ಮಂಗಳೂರು, ಎ.18: ನಮ್ಮ ಹೋರಾಟ ಯಾವುದೇ ಧರ್ಮ ಅಥವಾ ರಾಜಕೀಯ ಪಕ್ಷಗಳ ವಿರುದ್ಧವಲ್ಲ, ಇದು ಮುಸಲ್ಮಾನರ ಆಸ್ತಿಯಾದ ವಖ್ಫ್ ಭೂಮಿಯನ್ನು ಸಂರಕ್ಷಣೆ ಮಾಡುವ ಹೋರಾಟವಾಗಿದೆ ಎಂದು ನಿಕಟಪೂರ್ವ ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷರಾದ ಉಲಮಾ ಕೋ ಆರ್ಡಿನೇಷನ್ ಕೋಶಾಧಿಕಾರಿ ಮೌಲಾನಾ ಎನ್ ಕೆ ಶಾಫಿ ಸಅದಿ ಹೇಳಿದರು. ವಖ್ಫ್ ತಿದ್ದುಪಡಿ ಕಾನೂನಿನ ಬಗ್ಗೆ ತಪ್ಪು ಸಂದೇಶಗಳನ್ನು ನೀಡಿ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿರುವ ಮಾಧ್ಯಮ ಸಂಪಾದಕರೇ ತಾವು ಪತ್ರಿಕೋದ್ಯಮ ನಡೆಸಿ ಹೊರತು ಕುಕೃತ್ಯೋದ್ಯಮಕ್ಕೆ ಮುಂದಾಗಬೇಡಿ ಎಂದು ಎಚ್ಚರಿಕೆ ನೀಡಿದರು.ಅವರು, ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಿತ ವಕ್ಫ್ ತಿದ್ದುಪಡಿ ಕಾನೂನು ವಿರುದ್ಧ ಇಂದು ಮಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು. ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್ನಲ್ಲಿ ಆಯೋಜಿಸಲಾದ ಪ್ರತಿಭಟನಾ ಸಮಾವೇಶಕ್ಕೆ ವಿವಿಧ ಕಡೆಗಳಿಂದ ಜನಸಾಗರವೇ ಹರಿದು ಬಂದಿದೆ.
ಬಿಸಿಲ ಝಳದ ನಡುವೆಯೂ ಜುಮಾ ನಮಾಜಿನ ಕೂಡಲೇ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದು, ಅಡ್ಯಾರ್ ಕಣ್ಣೂರು ಅಕ್ಷರಶಃ ಜನಸಾಗರದಂತಾಗಿ ಮಾರ್ಪಟ್ಟಿದೆ. ಆಯೋಜಕರ ನಿರೀಕ್ಷೆಗೂ ಮೀರಿದ ಜನ ಸಂದಣಿಯನ್ನು ನಿಯಂತ್ರಿಸಲು ಪೋಲೀಸ್ ಇಲಾಖೆಯೊಂದಿಗೆ ಸ್ವಯಂಸೇವಕರು ಸಾಥ್ ನೀಡಿದರು.ಅಪರಾಹ್ನ 4.30 ಕ್ಕೆ ಉಲಮಾ ಒಕ್ಕೂಟದ ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅವರ ದುಆದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಶೈಖುನಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು. ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿ ತೋಡಾರ್ ಉಸ್ಮಾನುಲ್ ಫೈಝಿ ಸ್ವಾಗತ ಭಾಷಣ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಅಬ್ದುನ್ನಾಸರ್ ಲಕ್ಕಿಸ್ಟಾರ್ ಮುನ್ನುಡಿ ಭಾಷಣ ಮಾಡಿದರು.
ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಅವರು ವಿಷಯ ಮಂಡನೆ ನಡೆಸುತ್ತಾ, ಮುಸ್ಲಿಮರನ್ನು ಪಂಚರ್ ಹಾಕುವವರೆಂದು ಅಪಹಾಸ್ಯ ಮಾಡುತ್ತಿರುವ ಮೋದಿಯವರು ಭಾರತದ ಸಂವಿಧಾನವನ್ನೇ ಪಂಚರ್ ಮಾಡಲು ಹೊರಟಿರುವುದು ವಿಪರ್ಯಾಸ ಎಂದರು. ಉಲಮಾಗಳನ್ನು ಮುಲ್ಲಾಗಳೆಂದು ಅಪಕೀರ್ತಿಗೊಳಿಸಲು ಹೊರಟವರು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಲ್ಲಾಗಳ ಬಗ್ಗೆ ನೆನಪಿಸಬೇಕು ಎಂದರು. ವಖ್ಫ್ ಭೂಮಿಯ ಒಂದಿಚನ್ನೂ ಕಬಳಿಸಲು ಬಿಡುವುದಿಲ್ಲ ಎಂದರು.
