janadhvani

Kannada Online News Paper

ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಶಾಫಿ ಸಅದಿ ಅವರಿಂದ ಸಚಿವರಿಗೆ ಮನವಿ

ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಹಾಗೂ ವಸತಿ ಮತ್ತು ವಕ್ಫ್ ಸಚಿವರಾದ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರಿಗೆ ಅಧಿಕೃತ ಮನವಿ ಸಲ್ಲಿಸಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪರಪ್ಪು ಗೇರುಕಟ್ಟೆ ನಿವಾಸಿ ಮುಹಮ್ಮದ್ ಶರೀಫ್ (35) ಎಂಬ ಯುವಕ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿನ ಉಪಾಧ್ಯಕ್ಷರಾದ ಮೌಲಾನಾ ಎನ್. ಕೆ. ಎಮ್. ಶಾಫಿ ಸಅದಿ ಅವರು ರಾಜ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಹಾಗೂ ವಸತಿ ಮತ್ತು ವಕ್ಫ್ ಸಚಿವರಾದ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರಿಗೆ ಅಧಿಕೃತ ಮನವಿ ಸಲ್ಲಿಸಿದ್ದಾರೆ.
ಘಟನೆಯ ಹಿನ್ನೆಲೆ:
ಮೃತ ಮುಹಮ್ಮದ್ ಶರೀಫ್ ಅವರು ತಮ್ಮ ಮನೆಯಲ್ಲಿ ಸಾಕಿದ್ದ ಹಸು ತಿವಿದ ಪರಿಣಾಮ ಸಣ್ಣಪುಟ್ಟ ಗಾಯಗೊಂಡು, ಮೊದಲು ಉಪ್ಪಿನಂಗಡಿಯ ಖಾಸಗಿ ಸೂರ್ಯ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಸೇರಿದಂತೆ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದರು. ಅಲ್ಲಿ ಯಾವುದೇ ಗಂಭೀರ ಅಪಾಯವಿಲ್ಲ ಎಂದು ತಿಳಿಸಿದ ವೈದ್ಯರು, ಔಷಧಿ ನೀಡಿ ಮನೆಗೆ ಕಳುಹಿಸಿದ್ದರು.
ಆದರೆ, ಮನೆಗೆ ಬಂದ ಬಳಿಕ ಶರೀಫ್ ಅವರಿಗೆ ಏಕಾಏಕಿ ಹೊಟ್ಟೆ ಉಬ್ಬರ ಹಾಗೂ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರನ್ನು ಮತ್ತೆ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಅಲ್ಲಿನ ಮೂಳೆ ಮತ್ತು ಕೀಲು ಚಿಕಿತ್ಸಾ ತಜ್ಞರಾದ ಡಾ. ರಾಜೇಶ್ ಭಟ್ ಅವರು, ಸಂಬಂಧಪಟ್ಟ ಇತರ ತಜ್ಞ ವೈದ್ಯರ ಯಾವುದೇ ಸಲಹೆ ಪಡೆಯದೇ ಸ್ವತಃ ಅನೀಮಾ (Enema) ಚಿಕಿತ್ಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ಈ ತಪ್ಪಾದ ಅಥವಾ ನಿರ್ಲಕ್ಷ್ಯದ ಚಿಕಿತ್ಸೆಯಿಂದಾಗಿ ಮುಹಮ್ಮದ್ ಶರೀಫ್ ಅವರ ಕರುಳಿಗೆ ಗಂಭೀರ ಹಾನಿಯಾಗಿದ್ದು, ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿಯೇ ಅವರನ್ನು ತುರ್ತಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲು ಮುಂದಾಗಿದ್ದರು. ಆದರೆ ಮಂಗಳೂರಿನ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳು ನಡೆದರೂ ಸಹ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 20-05-2026ರ ಬುಧವಾರ ಬೆಳಿಗ್ಗೆ ಶರೀಫ್ ಕೊನೆಯುಸಿರೆಳೆದಿದ್ದಾರೆ.
ಅನಾಥವಾದ ಕುಟುಂಬ – ಪೊಲೀಸ್ ದೂರು ದಾಖಲು:
ಮೃತ ಯುವಕ ಪತ್ನಿ ಹಾಗೂ ಮೂರು ಪುಟ್ಟ ಮಕ್ಕಳನ್ನು ಅಗಲಿದ್ದು, ವೈದ್ಯರ ಬೇಜವಾಬ್ದಾರಿತನದಿಂದ ಇಡೀ ಕುಟುಂಬ ಇಂದು ಬೀದಿಗೆ ಬಿದ್ದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್ (FIR) ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಸಚಿವರ ಭರವಸೆ:
ಈ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಮೌಲಾನಾ ಶಾಫಿ ಸಅದಿ ಅವರು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಸವಿಸ್ತಾರವಾದ ಮನವಿ ಪತ್ರ ಸಲ್ಲಿಸಿದ್ದಾರೆ. ಸಚಿವರ ಕಚೇರಿಯಿಂದ ಮನವಿಯನ್ನು ಸ್ವೀಕರಿಸಲಾಗಿದ್ದು, ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಆದೇಶಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಇದೇ ವೇಳೆ ರಾಜ್ಯ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಅವರ ಗಮನಕ್ಕೂ ಈ ವಿಷಯವನ್ನು ತರಲಾಗಿದ್ದು, ಅವರೂ ಸಹ ಸೂಕ್ತ ರೀತಿಯಲ್ಲಿ ಸ್ಪಂದಿಸುವ ವಾಗ್ದಾನ ಮಾಡಿದ್ದಾರೆ.
ಮನವಿಯಲ್ಲಿನ ಪ್ರಮುಖ ಬೇಡಿಕೆಗಳು:
1. ಯುವಕನ ಸಾವಿನ ಕುರಿತು ತಕ್ಷಣವೇ ಉನ್ನತ ಮಟ್ಟದ ವೈದ್ಯಕೀಯ ತನಿಖಾ ಸಮಿತಿ ರಚಿಸಬೇಕು.
2. ವೈದ್ಯಕೀಯ ನಿರ್ಲಕ್ಷ್ಯ ಸಾಬೀತಾದಲ್ಲಿ ಸಂಬಂಧಪಟ್ಟ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
3. ಅನಾಥವಾಗಿರುವ ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು.
4. ವಿಧವೆಯಾದ ಪತ್ನಿ ಮತ್ತು ಮೂರು ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ವಿಶೇಷ ಆರ್ಥಿಕ ನೆರವು ಹಾಗೂ ಪುನರ್ವಸತಿ ಯೋಜನೆಯನ್ನು ರೂಪಿಸಬೇಕು.
5. ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಇಂತಹ ವೈದ್ಯಕೀಯ ನಿರ್ಲಕ್ಷ್ಯ ಹಾಗೂ ದಗಲ್ಬಾಜಿತನವನ್ನು ತಡೆಗಟ್ಟಲು ರಾಜ್ಯ ಮಟ್ಟದಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣಾ ಕ್ರಮಗಳನ್ನು ಜಾರಿಗೆ ತರಬೇಕು.

“ಒಬ್ಬ ನಿರಪರಾಧಿ ಯುವಕನ ಸಾವಿನಿಂದ ಕಣ್ಣೀರಿಡುತ್ತಿರುವ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಮಾನವೀಯ ಮತ್ತು ಕಾನೂನುಬದ್ಧ ಕ್ರಮಗಳನ್ನು ಆದಷ್ಟು ಬೇಗ ಕೈಗೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ಮೌಲಾನಾ ಶಾಫಿ ಸಅದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ...