ನವ ದೆಹಲಿ: ಹಲವು ಹೋರಾಟ ಹಾಗೂ ವಿರೋಧದ ನಡುವೆಯೂ ಕೇಂದ್ರ ಸರ್ಕಾರ 2019ರಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡುತ್ತಿದ್ದ ವಿಶೇಷ ಸ್ಥಾನಮಾನ ಕಲಂ 370 ಅನ್ನು ರದ್ದು ಮಾಡಿತ್ತು. ಅಲ್ಲದೆ, ಕಣಿವೆ ರಾಜ್ಯದ ರಾಜತ್ವವನ್ನೂ ರದ್ದು ಮಾಡಿ ಮೂರು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಂಗಡಣೆ ಮಾಡಿತ್ತು. ಇದಾಗಿ ಎರಡು ವರ್ಷಗಳ ಅಂತರದಲ್ಲಿ ಹಲವಾರು ರಾಜಕೀಯ ನೇತಾರರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. ಹೀಗಾಗಿ ಜಮ್ಮು-ಕಾಶ್ಮೀರದಲ್ಲಿ ಚುನಾವಣೆಯನ್ನೂ ನಡೆಸಲಾಗಿರಲಿಲ್ಲ. ಆದರೆ, ಇದೀಗ ಗುರುವಾರ ಜಮ್ಮು-ಕಾಶ್ಮೀರದಲ್ಲಿ ಸರ್ವಪಕ್ಷಗಳ ಸಭೆ ನಡೆದಿದೆ.
ಈ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, “ಕಣಿವೆ ರಾಜ್ಯದಲ್ಲಿ ಮೊದಲು ಚುನಾವಣೆ ನಡೆಯಲಿ, ವಿಧಾನಸಭೆ ಚುನಾವಣೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ತದನಂತರ ರಾಜತ್ವ ಸ್ಥಾನಮಾನವನ್ನು ಮರಳಿ ನೀಡುವ ಕುರಿತು ಚಿಂತನೆ ನಡೆಸೋಣ” ಎಂದು ತಿಳಿಸಿದ್ದಾರೆ. ಮೋದಿ ಅವರ ಈ ಪ್ರಸ್ತಾವನೆಗೆ ಎಲ್ಲಾ ಪಕ್ಷಗಳೂ ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ.
ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಜಮ್ಮು-ಕಾಶ್ಮೀರದ ನಾಯಕರಿಗೆ ಭರವಸೆ ನೀಡಿದ್ದು, “ಚುನಾವಣೆ ನಡೆಸಿ ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜತ್ವ ಸ್ಥಾನಮಾನ ನೀಡಲು ನಾವು ಬದ್ಧವಾಗಿದ್ದೇವೆ. ಅಲ್ಲದೆ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಸಮಿತಿಯ ಮೂಲಕ ರಾಜಕೀಯ ನಾಯಕರ ಬಂಧನಗಳ ಪರಿಶೀಲನೆಯೂ ನಡೆಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಸರ್ವ ಪಕ್ಷಗಳ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ, “ಕೇಂದ್ರ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರವನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಆರಂಭಿಕ ಡಿಲಿಮಿಟೇಶನ್ ಪ್ರಕ್ರಿಯೆಯ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. ಅಂದರೆ ಅವರು ಅದನ್ನು ಅಸೆಂಬ್ಲಿ ಚುನಾವಣೆಗಳೊಂದಿಗೆ ಅನುಸರಿಸಲು ನೋಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ತಿಳಿಸಿದ್ದಾರೆ.
ಇನ್ನೂ ಸರ್ವಪಕ್ಷಗಳ ಸಭೆಯಲ್ಲಿ ಮತ್ತೋರ್ವ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸಹ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದು,” ಶೀಘ್ರದಲ್ಲೇ ಜಮ್ಮು-ಕಾಶ್ಮೀರಕ್ಕೆ ಕಲಂ 370ರ ಅನ್ವಯ ವಿಶೇಷ ಸ್ಥಾನಮಾನವನ್ನು ಪುನಃ ಜಾರಿ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ. ಆದರೆ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿಸುವ ಕುರಿತು ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಸರ್ವಪಕ್ಷ ಸಭೆಯ ಬಳಿಕ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, “ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರೊಂದಿಗಿನ ಇಂದಿನ ಸಭೆ ಅಭಿವೃದ್ಧಿ ಹೊಂದಿದ ಮತ್ತು ಪ್ರಗತಿಪರ ಜಮ್ಮು-ಕಾಶ್ಮೀರದ ಕಡೆಗೆ ನಡೆಯುತ್ತಿರುವ ಪ್ರಯತ್ನಗಳಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಕಣಿವೆ ರಾಜ್ಯದಲ್ಲಿ ಸರ್ವತೋಮುಖ ಬೆಳವಣಿಗೆಯನ್ನು ಹೆಚ್ಚಿಸಲಾಗಿದೆ. ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ಡಿಲಿಮಿಟೇಶನ್ ತ್ವರಿತಗತಿಯಲ್ಲಿ ನಡೆಯಬೇಕಾಗಿರುವುದರಿಂದ ಮೊದಲು ಮತದಾನ ನಡೆದು ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರಲಿದೆ.
