ರಾಸಲ್ ಖೈಮಾ :ಭಾರತ ದೇಶಾದ್ಯಂತ ನಡೆದ ಆಗಸ್ಟ್ 15 ರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭ ಸಂಭ್ರಮದ ಸಂಧರ್ಭದಲ್ಲಿ ಅನಿವಾಸಿ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಪೌಂಡೇಶನ್ (ಕೆ.ಸಿ.ಎಫ್) ರಾಸಲ್ ಖೈಮಾ ಝೋನ್ ಅದ್ದೂರಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಐಕ್ಯತೆ ಹೆಚ್ಚು ಮಹತ್ವವನ್ನು ಹೊಂದಿದೆ ಇಲ್ಲಿ ಜಾತಿ, ಭೇದ, ವರ್ಣ ನೀತಿಗೆ ಅವಕಾಶ ಇರುವುದಿಲ್ಲ. ಆದರೂ ರಾಜಕೀಯ ಪ್ರೇರಿತ ಶಕ್ತಿಗಳಿಂದ ದೇಶದ ಐಕ್ಯತೆಗೆ ಧಕ್ಕೆಯಾಗುತ್ತಿದೆ. ಇದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಏಕ ಕಂಠದಿಂದ ಎದುರಿಸಿ ಪ್ರಭುತ್ವದ ಮಹತ್ವವನ್ನು ಸಾರಬೇಕು ಎಂಬ ಸಂದೇಶ ದೊಂದಿಗೆ ಸ್ವಾಗತ ಭಾಷಣ ನಿರ್ವಹಿಸಿದ ಅಫ್ಝಲ್ ಮಂಗಳೂರು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ವಹಿಸಿದ ಹನೀಫ್ ಮುಸ್ಲಿಯಾರ್ ಮಾತನಾಡಿ, ಭಾರತೀಯತೆ ಪ್ರತಿಯೊಬ್ಬ ಮುಸ್ಲಿಮನ ವಿಶ್ವಾಸದ ಭಾಗವಾಗಿದೆ, ಅನ್ಯೋನ್ಯತೆಯ ಬದುಕು ಬದುಕಿ ಭಾರತವನ್ನು ಸುಂದರಗೊಳಿಸುವುದು ಯುವಕರ ಕರ್ತವ್ಯವಾಗಿದೆ, ರಾಜಕೀಯವನ್ನು ರಾಷ್ಟ್ರದ ಅಭಿವೃದ್ದಿಗಾಗಿ ಮಾತ್ರ ಬಳಸಬೇಕು ಎಂದು ಹೇಳಿದ ಅವರು ಧರ್ಮದ ಹೆಸರಿನಲ್ಲಿ ಕಚ್ಚಾಟ ನಡೆಸಿ ರಾಜಕೀಯ ಹೆಣಗಳಾಗಿ ಉರುಳಬೇಕಾದವರಲ್ಲ ಯುವಕರು ಎಂದು ಸಲಹೆ ನೀಡಿದರು.
ಮುಹಮ್ಮದ್ ಅಲಿ ಹೆಜಮಾಡಿ, ಇಸ್ಮಾಯಿಲ್ ಮುಸ್ಲಿಯಾರ್ ಕೊಡಗು, ಸಲಾಂ ಕಕ್ಕಿಂಜೆ, ಝೈನುದ್ಧೀನ್ ಮಡಿಕೇರಿ, ಹಾರಿಸ್ ಈಶ್ವರಮಂಗಳ, ನಿಯಾಝ್ ಬಾಕಿಮಾರು ಸೇರಿದಂತೆ ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಸಲ್ ಖೈಮಾದ ಪ್ರತಿಷ್ಠಿತ ಜ್ಯೂಸ್ ವರ್ಲ್ಡ್ ನಲ್ಲಿ ನಡೆದ ಕಾರ್ಯಕ್ರಮವು ರಾಷ್ಟ್ರ ಗೀತೆ ಯೊಂದಿಗೆ ಸಮಾರೋಪ ಗೊಂಡಿತು.