ಪುತ್ತೂರು: ತಂದೆ ತಾಯಂದಿರನ್ನು ಗೌರವಿಸಿ ,ಅವರ ಪ್ರೀತಿ ಸ್ನೇಹ, ತ್ಯಾಗವನ್ನು ಮಕ್ಕಳು ಅರಿತುಕೊಂಡಲ್ಲಿ ಜೀವನಪೂರ್ತಿ ಸುಖದಿಂದಿರಬಹುದು ಎಂದು ಪಾಂಡದರ ಮರ್ಕಝ್ ಗೂಡಲ್ಲೂರು ಪ್ರಾಂಶುಪಾಲರಾದ ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರಶೋಲ ಹೇಳಿದರು.
ಅವರು ಬೆಳ್ಳಾರೆಯಲ್ಲಿ ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಇದರ ಮೇಲಂತಸ್ತಿನ ಹಾಸ್ಟೆಲ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಪ್ರಭಾಷಣ ಮಾಡಿದರು, ನಮ್ಮನ್ನು ನಾವು ಕೆಟ್ಟ ತೀರ್ಮಾನಗಳಿಂದ ಸೋತು ಕಂಗೆಟ್ಟು ಕುಳಿತಾಗ ನಮ್ಮ ಕೈ ಹಿಡಿದು ಸಲುಹುವವರು ನಮ್ಮ ತಾಯಿ ತಂದೆ ಮಾತ್ರ, ಅಂತಹ ತಂದೆ ತಾಯಂದಿರು ಕಣ್ಣೀರು ಹಾಕುವ ಯಾವುದೇ ತೀರ್ಮಾನವನ್ನು ಯುವಜನತೆ ತೆಗೆದುಕೊಳ್ಳಬಾರದು. ಹಾಗೆಂದು ತೆಗೆದುಕೊಂಡಲ್ಲಿ ತಂದೆ ತಾಯಿಯ ಕಣ್ಣೀರು ಜೀವನ ಪರ್ಯಂತ ಕಾಡದಿರದು, ತಂದೆ ತಾಯಿಯರಿಗೂ ಕೂಡ ಮಕ್ಕಳೇ ಸರ್ವಸ್ವ, ಅವರಿಗೆ ಒಳ್ಳೆಯ ಧಾರ್ಮಿಕ ಶಿಕ್ಷಣ ನೀಡಿ ಅವರನ್ನು ಅಮೂಲ್ಯ ಸಂಪತ್ತಾಗಿಸಿ ಎಂದು ಕರೆ ನೀಡಿದರು.
ಇಂದು ಇಲ್ಲಿ ಹತ್ತು ಮಕ್ಕಳು ಖರಾನ್ ಶಿಕ್ಷಣ ಪಡೆದು,ಅವರಿಗೆ ಸನುದುದಾನ ನೀಡುತ್ತಿರುವುದು ಅತೀವ ಸಂತೋಷವಾಗುತ್ತಿದೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಈ ಮಕ್ಕಳು ಧಾರ್ಮಿಕ ಶಿಕ್ಷಣಕ್ಕೆ ಒತ್ತು ನೀಡಿರುವುದು ಅಭಿನಂದನೀಯ, ಇವರೆಲ್ಲರಿಗೂ ನಮ್ಮ ಮಕ್ಕಳೆಂಬ ಪ್ರೀತಿಯನ್ನು ನಾವೆಲ್ಲ ಹರಿಸಬೇಕಾಗಿದೆ ಎಂದರು , ಇಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ವಾಗಲು ಮುಂಚೂಣಿಯಲ್ಲಿ ನಿಂತ ಪ್ರಮುಖರ ಹಾಗೂ ಸಹಕರಿಸಿದವರ ಮನಸ್ಸು ಪರಿಶುದ್ದವಾಗಿದೆ, ಹಾಗಾಗಿ ಈ ರೀತಿಯ ಕಟ್ಟಡ ತೆಲೆಯೆತ್ತಿನಿಂತು ಇನ್ನಷ್ಟು ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.
ಮಾಪಲಡ್ಕ ಮುದರಿಸ್ ಹಾಫಿಝ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌದಿ ನ್ಯಾಷನಲ್ ಕಮಿಟಿ ಅಧ್ಯಕ್ಷ ರಶೀದ್ ಬೆಳ್ಳಾರೆ ವಹಿಸಿದ್ದರು.
ಸಯ್ಯಿದ್ ಕಾಜೂರ್ ತಂಙಳವರ ನೇತೃತ್ವದಲ್ಲಿ ಸಂಸ್ಥೆಯಲ್ಲಿ ಕಲಿತು ಸಂಪೂರ್ಣವಾಗಿ ಖುರ್ಆನ್ ಕಂಠಪಾಠ ಮಾಡಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಸನದುದಾನ ವಿತರಣೆ ನಡೆಯಿತು.ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ ದಾವೂದ್ ಸಅದಿ ಬೆಳ್ಳಾರೆ, ಹಾಜೀ ಯೂಸಫ್ ಚೆನ್ನಾರ್ ಸ್ವಾಗತಿಸಿ,ವಿದ್ಯಾರ್ಥಿ ಮಹಮ್ಮದ್ ಸಲ್ಮಾನ್ ಖಿರಾಅತ್ ನಡೆಸಿದರು, ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಇದರ ಕೋಶಾಧಿಕಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಚಳಿಯ ವಾತಾವರಣದಲ್ಲಿ ಮತ್ತು ಅಪರಿಮಿತ ಬಿಸಿಲಿನ ಬೇಗೆಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಸಂಖ್ಯೆಯ ಸಾದಾರಣ ಜನರಿಂದ ಈ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ, ಅವರೆಲ್ಲರ ಬೆವರ ಹನಿ ಈ ಕಟ್ಟಡದಲ್ಲಿದೆ , ಎಲ್ಲಾದಾನಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.