ನವದೆಹಲಿ: ಕೇಂದ್ರ ಸರ್ಕಾರ ಜಾರಿಮಾಡಿರುವ ಅಸಾಂವಿಧಾನಿಕ ವಕ್ಫ್ ತಿದ್ದುಪಡಿ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗುರುವಾರ (ಎ.17), ಮುಂದಿನ (ಮೇ 5) ವಿಚಾರಣೆವರೆಗೆ ವಕ್ಫ್ ಬೋರ್ಡ್ ಗೆ ಯಾವುದೇ ನೇಮಕಾತಿ ಮಾಡುವಂತಿಲ್ಲ, ಅಲ್ಲದೇ ವಕ್ಫ್ ಆಸ್ತಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ಸೇರಿಸುವುದು ಮುಂತಾದ ವಿವಾದಾತ್ಮಕ ವಕ್ಫ್ ಕಾನೂನಿನ ಕೆಲವು ಭಾಗಗಳ ಕಾರ್ಯಾಚರಣೆಯನ್ನು ಸುಪ್ರೀಂ ಕೋರ್ಟ್ ಮೇ 5ರ ಮುಂದಿನ ವಿಚಾರಣೆಯ ದಿನಾಂಕದವರೆಗೆ ತಡೆಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಅಲ್ಲಿಯವರೆಗೆ ‘ಬಳಕೆದಾರರಿಂದ ವಕ್ಫ್’ ನಿಬಂಧನೆಯನ್ನು ಡಿನೋಟಿಫೈ ಮಾಡಬಾರದು ಎಂದು ಹೇಳಿದೆ.
ವಕ್ಫ್ ತಿದ್ದುಪಡಿ ಕಾಯ್ದೆಯ ಪ್ರಕಾರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ 72 ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಬುಧವಾರ (ಎ.16) ವಿಚಾರಣೆ ಆರಂಭಿಸಿತ್ತು.
ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದಾದರೆ ಹಿಂದೂ ಧಾರ್ಮಿಕ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಮಾಡಿಕೊಡುತ್ತೀರಾ? ಎಂದು ಸುಪ್ರೀಂಕೋರ್ಟ್ ನಿನ್ನೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.
ಗುರುವಾರ ಕೇಂದ್ರ ಸರ್ಕಾರದ ಪರ ಸುಪ್ರೀಂಕೋರ್ಟ್ ಗೆ ವಿಚಾರಣೆಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು, ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಉತ್ತರ ನೀಡಲು ಒಂದು ವಾರಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು. ಅಲ್ಲದೇ ನೂತನ ಕಾಯ್ದೆಯ ಕಲಂ 9 ಮತ್ತು 14ರ ಪ್ರಕಾರ ಸರ್ಕಾರ ವಕ್ಫ್ ಗೆ ಯಾವುದೇ ನೇಮಕಾತಿ ಮಾಡುವುದಿಲ್ಲ ಎಂಬುದಾಗಿ ತಿಳಿಸಿದ್ದರು.
ಪ್ರಕರಣದ ಸೂಕ್ಷ್ಮತೆ ಗಮನಿಸಿದ ಸುಪ್ರೀಂಕೋರ್ಟ್, ವಕ್ಫ್ ಕಾಯ್ದೆಗೆ ಸಂಪೂರ್ಣವಾಗಿ ತಡೆ ನೀಡುವುದಿಲ್ಲ ಎಂಬುದರ ಸೂಚನೆ ನೀಡಿದ್ದು, ಕಾನೂನಿನಲ್ಲಿ ಕೆಲವೊಂದು ಸಕಾರಾತ್ಮಕ ಅಂಶಗಳಿವೆ ಎಂಬುದನ್ನು ಗಮನಿಸಿದ್ದೇವೆ. ಆದರೆ ಕಾನೂನಿಗೆ ಸಂಪೂರ್ಣ ತಡೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಕೇಂದ್ರದ ಪ್ರತಿಕ್ರಿಯೆ ಬರುವವರೆಗೂ ವಕ್ಫ್ ಆಸ್ತಿಯ ಸ್ಥಿತಿ ಬದಲಾಗುವುದಿಲ್ಲ. ಅಂದರೆ ಸರ್ಕಾರ ಪ್ರತಿಕ್ರಿಯಿಸುವವರೆಗೆ ಯಥಾಸ್ಥಿತಿ ಮುಂದುವರಿಯುತ್ತದೆ ಮತ್ತು ಮುಂದಿನ ಆದೇಶದವರೆಗೆ ಹೊಸ ಕಾನೂನಿನಡಿಯಲ್ಲಿ ಯಾವುದೇ ಹೊಸ ನೇಮಕಾತಿಗಳನ್ನು ಮಾಡುವಂತಿಲ್ಲ.