ಚುನಾಯಿತ ಸರ್ಕಾರ ಜಮ್ಮು-ಕಾಶ್ಮೀದ ಅಭಿವೃದ್ಧಿ ಪಥಕ್ಕೆ ಶಕ್ತಿ ನೀಡುತ್ತದೆ. ನಮ್ಮ ಪ್ರಜಾಪ್ರಭುತ್ವದ ಅತಿದೊಡ್ಡ ಶಕ್ತಿ ಎಂದರೆ ಮೇಜಿನ ಮೇಲೆ ಕುಳಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಸಾಮರ್ಥ್ಯ. ಜಮ್ಮು-ಕಾಶ್ಮೀರ ನಾಯಕರಿಗೆ ನಾನು ಹೇಳಿದ್ದೇನೆಂದರೆ, ಜನರು, ವಿಶೇಷವಾಗಿ ಯುವಕರಿಗೆ ಕಣಿವೆ ರಾಜ್ಯದ ರಾಜಕೀಯ ನಾಯಕತ್ವವನ್ನು ಒದಗಿಸಬೇಕು ಮತ್ತು ಅವರ ಆಕಾಂಕ್ಷೆಗಳನ್ನು ಸರಿಯಾಗಿ ಈಡೇರಿಸಿಕೊಳ್ಳಬೇಕು” ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ಮೂರೂವರೆ ಗಂಟೆಗಳ ಕಾಲ ಪ್ರಧಾನಮಂತ್ರಿಯವರ ನಿವಾಸದಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ (ರಾಷ್ಟ್ರೀಯ ಸಮ್ಮೇಳನ), ಗುಲಾಮ್ ನಬಿ ಆಜಾದ್ (ಕಾಂಗ್ರೆಸ್), ಮೆಹಬೂಬಾ ಮುಫ್ತಿ (ಪಿಡಿಪಿ) ಸೇರಿದಂತೆ ಒಟ್ಟು 14 ಜನ ನಾಯಕರು ಭಾಗವಹಿಸಿದ್ದರು.
















ಇನ್ನಷ್ಟು ಸುದ್ದಿಗಳು
ಎಲ್ಲಾ ದೇಶಗಳಿಗೆ ಉಮ್ರಾ ವೀಸಾ ವಿತರಣೆ ಪುನಾರಂಭ: 90 ದಿನಗಳ ವಾಸ್ತವ್ಯ
ಅಸ್ಸಾಂ, ಪಶ್ಚಿಮ ಬಂಗಾಳ ಸಿಎಂಗಳಿಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಇ-ಮೇಲ್ ಸಂದೇಶ- ಅಲ್ಪಸಂಖ್ಯಾತ ಮುಸ್ಲಿಮರ ಆತಂಕ ದೂರಾಗಿಸಲು ಆಗ್ರಹ
ಹಜ್ ಯಾತ್ರಿಕರನ್ನು ಸ್ವಾಗತಿಸಲು ಮದೀನಾ ಸಜ್ಜು: ಸುಗಮ ಪ್ರಯಾಣಕ್ಕಾಗಿ ರಸ್ತೆ ದುರಸ್ತಿ ಕಾರ್ಯಗಳು ಪೂರ್ಣ
ಅಬ್ದುಲ್ ರಹೀಮ್ ಬಿಡುಗಡೆ ಆದೇಶಕ್ಕೆ ಸಹಿ – 20 ವರ್ಷಗಳ ಸೆರೆಮನೆ ವಾಸಕ್ಕೆ ಕೊನೆಗೂ ಮುಕ್ತಿ
ಬಕ್ರೀದ್ ‘ಈದ್ ಅಲ್-ಅದ್ಹಾ’ ; 382 ಕೈದಿಗಳ ಬಿಡುಗಡೆ- ಒಮಾನ್ ದೊರೆ ಆದೇಶ
ಈದುಲ್ ಅದ್’ಹಾ ಮುಬಾರಕ್ – ಯುಎಇ ಯಲ್ಲಿ 2700 ಕ್ಕೂ ಹೆಚ್ಚು ಖೈದಿಗಳಿಗೆ ಬಿಡುಗಡೆ ಭಾಗ್ಯ
‘ಲಬ್ಬೈಕ್ ಅಲ್ಲಾಹುಮ್ಮ ಲಬ್ಬೈಕ್’ ಪುಣ್ಯ ಭೂಮಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಯಾತ್ರಿಕರ ಸಮಾಗಮ- ಇಂದು ‘ಅರಫಾತ್ ಸಂಗಮ’
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವೈದ್ಯಕೀಯ ಕ್ಷೇತ್ರಕ್ಕೆ ಗಂಭೀರ ಸವಾಲು : ಎಸ್ಸೆಸ್ಸೆಫ್ ಬೆಂಗಳೂರು
ಕಾನೂನುಬದ್ಧ ಬಲಿದಾನಕ್ಕೆ ಪೊಲೀಸ್ ಸಂರಕ್ಷಣೆ ನೀಡಿ- ಗೃಹ ಸಚಿವರಿಗೆ ಮೌಲಾನಾ ಶಾಫಿ ಸಅದಿ ಮನವಿ
‘ನನ್ನನ್ನು ತಿಹಾರ್ ಜೈಲಿಗೆ ಹಾಕಬಹುದು’; ಆತಂಕ ಹಂಚಿಕೊಂಡ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