janadhvani

Kannada Online News Paper

ಡೆಲ್ಟಾ ಭೀತಿ: ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ RTPCR ರಿಪೋರ್ಟ್ ಕಡ್ಡಾಯ

ಬೆಂಗಳೂರು,ಜು. 1: ಕೇರಳ ರಾಜ್ಯದಲ್ಲಿ ಡೆಲ್ಟಾ ಸೋಂಕಿನ ಭೀತಿ ಎದುರಾಗಿರುವ ಹಿನ್ನಲೆ ಇನ್ಮುಂದೆ ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ನೆರೆಯ ರಾಜ್ಯದಿಂದ ಆಗಮಿಸುವವರು ಆರ್ಟಿಪಿಸಿಆರ್ ನೆಗಟಿವ್ ವರದಿ ಅಥವಾ ಕೋವಿಡ್ ವಾಕ್ಸಿನೇಷನ್ ಪ್ರಮಾಣ ಪತ್ರವನ್ನು ತೋರಿಸಿಯೇ ಕರ್ನಾಟಕಕ್ಕೆ ಬರಬೇಕು ಎಂದು ಸೂಚನೆ ನೀಡಲಾಗಿದೆ.

ಇಷ್ಟು ದಿನ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಮಿಸುವವರಿಗೆ ಈ ನಿರ್ಬಂಧ ವಿಧಿಸಲಾಗಿತ್ತು. ಈಗ ಕೇರಳದಲ್ಲೂ ಡೆಲ್ಟಾ ಸೋಂಕಿನ ಭೀತಿ ಮೂಡಿರುವ ಹಿನ್ನಲೆ ಈ ಕ್ರಮ ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಟಾಕ್ಸಿ, ಸಾರಿಗೆ, ಸ್ವಂತ ವಾಹನ ಅಥವಾ ರೈಲು ಮತ್ತು ವಿಮಾನದ ಮೂಲಕ ಬರುವವರು 72 ಗಂಟೆ ಮುಂಚಿತವಾಗಿ ಪರೀಕ್ಷೆಗೆ ಒಳಪಟ್ಟು ನೆಗಟಿವ್ ವರದಿ ತರಬೇಕಿರುವುದು ಕಡ್ಡಾಯವಾಗಿದೆ

ಕೇರಳ ಮತ್ತು ಕರ್ನಾಟಕದ ವಿಮಾನ ಸಂಚಾರ ನಡೆಸುವವರು ಕೂಡ 72 ಗಂಟೆ ಮುಂಚಿತವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟಿರಬೇಕು. ಅವರ ವರದಿ ನೆಗಟಿವ್ ಇದ್ದರೆ ಮಾತ್ರ ವಿಮಾನ ಸಂಸ್ಥೆಗಳು ಬೋರ್ಡಿಂಗ್ ಪಾಸ್ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ರೈಲಿನಲ್ಲಿ ಪ್ರವೇಶಿಸುವ ಕೇರಳ ಪ್ರವಾಸಿಗರ ಮಾಹಿತಿಯನ್ನು ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಬಸ್ನಲ್ಲಿ ಕಂಡಕ್ಟರ್ಗಳು ಈ ಕುರಿತು ಕೂಲಂಕುಷ ಪರಿಶೀಲನೆ ನಡೆಸಬೇಕು.

ಇಷ್ಟೇ ಅಲ್ಲದೇ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಗಡಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಕಟ್ಟೆಚ್ಚರವಹಿಸಬೇಕು. ರಾಜ್ಯಕ್ಕೆ ಪ್ರವೇಶಿಸುವ ಕೇರಳದ ಎಲ್ಲರು ತಪಾಸಣೆಗೆ ಒಳಪಡಿಸುವ ಅಗತ್ಯ ಇದೆ. ಅಲ್ಲದೇ, ಚೆಕ್ಪೋಸ್ಟ್ ನಿರ್ಮಿಸಬೇಕು ಎಂದು ಸೂಚನೆ ನೀಡಲಾಗಿದೆ.

ಶಿಕ್ಷಣ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ಕರ್ನಾಟಕಕ್ಕೆ ಭೇಟಿ ನೀಡುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು 15 ದಿನಗಳಿಗೊಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ನೆಗೆಟಿವ್ ರಿಪೋರ್ಟ್ ನೀಡಿದರೆ ಸಾಕು. ಎರಡು ಡೋಸ್ ಲಸಿಕೆ ಪಡೆದಿದ್ದರೇ ಟೆಸ್ಟ್ ಬೇಕಿಲ್ಲ. ಕೆಲವು ತುರ್ತು ಸಂದರ್ಭದಲ್ಲಿ ಟೆಸ್ಟ್ ಕಡ್ಡಾಯವಲ್ಲ. ಎರಡು ವರ್ಷದ ಒಳಗಿನ ಮಕ್ಕಳಿಗೆ ಟೆಸ್ಟ್ ಕಡ್ಡಾಯವಲ್ಲ.

ಯಾವುದೇ ವ್ಯಕ್ತಿಯು ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ 2020, ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಐಪಿಸಿಯ ಇತರ ಸಂಬಂಧಿತ ವಿಭಾಗಗಳ ಪ್ರಕಾರ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

error: Content is protected !! Not allowed copy content from janadhvani.com