janadhvani

Kannada Online News Paper

ಕತ್ತರ್ ಕೆಸಿಎಫ್ – ವಿವಿಧೆಡೆಗಳಲ್ಲಿ ಅರಫಾ ಸಂಗಮ ಅಧ್ಯಯನ ಶಿಬಿರ

ಅರಫಾ ಸಂಗಮವು ಪ್ರವಾದಿಯವರ ಅಮರ ವಿಶ್ವಾಸದ ನೆನಪಿನ ಪುನರಾವರ್ತನೆಯಾಗಿದೆಯಲ್ಲದೆ, ಮನುಕುಲಕ್ಕೆ ನೀಡುವ ಉದಾತ್ತವಾದ ಸಂದೇಶವೂ ಕೂಡಾ ಆಗಿದೆ ಎಂದು ಹಾಫಿಲ್ ಮುಬಾರಕ್ ಸಖಾಫಿಯವರು ಹೇಳಿದರು. ಅವರು ಕೆಸಿಎಫ್ ಸಂಘಟನೆಯು ಕತ್ತರ್ ರಾಷ್ಟ್ರದಾದ್ಯಂತ ಹಮ್ಮಿಕೊಂಡಿರುವ ಅರಫಾ ಸಂಗಮ ಮತ್ತು ಉಳುಹಿಯತ್ ಬಗ್ಗೆ ಅಧ್ಯಯನ ಶಿಬಿರದ ನೇತೃತ್ವ ವಹಿಸಿ ಮಾತನಾಡಿದರು.

ಪವಿತ್ರ ಹಜ್ ಯಾತ್ರೆಯು ಇಸ್ಲಾಮಿನ ಪ್ರಾಥಮಿಕ ಕರ್ಮಗಳಲ್ಲೊಂದಾಗಿದ್ದು, ಈ ತಿಂಗಳಲ್ಲಿ ಲಕ್ಷಾಂತರ ಹಜ್ಜಾಜ್ ಗಳು ಮಕ್ಕಾ ನಗರಿಯತ್ತ ಸಾಗುತ್ತಿರುವಾಗ, ಅರಫಾ ಸಂಗಮ ಮತ್ತು ಉಲಳುಹಿಯತ್ ಎಂಬ ವಿಷಯದಲ್ಲಿ ಕೆಸಿಎಫ್ ಕತ್ತರ್ ಸಮಿತಿಯು ವಿವಿಧೆಡೆಗಳಲ್ಲಿ ಅಧ್ಯಯನ ಶಿಬಿರಗಳನ್ನು ಏರ್ಪಡಿಸಿತ್ತು.

ದೋಹಾ ವಲಯದ ಶಿಬಿರವು, ಕೆಸಿಎಫ್ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಮುನೀರ್ ಮಾಗುಂಡಿ ಯವರ ಅಧ್ಯಕ್ಷತೆಯಲ್ಲಿ ಆಗಸ್ಟ್ 10 ರಂದು ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ನಡೆಯಿತು. ಕೆಸಿಎಫ್ ಜೋನ್ ನೇತಾರರಾದ ಸಿದ್ದೀಕ್ ಹಂಡುಗುಳಿಯವರು ಸ್ವಾಗತಿಸಿ, ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಯೂಸುಫ್ ಸಖಾಫಿ ಯವರು ಉದ್ಘಾಟಿಸಿದ ಈ ಶಿಬಿರದಲ್ಲಿ ಬಹು ಅಬ್ದುಲ್ ರಹಿಮಾನ್ ನಈಮಿ ಯವರು ವಿಚಾರಗೋಷ್ಠಿ ನಡೆಸಿದರು. ಅರಫಾ ಮತ್ತು ಅಲ್ಲಿನ ಚಾರಿತ್ರಿಕ ಘಟನೆಗಳನ್ನು ಸಮಗ್ರ ರೀತಿಯಲ್ಲಿ ವಿವರಿಸುತ್ತಾ ಉಳುಹಿಯತ್ ಬಗ್ಗೆ ಪ್ರಶ್ಣೋತ್ತರ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಪ್ರಶ್ನೆಗಳಿಗೆ ಉದಾಹರಣೆಗಳೊಂದಿಗೆ ಉತ್ತರಿಸಿದರು. ರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಮಿರ್ಶಾದ್ ಕನ್ಯಾನ ಇವರು ಕಾರ್ಯಕ್ರಮ ವನ್ನು ನಿರೂಪಿಸಿ ಅಕ್ಬರ್ ದೇರಳಕಟ್ಟೆ ಇವರು ವಂದನಾರ್ಪಣೆ ನಡೆಸಿದರು.