ಉಲಮಾ ಒಕ್ಕೂಟದ ನಿರ್ದೇಶಕರಾದ ಖಾಝಿ ಶೈಖುನಾ ಮಾಣಿ ಉಸ್ತಾದ್, ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ,ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಅಬ್ದುರ್ರಶೀದ್ ಝೈನಿ ಕಾಮಿಲ್, ರಫೀಖ್ ಹುದವಿ ಕೋಲಾರಿ, ಅನ್ವರ್ ಅಸ್ ಅದಿ ಚಿತ್ರದುರ್ಗ, ಕಾವಲ್ಕಟ್ಟೆ ಹಝ್ರತ್ ಮುಂತಾದವರು ಭಾಷಣ ಮಾಡಿದರು. ಕುಕ್ಕಿಲ ದಾರಿಮಿಯವರು ಪ್ರತಿಜ್ಞೆ ಭೋದಿಸಿದರು. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಠರಾವು ಮಂಡಿಸಿದರು.
ರಾಷ್ಟ್ರೀಯ ಹೆದ್ದಾರಿ ಸ್ಥಗಿತರಾಷ್ಟ್ರೀಯ ಹೆದ್ದಾರಿ ಬಳಿಯಲ್ಲೇ ಇರುವ ಶಾ ಗಾರ್ಡನ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುವ ಜನರಿಂದಾಗಿ ಹೆದ್ದಾರಿಯಲ್ಲಿ ಸಂಚಾರದಟ್ಟಣೆ ಉಂಟಾಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ಪೋಲೀಸ್ ಇಲಾಖೆಯು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಿದ್ದರು. ಆದರೆ, ಅದರ ವಿರುದ್ಧ ಹೆದ್ದಾರಿ ಬಂದ್ ಮಾಡಲಾಗುತ್ತದೆ ಎಂದು ಆರೋಪಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಪರಿಣಾಮವಾಗಿ ಹೆದ್ದಾರಿ ಬಂದ್ ಮಾಡದಂತೆ ಹೈಕೋರ್ಟ್ ನ ಆದೇಶವನ್ನು ಮನ್ನಿಸಿ, ಪೋಲೀಸರು ಯಾವುದೇ ತಡೆ ನೀಡದ ಕಾರಣ ವಾಹನಗಳೆಲ್ಲವೂ ಹೆದ್ದಾರಿಯಲ್ಲೇ ಆಗಮಿಸಿ, ಸಂಚಾರ ದಟ್ಟಣೆಗೆ ಕಾರಣವಾಯಿತು.ಯಾವುದೇ ಸಣ್ಣಪುಟ್ಟ ಜಾಥಾಗಳಿದ್ದರೂ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗುವುದು ಸರ್ವೇ ಸಾಮಾನ್ಯವಾಗಿದೆ. ಏತನ್ಮಧ್ಯೆ ಇಷ್ಟೊಂದು ಜನಸಾಗರವೇ ಹರಿದುಬರುವ ಪ್ರತಿಭಟನಾ ಸಮಾವೇಶದ ಜನದಟ್ಟಣೆಯನ್ನು ಮನಗಂಡ ಪೋಲೀಸ್ ಇಲಾಖೆ, ಹೆದ್ದಾರಿಯನ್ನು ಬಂದ್ ಮಾಡದೇ, ಇತರ ಬದಲೀ ರಸ್ತೆಯನ್ನು ಪರಿಚಯಿಸಿತ್ತು.