janadhvani

Kannada Online News Paper

ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಬೀದಿಗಿಳಿದ ಎಸ್‌ಡಿಪಿಐ- ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮ

ನಮ್ಮ ಖಾಸಗಿ ಜಮೀನಿನ ತಕರಾರಿನ ಬಗ್ಗೆ ಕೇಳಲು ಬಂದವರಲ್ಲ, ಅಲ್ಲಾಹನ ಮೇಲೆ ದಾನ ಮಾಡಿದ ಆಸ್ತಿಯನ್ನು ಕಬಳಿಸುವ ಸರ್ಕಾರದ ವಿರುದ್ಧ ಬಂದಿದ್ದೇವೆ.

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ವಕ್ಫ್ ತಿದ್ದುಪಡಿ ಮಸೂದೆ 2024ನ್ನು ವಿರೋಧಿಸಿ ಬೃಹತ್ ಪ್ರತಿಭಟನಾ ಜಾಥಾಗೆ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಂಕಜಾಲ್‌ರವರು ನಿನ್ನೆ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಜಲೀಲ್ ಕೃಷ್ಣಾಪುರರವರಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಸಾವಿರಾರು ಸಂಖ್ಯೆಯಲ್ಲಿ ಮಂಗಳೂರು ಕ್ಲಾಕ್ ಟವರ್ ಬಳಿ ಜಮಾಯಿಸಿದ ಕಾರ್ಯಕರ್ತರು ವಕ್ಫ್ ಮಸೂದೆ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು‌ರವರು ಮಾತನಾಡಿ ಇದು ಮುಸಲ್ಮಾನರ ಅಸ್ಮಿತೆಯನ್ನು ಉಳಿಸುವುದಕ್ಕಾಗಿರುವ ಹೋರಾಟ. ವಕ್ಫ್ ಸೊತ್ತು ದೇವರಿಗೆ ದಾನ ಮಾಡಿದ ಸೊತ್ತಾಗಿದೆ. ಅದನ್ನು ಅಕ್ರಮಿಸಿಕೊಳ್ಳಲು ಯಾವುದೇ ಕಾರಣಕ್ಕೂ ಬಿಡಲಾರೆವು ಎಂದು ಗುಡುಗಿದರು.

ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷೆ ಶಾಹಿದಾ ತಸ್ನಿಂ ಮಾತನಾಡಿ ವಕ್ಫ್ ಭೂಮಿ ಯಾವತ್ತೂ ಅದು ವಕ್ಫ್ ಭೂಮಿಯಾಗಿಯೇ ಉಳಿಯಲಿದೆ. ಇಂತಹ ಕರಾಳ ಕಾನೂನನ್ನು ಜಾರಿಮಾಡುವ ಮುನ್ನ ನೀವು ದೆಹಲಿಯ ಶಾಹಿನ್‌ಭಾಗನ್ನು ನೆನಪಿಸಿಕೊಳ್ಳಿ. ಸಮಯ ಬಂದರೆ ದೇಶದ ಗಲ್ಲಿಗಲ್ಲಿಗಳಲ್ಲೂ ಶಾಹಿನ್‌ಭಾಗ್ ಸೃಷ್ಟಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ ಇದು ನಮ್ಮ ಖಾಸಗಿ ಜಮೀನಿನ ತಕರಾರಿನ ಬಗ್ಗೆ ಕೇಳಲು ಬಂದವರಲ್ಲ, ಅಲ್ಲಾಹನ ಮೇಲೆ ದಾನ ಮಾಡಿದ ಆಸ್ತಿಯನ್ನು ಕಬಳಿಸುವ ಸರ್ಕಾರದ ವಿರುದ್ಧ ಬಂದಿದ್ದೇವೆ. ಕೇಂದ್ರ ಸರ್ಕಾರವು ಚೀನಾವು ವಶಪಡಿಸಿದ ದೇಶದ ಜಾಗವನ್ನು ಮರುಪಡೆಯುವ ತಾಕತ್ತಿಲ್ಲದೆ ಮುಸ್ಲಿಮರ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದರು.

ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ ವಕ್ಫ್ ಆಸ್ತಿಯನ್ನು ವಶಪಡಿಸುವ ಮಸೂದೆಯನ್ನು ಎಸ್‌ಡಿಪಿಐಯ ಕಟ್ಟ ಕಡೆಯ ಕಾರ್ಯಕರ್ತನಿರುವವರೆಗೂ ಯಾವುದೇ ಬೆಲೆ ತೆತ್ತಾದರೂ ಸರಿ ಅದನ್ನು ಉಳಿಸಿಯೇ ತೀರುತ್ತೇವೆ ಎಂದರು.

ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಮಾತನಾಡಿ ಕೇಂದ್ರ ಸರ್ಕಾರ ಇಂತಹ ಹೋರಾಟಗಳನ್ನು ಆಯೋಜಿಸಿದ ಕಾರಣಕ್ಕಾಗಿ ನಮ್ಮನ್ನು ಯುಎಪಿಎ ಹಾಕಿ ಜೈಲಿಗಟ್ಟಬಹುದು. ಆದರೆ ಅಂತಹ ಸುಳ್ಳು ಪ್ರಕರಣಗಳಿಗೆ ಹೆದರುವವರು ನಾವಲ್ಲ ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೀದ್ ತುಂಬೆ , ಕಾರ್ಯದರ್ಶಿ ರಿಯಾಜ್ ಕಡಂಬು ರಾಜ್ಯ ಸಮಿತಿ ಸದಸ್ಯರಾದ ಅಡ್ವಕೇಟ್ ಅಶ್ರಫ್, ಅಡ್ವಕೇಟ್ ಮಜೀದ್ ಖಾನ್, ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಧ್ಯಕ್ಷೆ ಪಾತಿಮಾ ನಸೀಮ, ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಶ್ರಿಯ ಬೆಳ್ಳಾರೆ, ರಾಜ್ಯ ಕಾರ್ಯದರ್ಶಿ ಝುಲೈಕ ಬಜ್ಪೆ, ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲಾಧ್ಯಕ್ಷೆ ನಿಶಾ ವಮಂಜೂರು, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ನೌರೀನ್ ಆಲಂಪಾಡಿ, ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಅಶ್ರಫ್ ಅಡ್ದುರು, ಆಯಿಷ ಬಜಪೆ, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್, ಮೂನಿಶ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಕ್ಷೇತ್ರ ಸಮಿತಿ ಪದಾಧಿಕಾರಿಗಳು, ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಕಟಣೆ
ಅಶ್ರಫ್ ತಲಪಾಡಿ
SDPI ಜಿಲ್ಲಾ ಕಾರ್ಯದರ್ಶಿ ಮತ್ತು ಮಾಧ್ಯಮ ಉಸ್ತುವಾರಿ