ಮಂಗಳೂರು: ಮತೀಯ ಗಲಭೆಳು ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಯಿಂದಲೆ ಅಧಿಕಾರವನ್ನು ನಿಯಂತ್ರಣದಲ್ಲಿಡುವ ವೈದಿಕ ಯೋಜಿತ ಪದ್ಧತಿಯ ಅನುಷ್ಠಾನ ಎಂಬಂತೆ, ಈ ಹಿಂದಿನ ಗುಜರಾತ್, ಉತ್ತರ ಪ್ರದೇಶ, ಮುಜಾಫರ್ ನಗರ, ಕರ್ನಾಟಕದ ಕರಾವಳಿ ಜಿಲ್ಲೆಗಳು, ಮಣಿಪುರ ಮತ್ತು ಪ್ರಸ್ತುತ ಹರ್ಯಾಣದ ಗುರುಗ್ರಾಮ ಗಲಭೆಗಳು ಸಂಘ ಪರವಾರದ ಯೋಜನೆಯ ಮುಂದುವರಿದ ಭಾಗವಾಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಹೇಳಿದ್ದಾರೆ.
ಹರ್ಯಾಣದಲ್ಲಿ ಈಗಾಗಲೇ ಮುಕ್ತವಾಗಿ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ನಿರ್ವಹಣೆಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಗುರುಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಏಕೈಕ ಮಸೀದಿಯ ಧಾರ್ಮಿಕ ಗುರುವೊಬ್ಬರನ್ನು ಸಂಘೀ ಪ್ರೇರಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ನಡೆಸಿದ್ದು ಮತ್ತು ಮಸೀದಿಗೆ ಬೆಂಕಿ ಹಚ್ಚಿ ನಾಶಪಡಿಸಿದ ಕೃತ್ಯ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ.
ಈ ಕೃತ್ಯ ಮಣಿಪುರದಲ್ಲಿ ನಡೆದ ಜನಾಂಗೀಯ ಹತ್ಯೆಯ ಮುಂದುವರಿದ ಭಾಗವಾಗಿದೆ. ಪರಿಸ್ಥಿತಿಯ ಮಾಹಿತಿ ಹೊರಗೆ ಲಭ್ಯವಾಗದೇ ಇರುವಂತೆ ಇಂಟರ್ನೆಟ್ ಸ್ಥಗಿತ ಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಾಯೋಜತ್ವದಲ್ಲಿಯೆ ಸಂಘ ಪರಿವಾರವನ್ನು ಗಲಭೆ ಉತ್ತೇಜಿಸಲು ಪ್ರಯತ್ನಿಸುವಂತಿದೆ ಎಂದು ಕೆ.ಅಶ್ರಫ್(ಮಾಜಿ ಮೇಯರ್) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.