janadhvani

Kannada Online News Paper

ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ- ಅದೃಷ್ಟವಶಾತ್‌ ಪ್ರಯಾಣಿಕರು ಪಾರು..!

ರೈಲಿನ ಎಸಿ ಕೋಚ್ ಆದ 'ಬಿ-1' (B-1) ನಲ್ಲಿ ಮೊದಲಿಗೆ ದಟ್ಟವಾದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ.

ರತ್ಲಾಮ್ (ಮಧ್ಯಪ್ರದೇಶ): ಭಾನುವಾರ ಮುಂಜಾನೆ ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12431) ರೈಲಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರೈಲ್ವೆ ಸಿಬ್ಬಂದಿ ಹಾಗೂ ಸುರಕ್ಷತಾ ಪಡೆಗಳ ತ್ವರಿತ ಕಾರ್ಯಾಚರಣೆ ಮತ್ತು ಭಾರಿ ಸಮಯಪ್ರಜ್ಞೆಯಿಂದಾಗಿ ರೈಲಿನಲ್ಲಿದ್ದ ಎಲ್ಲಾ 68 ಪ್ರಯಾಣಿಕರನ್ನು ಕೇವಲ 15 ನಿಮಿಷಗಳಲ್ಲಿ ಸುರಕ್ಷಿತವಾಗಿ ಹೊರತರಲಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಭಾನುವಾರ ಮುಂಜಾನೆ ಸುಮಾರು 5:15 ರ ಸುಮಾರಿಗೆ ಪಶ್ಚಿಮ ಮಧ್ಯ ರೈಲ್ವೆಯ ಕೋಟಾ ವಿಭಾಗಕ್ಕೆ ಒಳಪಡುವ ವಿಕ್ರಮಗಢ್ ಅಲೋಟ್ ಮತ್ತು ಲುನಿರಿಚ್ಚಾ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರೈಲಿನ ಎಸಿ ಕೋಚ್ ಆದ ‘ಬಿ-1’ (B-1) ನಲ್ಲಿ ಮೊದಲಿಗೆ ದಟ್ಟವಾದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಗಾರ್ಡ್ ಲೋಕೋ ಪೈಲಟ್‌ಗೆ ಮಾಹಿತಿ ನೀಡಿ ರೈಲನ್ನು ಸ್ಥಗಿತಗೊಳಿಸಿದರು.
ಬೆಂಕಿಯ ಕೆನ್ನಾಲಿಗೆ ಬಿ-1 ಕೋಚ್ ಮಾತ್ರವಲ್ಲದೆ ಅದರ ಪಕ್ಕದಲ್ಲೇ ಇದ್ದ ಲಗೇಜ್ ಮತ್ತು ಗಾರ್ಡ್ ವ್ಯಾನ್ (SLR) ಗೂ ವ್ಯಾಪಿಸಿ ತೀವ್ರ ಹಾನಿ ಉಂಟುಮಾಡಿದೆ.

ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ರಕ್ಷಣಾ ಪಡೆ (RPF) ಮತ್ತು ರೈಲಿನ ತಾಂತ್ರಿಕ ಸಿಬ್ಬಂದಿ ಜಂಟಿಯಾಗಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ನಿದ್ರೆಯಲ್ಲಿದ್ದ ಪ್ರಯಾಣಿಕರನ್ನು ಎಚ್ಚರಿಸಿ, ಕೇವಲ 15 ನಿಮಿಷಗಳ ಅತ್ಯಲ್ಪ ಅವಧಿಯಲ್ಲಿ ಕೋಚ್‌ನಿಂದ ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಬೆಂಕಿ ಹೊತ್ತಿಕೊಂಡ ಬೋಗಿಯನ್ನು ತಕ್ಷಣವೇ ರೈಲಿನ ಇತರ ಭಾಗಗಳಿಂದ ಪ್ರತ್ಯೇಕಿಸಲಾಯಿತು (Detached) ಮತ್ತು ದುರಂತದ ತೀವ್ರತೆಯನ್ನು ಕಡಿಮೆ ಮಾಡಲು ರೈಲ್ವೆ ಮೇಲ್ಭಾಗದ ವಿದ್ಯುತ್ ಸಂಪರ್ಕವನ್ನು (OHE) ತಕ್ಷಣವೇ ಕಡಿತಗೊಳಿಸಲಾಯಿತು. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು.

ಬೆಂಕಿಗಿಡಾದ ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಕೋಟಾ ನಿಲ್ದಾಣದವರೆಗೆ ಪ್ರಯಾಣಿಸಲು ರೈಲಿನ ಇತರ ಬೋಗಿಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. “ಪ್ರಯಾಣಿಕರ ಅನುಕೂಲಕ್ಕಾಗಿ ಕೋಟಾ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಬೋಗಿಯೊಂದನ್ನು ಜೋಡಿಸಿ ರೈಲಿನ ಸಂಪೂರ್ಣ ಸಾಮರ್ಥ್ಯವನ್ನು ಮರುಸ್ಥಾಪಿಸಲಾಗುವುದು” ಎಂದು ಹಿರಿಯ ರೈಲ್ವೆ ವಾಣಿಜ್ಯ ವ್ಯವಸ್ಥಾಪಕ ಸೌರಭ್ ಜೈನ್ ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ದೆಹಲಿ-ಮುಂಬೈ ರೈಲು ಮಾರ್ಗದಲ್ಲಿ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದ್ದು, ಸುಮಾರು 5 ರಿಂದ 6 ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಪ್ರಯಾಣಿಕರ ಮಾಹಿತಿ ಮತ್ತು ನೆರವಿಗಾಗಿ ರೈಲ್ವೆ ಇಲಾಖೆಯು ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

ಘಟನಾ ಸ್ಥಳಕ್ಕೆ ರತ್ಲಾಮ್ ವಿಭಾಗದ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕರು (DRM) ಮತ್ತು ಅಪಘಾತ ಪರಿಹಾರ ರೈಲು (ART) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಘಟನೆಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ರೈಲ್ವೆ ಇಲಾಖೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿರಿ...