ಸುಳ್ಯ: ಪುತ್ತೂರಿನಿಂದ ಬೆಂಗಳೂರಿಗೆ ಗುರುವಾರ ರಾತ್ರಿ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಇಬ್ಬರು ಯುವತಿಯರು ಪ್ರಯಾಣಿಸುತ್ತಿದ್ದು, ಪಕ್ಕದ ಸೀಟಲ್ಲಿ ಬೆಳ್ಳಾರೆಯ ಯುವಕನೊಬ್ಬ ಪ್ರಯಾಣಿಸುತ್ತಿದ್ದ. ಇದನ್ನೇ ತಪ್ಪಾಗಿ ಅರ್ಥೈಸಿದ ಬಜರಂಗ ದಳದವರು ಬಸ್ಸನ್ನು ಬೆನ್ನಟ್ಟಿ, ಆನೆಗುಂಡಿಯಲ್ಲಿ ಅಡ್ಡಗಟ್ಟಿ ನೈತಿಕ ಪೋಲೀಸ್ ಗಿರಿ ನಡೆಸಿ, ಪ್ರಯಾಣಿಕರಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ.
ಘಟನೆ: ಗುರುವಾರ ರಾತ್ರಿ ಪುತ್ತೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಗೆ ಇಬ್ಬರು ಯುವತಿಯರು ಹತ್ತಿದ್ದರು. ಅದೇ ಬಸ್ಸಲ್ಲಿ ಕುಂಬ್ರದವರೆಗೆ ಬರಲು ಬೆಳ್ಳಾರೆ ಸಮೀಪದ ನೌಶಾದ್ ಎಂಬಾತ ಹತ್ತಿದ್ದ. ಬಸ್ನ ಎದುರುಗಡೆಯ ಒಂದು ಬದಿಯ ಸೀಟಲ್ಲಿ ಆ ಯುವತಿಯರು ಕುಳಿತಿದ್ದರೆ, ಇನ್ನೊಂದು ಬದಿಯ ಸೀಟಲ್ಲಿ ನೌಷಾದ್ ಕುಳಿತಿದ್ದ. ಬಸ್ ಕುಂಬ್ರ ತಲುಪಿದಾಗ ಆ ಯುವಕ ಅಲ್ಲಿ ಇಳಿಯದೆ ಬೆಂಗಳೂರಿಗೆ ಮತ್ತೆ ಟಿಕೆಟ್ ಮಾಡಿದ್ದ, ಬಸ್ಸಲ್ಲಿದ್ದ ಯಾವನೋ ಕಿಡಿಗೇಡಿಯೊಬ್ಬ ಇದನ್ನು ಗಮನಿಸಿ, ಪುತ್ತೂರಿನ ಬಜರಂಗ ದಳದ ಯುವಕರಿಗೆ ಮಾಹಿತಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಐದಾರು ಯುವಕರು ತಮ್ಮ ಕಾರಲ್ಲಿ ಬಸ್ಸನ್ನು ಬೆಂಬತ್ತಿ ಬಂದು ಆನೆಗುಂಡಿಯಲ್ಲಿ ಅಡ್ಡಗಟ್ಟಿದರು.ಯುವಕರು ಬಸ್ಸೇರಿ ಎದುರು ಸೀಟಿನಲ್ಲಿ ಕುಳಿತಿದ್ದ ನೌಷಾದ್ನನ್ನು ವಿಚಾರಿಸಿದರಲ್ಲದೆ ಆತನ ಮೊಬೈಲ್ ಕಿತ್ತುಕೊಂಡು, ಯುವತಿಯರ ಜತೆ ಆತ ಮಾತನಾಡುತ್ತಿದ್ದ ಬಗ್ಗೆ ಪ್ರಶ್ನಿಸಿದರು.ಆ ಯುವತಿಯರು ಮತ್ತು ಬಸ್ ನಿರ್ವಾಹಕ ಇದನ್ನು ನಿರಾಕರಿಸಿದರು.
ಆ ಸಂದರ್ಭ ಅದೇ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸರೊಬ್ಬರು, ಬಸ್ಸಲ್ಲಿ ಈ ರೀತಿ ಜಗಳ ಮಾಡಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಏನಿದ್ದರೂ ಸುಳ್ಯ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಇತ್ಯರ್ಥ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನು ಒಪ್ಪಿಕೊಂಡ ಬಜರಂಗ ದಳದ ಯುವಕರು ಬಸ್ಸನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಬೇಕೆಂದು ಚಾಲಕ ಮತ್ತು ನಿರ್ವಾಹಕರಿಗೆ ತಾಕೀತು ಮಾಡಿ, ತಮ್ಮ ಕಾರಲ್ಲಿ ಬಸ್ಸನ್ನು ಹಿಂಬಾಲಿಸತೊಡಗಿದರು.