ಅಝೀಝಿಯಾ ವಲಯದ ಕಾರ್ಯಕ್ರಮವು ಸನಯ್ಯಾ ಅಲ್-ಅತ್ತಿಯ್ಯ ೧೭ ರ ಕ್ಯಾಬಿನ್ ಮಸ್ಜಿದ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಆಗಸ್ಟ್ 16 ರಂದು ಇಶಾ ನಮಾಝಿನ ಬಳಿಕ ಪ್ರತೀ ತಿಂಗಳು ನಡೆಯುತ್ತಿರುವ ಸ್ವಲಾತ್ ಮಜ್ಲಿಸ್ ಬಳಿಕ ನಡೆದ ಕಾರ್ಯಕ್ರವು ಕೆಸಿಎಫ್ ಅಝೀಝಿಯಾ ಝೋನ್ ನ ಅಧ್ಯಕ್ಷರಾದ ಬಹು. ಖಾಲಿದ್ ಹಿಮಮಿ ಉಸ್ತಾದ್ ರವರ ಅದ್ಯಕ್ಷತೆಯಲ್ಲಿ ನಡೆಯಿತು. ರಾಷ್ಟ್ರೀಯ ಸಮಿತಿಯ ಸಂಘಟನಾ ಅಧ್ಯಕ್ಷರಾದ ಬಹು. ಯೂಸುಫ್ ಸಖಾಫಿ ಯವರು, ಸ್ವಲಾತ್ ಮಜ್ಲಿಸ್ ನ ನೇತೃತ್ವ ವಹಿಸಿಕೊಂಡು ಕೇರಳ ಹಾಗೂ ಕರ್ನಾಟಕದ ಕೆಲವು ಭಾಗ ಗಳಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ದುರಂತದ ಸಂತ್ರಸ್ತರಿಗೆ ಭಕ್ತಿ ನಿರ್ಭರವಾದ ದುಆ ಪ್ರಾರ್ಥನೆ ನಡೆಸಿ ಕೊಟ್ಟ ಬಳಿಕ ಅಧ್ಯಯನ ಶಿಬಿರವನ್ನು ಉದ್ಘಾಟಿಸಿದರು. ಹಾಫಿಳ್ ಮುಭಾರಕ್ ಸಖಾಫಿಯವರು ಅರಫಾ ಸಂಗಮದ ಬಗ್ಗೆ ಸಮಗ್ರವಾದ ತರಬೇತಿಯನ್ನು ನೀಡಿ ಉಳುಹಿಯತ್ ಮತ್ತು ಅದರ ನಿಯಮಗಳನ್ನು ವಿವರವಾಗಿ ಮನದಟ್ಟು ಮಾಡಿ ಕೊಟ್ಟರು. ಝೋನ್ ಪ್ರಧಾನ ಕಾರ್ಯದರ್ಶಿ ರಿಶಾದ್ ಮಧುವನರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಹಾಗೂ ಸಹಕರಿಸಿದ ಎಲ್ಲ ನಿಷ್ಠಾವಂತ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಆಗಸ್ಟ್ 17 ಶುಕ್ರವಾರ ಜುಮಾ ನಮಾಜಿನ ಬಳಿಕ ಮದೀನಾ ಖಲೀಫಾ ಜೋನ್ ಮಟ್ಟದ ಅಧ್ಯಯನ ಶಿಬಿರವು ಬಹು ನಿಜಾಮ್ ಸ ಅದಿ ಯವರ ಅಧ್ಯಕ್ಷತೆಯಲ್ಲಿ ಗರಾಫಾದಲ್ಲಿ ನಡೆಯಿತು. ಜೋನ್ ನ ಕಾರ್ಯದರ್ಶಿ ನಜೀರ್ ಮೂರ್ನಾಡ್ ರವರು ಸ್ವಾಗತಿಸಿ, ಹಾಫಿಲ್ ಮುಬಾರಕ್ ಸಖಾಫಿಯವರು ವಿಷಯ ಮಂಡಿಸಿದರು. ಜೊತೆಗೆ ಬಲಿದಾನದ ಸಂಕೇತವಾದ ಉಳುಹಿಯತ್ ಬಗ್ಗೆ ಸಮಗ್ರ ವಿವರಣೆ ನೀಡಿ, ಕಾರ್ಯಕರ್ತರ ಸಂಶಯಗಳಿಗೂ ಉತ್ತರ ನೀಡಿದರು. ರಾಷ್ಟ್ರೀಯ ಸಂಘಟನಾ ವಿಭಾಗದ ಕಾರ್ಯದರ್ಶಿ, ಹಾಗೂ ಪ್ರಸ್ತುತ ಜೋನ್ ನ ಕಂಟ್ರೋಲರ್ ಆದ ಫಾರೂಕ್ ಕೃಷ್ಣಾಪುರ ರವರು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಕನೆಯಲ್ಲಿ ಕೇರಳ ಹಾಗೂ ಕರ್ನಾಟಕದ ಕೆಲವು ಭಾಗ ಗಳಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳಿಂದ ನೊಂದ ಮನಸ್ಸುಗಳಿಗೆ ಬೇಕಾಗಿ ವಿಶೇಷ ಪ್ರಾರ್ಥನೆ ನಡೆಯಿತು.

ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಯವರಾದ ಹನೀಫ್ ಪಾತೂರು ಮತ್ತು ವಿವಿಧ ವಿಭಾಗಗಳ ನೇತಾರರಾದ ಸತ್ತಾರ್ ಅಶ್ರಫಿ, ಸಿದ್ದೀಕ್ ಕೃಷ್ಣಾಪುರ, ರಝಾಕ್ ಮುಂಡ್ಕೂರು, ಅಶ್ರಫ್ ವಳಚ್ಚಿಲ್, ಹಸನ್ ಪುಂಜಾಲಕಟ್ಟೆ, ಇಕ್ಬಾಲ್ ಪುಂಜಾಲಕಟ್ಟೆ ಮುಂತಾದವರ ಸಂಪೂರ್ಣ ಸಹಕಾರವು ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಲ್ಲಿ ಸಹಕಾರಿಯಾಗಿತ್ತು

error: Content is protected !! Not allowed copy content from janadhvani.com