janadhvani

Kannada Online News Paper

ಮೈಸೂರನ್ನು ಬೆಚ್ಚಿಬೀಳಿಸಿದ್ದ ಸಾಮೂಹಿಕ ಅತ್ಯಾಚಾರ- ಐವರು ಆರೋಪಿಗಳ ಬಂಧನ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಚ್ಚಿಬೀಳಿಸಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಮೈಸೂರು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಇಂದು ಬೆಳಗ್ಗೆ ಮೈಸೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು ಸತತ 85 ಗಂಟೆ ಬಳಿಕ ವೈದ್ಯಕೀಯ ವಿದ್ಯಾರ್ಥಿ ಮೇಲೆ ಎರಗಿ ಬಳಿಕ ತಲೆಮರೆಸಿಕೊಂಡಿದ್ದ ಐವರನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 24ರಂದು ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಳು, ಈ ವೇಳೆ ಚಾಮುಂಡಿಬೆಟ್ಟದ ಬಳಿಯ ಲಲಿತಾದ್ರಿಪುರ ದಲ್ಲಿ ನಾಲ್ವರು ಯುವಕರ ತಂಡ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಸ್ಥಳದಿಂದ ಕಾಲ್ಕಿತ್ತಿತ್ತು. ಈ ಘಟನೆ ಮೈಸೂರು ಮಾತ್ರವಲ್ಲದೇ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಅಲ್ಲದೇ ಇದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು. ಇದೀಗ ಅತ್ಯಾಚಾರ ಮಾಡಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಂತ್ರಿಕ ಸಾಕ್ಷ್ಯಧಾರಗಳ ಆಧಾರದ ಮೇಲೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸರ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಆರೋಪಿಗಳು ತಮಿಳುನಾಡು ಮೂಲದವರು ಎಂದು ತಿಳಿದುಬಂದಿದ್ದು, ಇವರೆಲ್ಲ ಕೂಲಿ ಕಾರ್ಮಿಕರಾಗಿದ್ದಾರೆ ಎನ್ನಲಾಗಿದೆ. ಇನ್ನು ಇಂದು ಸಂಜೆ ಈ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರಿಗೆ ಸಹಾಯವಾಯ್ತು ಯುವಕನ ಹೇಳಿಕೆ!
ಇನ್ನು ಘಟನೆ ಬಗ್ಗೆ ಯುವತಿಯ ಜೊತೆ ಇದ್ದ ಯುವಕ ಪೊಲೀಸರಿಗೆ ಹೇಳಿಕೆ ನೀಡಿದ್ದು, ಆಗಸ್ಟ್‌ 24ರ ಸಂಜೆ 7.30ರ ಸುಮಾರಿಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ವಾಟರ್ ಟ್ಯಾಂಕ್‌ ಬಳಿಯ ಕಚ್ಚಾ ರಸ್ತೆಯಲ್ಲಿ ನಾವಿಬ್ಬರೂ ಹೋಗಿದ್ದೆವು. ನಾನು ದಿನಾಲೂ ಜಾಗಿಂಗ್‌ಗೆ ಹೋಗುವ ಸ್ಥಳ ಅದಾಗಿದ್ದು, ಈ ವೇಳೆ ಬೈಕ್‌ ನಿಲ್ಲಿಸಿದಾಗ 25-30 ವರ್ಷದ ಸುಮಾರು ಆರು ಮಂದಿ ಯುವಕರು ಬಂದು ಏಕಾಏಕಿ ನನಗೆ ದೊಣ್ಣೆಯಿಂದ ಹಲ್ಲೆ ಮಾಡಿದರು. ನಂತರ ನನ್ನನ್ನು ಕೆಳಕ್ಕೆ ತಳ್ಳಿ ನನ್ನ ಗೆಳತಿಯನ್ನು ಪೊದೆಯೊಳಗೆ ಎಳೆದುಕೊಂಡು ಹೋದರು. ಈ ವೇಳೆ ಅವರ ಜೊತೆಗಿದ್ದ ತೆಳ್ಳಗಿನ ವ್ಯಕ್ತಿಯೊಬ್ಬ ನನ್ನ ಹಣೆಗೆ ಕಲ್ಲಿನಿಂದ ಹೊಡೆದ. ಆ ಏಟಿಗೆ ನಾನು ಪ್ರಜ್ಞೆ ತಪ್ಪಿ ಬಿದ್ದೆ. ಹದಿನೈದು ನಿಮಿಷದ ನಂತರ ನನಗೆ ಪ್ರಜ್ಞೆ ಬಂತು. ಆಗ ಆ ಯುವಕರು ನನ್ನ ತಂದೆಗೆ ಫೋನ್‌ ಮಾಡಿಸಿ 3 ಲಕ್ಷ ಕೊಡುವಂತೆ ಒತ್ತಾಯ ಮಾಡಿದರು. ನಾನು ನನ್ನ ಗೆಳತಿ ಎಲ್ಲಿ ಎಂದು ಕೇಳಿದಾಗ ಅವಳನ್ನು ಪೊದೆಯಿಂದ ಎಳೆದುಕೊಂಡು ಬಂದು ನನ್ನ ಬಳಿ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದಳು. ಅವಳ ದೇಹದ ಮೇಲೆ ತರಚಿದ ಗಾಯಗಳಾಗಿತ್ತು ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಯುವಕ ತಿಳಿಸಿದ್ದಾನೆ.

ಇದನ್ನೂ ಓದಿರಿ...