಅವರು ಆಗ್ರಹಿಸಿದ್ದಾರೆ.







