janadhvani

Kannada Online News Paper

ಮೌಲಾನಾ ಉಸ್ಮಾನ್ ಬೇಗ್ ರಶಾದಿ ನಿಧನ- ಪಿಎಫ್ಐ ಸಂತಾಪ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ಸ್ಥಾಪಕಾಧ್ಯಕ್ಷ ಮೌಲಾನಾ ಉಸ್ಮಾನ್ ಬೇಗ್ ರಶಾದಿ(61)ಯವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಫಾರಂ ಫಾರ್ ಡಿಗ್ನಿಟಿ(KFD)ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು, ನಂತರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಲ್ಲಿ ಹಲವು ಅವಧಿಗಳಿಗೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ದೇಶದ ಉಲಮಾಗಳನ್ನು ಸಂಘಟಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಅವರು, ಧಾರ್ಮಿಕ ವಿದ್ವಾಂಸರ ರಾಷ್ಟ್ರ ಮಟ್ಟದ ಸಂಘಟನೆಯಾಗಿರುವ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC) ಸ್ಥಾಪನೆಗೂ ಅಹರ್ನಿಶಿ ಶ್ರಮ ವಹಿಸಿದ್ದರು. ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ನಿರಂತರ ಧ್ವನಿ ಎತ್ತುತ್ತಿದ್ದ ಮೌಲಾನಾ, ಮುಸ್ಲಿಮ್ ಸಮುದಾಯದಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಪ್ರಮುಖ ಧಾರ್ಮಿಕ ವಿದ್ವಾಂಸರಾಗಿದ್ದ ಅವರು ಶಿವಾಜಿನಗರದ ಹರಿ ಮಸ್ಜಿದ್ ನಲ್ಲಿ ದೀರ್ಘಕಾಲ ಸಹಿತ ಬೆಂಗಳೂರಿನ ಇತರ ಮಸೀದಿಗಳಲ್ಲೂ ಹಲವಾರು ವರುಷಗಳ ಕಾಲ ಇಮಾಮ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಮೌಲಾನಾ ಉಸ್ಮಾನ್ ಬೇಗ್ ರಶಾದಿ ಅವರ ನಿಧನ ಭಾರತೀಯ ಮುಸ್ಲಿಮರಿಗೆ ತುಂಬಲಾರದ ನಷ್ಟವಾಗಿದೆ. ಪ್ರಖಂಡ ವಿದ್ವಾಂಸರೂ, ಸಾಮಾಜಿಕ ಹೋರಾಟಗಾರರೂ, ಸಂಘಟಕರೂ ಆಗಿದ್ದ ಮೌಲಾನ ತಮ್ಮ ಜೀವನದ ಕೊನೆಯವರೆಗೂ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತಿ ಪಾಪ್ಯುಲರ್ ಫ್ರಂಟ್ ಸಂಘಟನೆಯನ್ನು ದೇಶಾದ್ಯಂತ ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ನಿಧನದಿಂದ ದೇಶ, ಅತ್ಯುತ್ತಮ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ಅವರ ಕುಟುಂಬಸ್ಥರಿಗೆ, ಅಭಿಮಾನಿ ವರ್ಗಕ್ಕೆ ಕರುಣಿಸಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com