ಪೈಚಾರ್ನಲ್ಲಿ ಪ್ರಯಾಣಿಕರೊಬ್ಬರನ್ನು ಇಳಿಸುವುದಕ್ಕಾಗಿ ಬಸ್ ನಿಂತಾಗ ನೌಷಾದ್ ಕೂಡ ಬಸ್ನಿಂದ ಇಳಿದು ತನ್ನ ಸೇಹಿತರಿಗೆ ವಿಷಯ ತಿಳಿಸಿ, ತನ್ನ ಮೊಬೈಲನ್ನು ವಿನಾಕಾರಣ ಬಜರಂಗ ದಳದ ಯುವಕರು ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾನೆ. ಪೈಚಾರ್ನಲ್ಲಿ ಜನ ಜಮಾಯಿಸಿದರು.
ಬಸ್ಸನ್ನು ಬಜರಂಗ ದಳದ ಯುವಕರು ಹಿಂಬಾಲಿಸುತ್ತಿರುವ ಮಾಹಿತಿ ಮೊದಲೇ ಬಂದ ಹಿನ್ನೆಲೆಯಲ್ಲಿ ಸುಳ್ಯ ಎಸ್ಐ ಹರೀಶ್ ಎಂ.ಆರ್. ಅವರು ಪೈಚಾರ್ಗೆ ಧಾವಿಸಿದರು. ಆ ವೇಳೆಗೆ ಬಸ್ ನಿಂತು ಜನ ಸೇರಿದ್ದರು. ಬಸ್ಸನ್ನು ಠಾಣೆಗೆ ತರುವಂತೆ ಸೂಚಿಸಿದ ಎಸ್ಐ, ಬಜರಂಗ ದಳದ ಐವರು ಯುವಕರನ್ನು ಕರೆದುಕೊಂಡು ಠಾಣೆಗೆ ಬಂದರು. ಠಾಣೆಯಲ್ಲಿ ಆ ಇಬ್ಬರು ಯುವತಿಯರು ಮತ್ತು ನೌಷಾದ್ನನ್ನು ವಿಚಾರಣೆಗೆ ಒಳಪಡಿಸಲಾಯಿತು.
ಆ ವೇಳೆಗೆ ಪುತ್ತೂರಿನಿಂದ ಬಜರಂಗದಳದ ಮುಖಂಡರಾದ ಅಜಿತ್ ರೈ ಹೊಸಮನೆ, ನ್ಯಾಯವಾದಿ ಚಿನ್ಮಯ್ ಮತ್ತಿತರ ಯುವಕರು ಮತ್ತು ಸುಳ್ಯದ ಬಜರಂಗ ದಳದ ಯುವಕರು ಪೋಲಿಸ್ ಠಾಣೆಗೆ ಬಂದರು. ನೌಷಾದ್ನ ಮತ್ತು ಆ ಯುವತಿಯರ ಮೊಬೈಲ್ ಪರಿಶೀಲಿಸಿದಾಗ ಅವರ ನಂಬರ್ಗಳು ಎರಡೂ ಮೊಬೈಲ್ಗಳಲ್ಲಿ ಇರಲಿಲ್ಲ. ಎರಡೂ ಕಡೆಯವರು ತಮಗೆ ಪರಿಚಯವೇ ಇಲ್ಲದ ಬಗ್ಗೆ ಹೇಳಿಕೊಂಡರಲ್ಲದೆ ಬಸ್ಸಲ್ಲಿ ಕೂಡ ಪರಸ್ಪರ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದರು. ಇದನ್ನು ಬಸ್ ಕಂಡಕ್ಟರ್ ಕೂಡ ಖಚಿತಪಡಿಸಿದರು.
ಬಜರಂಗ ದಳದ ಯುವಕರನ್ನು ಲಾಕಪ್ನಲ್ಲಿ ಕೂರಿಸಲು ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಸಿಬ್ಬಂದಿಗೆ ಹೇಳಿದಾಗ ಬಜರಂಗ ದಳದ ಮುಖಂಡರು ಎಸ್ಐ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ರನ್ನು ಪ್ರಶ್ನಿಸತೊಡಗಿದರು. ಇದನ್ನು ಎಸ್ಐ ಹರೀಶ್ ವಿರೋಧಿಸಿ, ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುವ ಬಗ್ಗೆ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯವಿದೆ. ಅದನ್ನು ನೀವು ಪ್ರಶ್ನಿಸುವಂತಿಲ್ಲ ಎಂದರು. ಬಜರಂಗ ದಳದ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯೆ ಸುಮಾರು 1 ಗಂಟೆ ಚಕಮಕಿ ನಡೆದು ಬಳಿಕ ಯುವಕನನ್ನು ಅಲ್ಲೇ ಬಿಟ್ಟು ಯುವತಿಯರೊಂದಿಗೆ ಬಸ್ಸನ್ನು ಕಳಿಸಿಕೊಡಲಾಗಿದೆ.
















ಇನ್ನಷ್ಟು ಸುದ್ದಿಗಳು
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