ರಿಯಾದಿನಲ್ಲಿ ಹೃದಯಾಘಾತಕ್ಕೊಳಗಾಗಿ ಮರಣ ಹೊಂದಿದ್ದ ಮುಹಮ್ಮದ್ ಯಹ್ಯಾ, ಗಂಜಿಮಠ ಅವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು.
23/02/2025ರಂದು ಮರಣ ಹೊಂದಿದ ಮಾಹಿತಿ ತಿಳಿದ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಸಾಂತ್ವನ ಇಲಾಖೆ ನಾಯಕರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ .
ಸೌದಿ ಅರೇಬಿಯಾದಲ್ಲಿ ವಿದೇಶಿಗಳು ಯಾರಾದರೂ ಮರಣಹೊಂದಿದರೆ ಅವರ ಅಂತ್ಯಕ್ರಿಯೆಗೆ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳನ್ನು ಮಾಡಬೇಕಾಗಿದ್ದು, ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ರಿಯಾದ್ ಕೆಸಿಎಫ್ ಸಾಂತ್ವನ ಇಲಾಖೆ ನಾಯಕರಾದ ಮಜೀದ್ ವಿಟ್ಲ, ಸಲಾಂ ಹಳೆಯಂಗಡಿ, ಮುಖ್ತಾರ್ ಹಳೆಯಂಗಡಿ, ದಾವೂದ್ ಸಅದಿ, ಫಾರೂಕ್ ಪಾಣೆಮಂಗಳೂರು, ರಾಷ್ಟ್ರೀಯ ಸಾಂತ್ವನ ಇಲಾಖೆ ನಾಯಕರಾದ ಭಾಷಾ ಗಂಗಾವಳಿ ಹಾಗೂ ಮೃತರ ಕುಟುಂಬಸ್ಥರಾದ ಝಿಯಾ, ಫಝಲುರ್ರಹ್ಮಾನ್ ಹಾಗೂ ಇನ್ನಿತರರು ಮುಂಚೂಣಿಯಲ್ಲಿದ್ದುಕೊಂಡು ಎಲ್ಲಾ ಕಾರ್ಯಗಳನ್ನು ಯಾವುದೇ ಕುಂದುಕೊರತೆಗಳಿಲ್ಲದಂತೆ ಚೆನ್ನಾಗಿ ನಿಭಾಯಿಸಿದ್ದಾರೆ. ಊರಿನಲ್ಲಿ ಮೃತರ ಕುಟುಂಬಸ್ಥರು ಎಲ್ಲಾ ರೀತಿಯಲ್ಲೂ ಸಹಕರಿಸಿದ್ದಾರೆ.
ರಿಯಾದಿನ ಅಲ್ ರಾಜಿ ಮಸ್ಜಿದ್ನಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿ ಅಲ್-ನಸೀಮ್ ಸಾರ್ವಜನಿಕ ದಫನ ಭೂಮಿಗೆ ಮೃತದೇಹವನ್ನು ಕೊಂಡೊಯ್ಯಲಾಯಿತು.
ನಸೀಂನಲ್ಲಿ ನಡೆದ ದಫನ್ ಕಾರ್ಯದ ನೇತೃತ್ವವವನ್ನು ಕೆಸಿಎಫ್ ರಿಯಾದ್ ಝೋನ್ ನಾಯಕರು ವಹಿಸಿದ್ದರು. ಇಸ್ಮಾಯಿಲ್ ಕಣ್ಣಂಗಾರ್, ಉಬೈದುಲ್ಲಾ ವಗ್ಗ, ಆಸಿಫ್ ಹಂಡೇಲು, ಕುಟುಂಬಸ್ಥರು, ಗೆಳೆಯರು, ಸಹೋದ್ಯೋಗಿಗಳು ಹಾಗೂ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೃತರು ಪತ್ನಿ, ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.