ನವದೆಹಲಿ: 12,000 ರೂಪಾಯಿಗಿಂತ (150 ಡಾಲರ್) ಕಡಿಮೆ ಬೆಲೆಯ ಚೀನಾದ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಮಾರಾಟ ಮಾಡದಂತೆ ನಿರ್ಬಂಧ ಹೇರಲು ಸರಕಾರ ಮುಂದಾಗಿದೆ.
ತತ್ತರಿಸಿರುವ ಪ್ರಾದೇಶಿಕ ಸ್ಮಾರ್ಟ್ಫೋನ್ ತಯಾರಿಕಾ ಕೈಗಾರಿಕೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಈ ಕ್ರಮ ಎನ್ನಲಾಗುತ್ತಿದೆ. ಇದರಿಂದಾಗಿ ಶವೋಮಿ ಕಾರ್ಪೊರೇಷನ್ ಸೇರಿದಂತೆ ದೇಶದಲ್ಲಿ ವ್ಯಾಪಿಸಿರುವ ಚೀನಾದ ಸ್ಮಾರ್ಟ್ಫೋನ್ ಕಂಪನಿಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ.
ಜಗತ್ತಿನ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಕಡಿಮೆ ಬೆಲೆ ಶ್ರೇಣಿಯ ಸ್ಮಾರ್ಟ್ಫೋನ್ ಮಾರಾಟದಿಂದ ಚೀನಾದ ಬೃಹತ್ ಕಂಪನಿಗಳನ್ನು ದೂರ ಸರಿಸಲು ಕ್ರಮವಹಿಸಲಾಗುತ್ತಿದೆ ಎಂದು ವರದಿಯಾಗಿದೆ. ಸ್ಥಳೀಯವಾಗಿ ತಯಾರಿಸುವ ಫೋನ್ಗಳಿಗಿಂತ ಕಡಿಮೆ ದರದಲ್ಲಿ ರಿಯಲ್ಮಿ ಮತ್ತು ಟ್ರಾನ್ಸಿಷನ್ ಫೋನ್ಗಳು ಗ್ರಾಹಕರಿಗೆ ತಲುಪುತ್ತಿವೆ. ಇದರಿಂದಾಗಿಯೂ ಪ್ರಾದೇಶಿಕ ಕೈಗಾರಿಕೆಯ ಮೇಲೆ ಪರಿಣಾಮ ಬೀರಿದೆ.
ಶವೋಮಿಯಂತಹ ಚೀನಾದ ಹಲವು ಕಂಪನಿಗಳು ಭಾರತದಲ್ಲಿ ಆರಂಭಿಕ ಶ್ರೇಣಿಯ ಫೋನ್ಗಳ ಮಾರುಕಟ್ಟೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿವೆ. ಚೀನಾದಲ್ಲಿ ನಿರಂತರ ಕೋವಿಡ್-19 ಲಾಕ್ಡೌನ್ ನಿರ್ಬಂಧಗಳಿಂದಾಗಿ ಫೋನ್ಗಳ ಮಾರಾಟದ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಭಾರತದಲ್ಲಿ ಮಾರಾಟವು ಸತತ ಏರುಗತಿಯಲ್ಲಿದೆ.
2022ರ ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿ ಮಾರಾಟವಾಗಿರುವ ಸ್ಮಾರ್ಟ್ಫೋನ್ಗಳ ಪೈಕಿ ಮೂರನೇ ಒಂದರಷ್ಟು 12,000 ರೂಪಾಯಿಗಿಂತ ಕಡಿಮೆ ಶ್ರೇಣಿಯ ಫೋನ್ಗಳು. ಅವುಗಳಲ್ಲಿ ಶೇಕಡ 80ರಷ್ಟು ಫೋನ್ಗಳು ಚೀನಾದ ಕಂಪನಿಗಳಿಂದ ಬಂದಿರುವುದಾಗಿ ‘ಕೌಂಟರ್ಪಾಯಿಂಟ್’ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೈಗೊಂಡಿರುವ ನಿರ್ಣಯವನ್ನು ಚೀನಾದ ಕಂಪನಿಗಳಿಗೆ ಅಧಿಕೃತ ನಿಯಮಾವಳಿಗಳ ಮೂಲಕ ನಿರ್ಬಂಧಗಳನ್ನು ಜಾರಿಗೊಳಿಸುತ್ತದೆಯೇ ಅಥವಾ ಇನ್ನಾವುದೇ ಮಾರ್ಗದಲ್ಲಿ ನಿಯಂತ್ರಣವನ್ನು ಹೇರಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಶವೋಮಿ, ಓಪ್ಪೊ ಹಾಗೂ ವಿವೋ ಕಂಪನಿಗಳ ಹಣಕಾಸು ವಹಿವಾಟಿನ ಮೇಲೆ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯವು ಕಣ್ಣಿಟ್ಟಿದೆ. ಹಣ ಅಕ್ರಮ ವರ್ಗಾವಣೆ ಹಾಗೂ ತೆರಿಗೆ ವಂಚನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಆ ಕಂಪನಿಗಳ ಹಲವು ಕಚೇರಿಗಳಲ್ಲಿ ದಾಳಿ ನಡೆಸಲಾಗಿದೆ. ಈ ಹಿಂದೆ ಸರಕಾರವು ಹುವಾವೆ ಟೆಕ್ನಾಲಜೀಸ್ ಹಾಗೂ ಝಡ್ಟಿಇ ಕಾರ್ಪೊರೇಷನ್ ಕಂಪನಿಗಳ ಸಾಧನಗಳ ಮೇಲೆ ನಿಯಂತ್ರಣ ಹೇರಿದೆ. ಚೀನಾದ ಟಿಕ್ಟಾಕ್, ವಿಚ್ಯಾಟ್ ಸೇರಿದಂತೆ 300ಕ್ಕೂ ಅಧಿಕ ಅಪ್ಲಿಕೇಷನ್ಗಳನ್ನು ಭಾರತವು ನಿರ್ಬಂಧಿಸಿದೆ.
ಈ ಹೊಸ ಕ್ರಮದಿಂದ Apple ಅಥವಾ ಸ್ಯಾಮ್ಸಂಗ್ ಕಂಪನಿಗಳ ಫೋನ್ಗಳ ಮಾರಾಟಕ್ಕೆ ಅಡಚಣೆಯಾಗುವುದಿಲ್ಲ.
















ಇನ್ನಷ್ಟು ಸುದ್ದಿಗಳು
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