ಆದರೆ, ಹೈಕೋರ್ಟ್ ಆದೇಶವಿದೆ ಎಂದೇಳಿ ಹೆದ್ದಾರಿಯಲ್ಲೇ ಆಗಮಿಸಿದ ವಾಹನಗಳು ಅಡ್ಯಾರ್ ಪರಿಸರದಲ್ಲಿ ದಟ್ಟಣೆಯನ್ನು ಅನುಭವಿಸುವಂತಾಗಿದೆ. ಇದರಿಂದಾಗಿ ಕಾರ್ಯಕ್ರಮಕ್ಕೆ ತಡವಾಗಿ ಬಂದ ಸಾವಿರಾರು ಮಂದಿಗಳ ವಾಹನಗಳು ರಸ್ತೆಯಲ್ಲೇ ಉಳಿಯುವಂತಾಗಿದೆ. ಮತ್ತು ಹಲವಾರು ಪ್ರತಿಭಟನಾಕಾರರು ದೂರದಿಂದಲೇ ಕಾಲ್ನಡಿಗೆಯಿಂದ ಸಮಾರಂಭಕ್ಕೆ ತಲುಪುವಂತಾಯಿತು.ಹೆದ್ದಾರಿಯುದ್ದಕ್ಕೂ ವಾಹನ ಸಂಚಾರ ನಿಧಾನಗತಿಯಲ್ಲಿ ಸಂಚರಿಸುತ್ತಿತ್ತು. ಇತ್ತ ನಗರದ ವಿವಿಧ ಕಡೆಗಳಲ್ಲಿ ಮಧ್ಯಾಹ್ನದಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಮಧ್ಯಾಹ್ನದ ವೇಳೆ ನಗರದೆಲ್ಲೆಡೆ ವಾಹನಗಳ ಸಂಚಾರವೂ ಬಹುತೇಕವಾಗಿ ವಿರಳವಾಗಿತ್ತು. ನಗರ ಹಾಗೂ ಅಡ್ಯಾರ್ ಸುತ್ತಮುತ್ತಲಿನ ಪ್ರದೇಶಗಳ ಜಂಕ್ಷನ್, ಕ್ರಾಸಿಂಗ್ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಾಹನಗಳ ಗಸ್ತಿನ ಜತೆಗೆ ಅಲ್ಲಲ್ಲಿ ಪೊಲೀಸ್ ವಾಹನಗಳನ್ನು ನಿಲ್ಲಿಸಲಾಗಿತ್ತು.ಆಝಾದಿ ಘೋಷಣೆ : ಡ್ರೋನ್ ಕಣ್ಣಾವಲುಪ್ರತಿಭಟನಾ ಸ್ಥಳದಲ್ಲಿ ಸೇರಿದ್ದವರು ಆಝಾದಿ ಘೋಷಣೆಗಳನ್ನು ಕೂಗುತ್ತಾ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸರ ಜತೆಗೆ ಸ್ವಯಂ ಸೇವಕರು ಕೂಡಾ ಮೈದಾನದ ಸುತ್ತಮುತ್ತ ಸುಗಮ ಸಂಚಾರ ವ್ಯವಸ್ಥೆ ನಿರ್ವಹಣೆಗೆ ಸಹಕರಿಸುವುದು ಕಂಡು ಬಂತು. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಮೊಬೈಲ್ ನೆಟ್ವರ್ಕ್ ಬಹುತೇಕವಾಗಿ ಜಾಮ್ ಆಗಿದ್ದು, ಸಂಪರ್ಕ, ಸಂವಹನಕ್ಕೆ ಅಡ್ಡಿಯಾಯಿತು.ಸಮಾವೇಶದ ಪ್ರತಿ ಹಂತದ ಚಿತ್ರೀಕರಣಕ್ಕೆ ವೀಡಿಯೋಗ್ರಾಫರ್ಗಳ ನಿಯೋಜನೆ ಮಾಡಲಾಗಿದ್ದು, ಭದ್ರತೆಯ ದೃಷ್ಟಿಯಿಂದ ಡ್ರೋನ್ ಮೂಲಕ ಕಣ್ಗಾವಲೂ ಇರಿಸಲಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತಡೆ ಉಂಟು ಮಾಡದಂತೆ ಆಯೋಜಕರು ಆಗಾಗ್ಗೆ ಧ್ವನಿ ವರ್ಧಕ ಮೂಲಕ ಸೂಚನೆ ನೀಡುತ್ತಿದ್ದರು. ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿ, ಉದ್ರೇಕಕಾರಿ ಘೋಷಣೆಗಳನ್ನು ಕೂಗದಂತೆ ಮನವಿಯನ್ನೂ ಮಾಡುತ್ತಿದ್ದರು.
Kannada Online News Paper