janadhvani

Kannada Online News Paper

ಗಣರಾಜ್ಯೋತ್ಸವ: ಪ್ರತಿಭಟನಾ ನಿರತ ರೈತರಿಂದ ಟ್ರ್ಯಾಕ್ಟರ್ ಮೆರವಣಿಗೆ

ನವದೆಹಲಿ,ಜ.25: ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ 11ನೇ ಸುತ್ತಿನ ಸಭೆಯೂ ವಿಫಲವಾಗಿದೆ. ಹೀಗಾಗಿ ಪ್ರತಿಭಟನಾನಿರತ ರೈತರು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ನಿಶ್ಚಯಿಸಿದ್ದಾರೆ. ಈ ಪ್ರತಿಭಟನಾತ್ಮಕ ಟ್ರ್ಯಾಕ್ಟರ್ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ.

ರೈತ ಮುಖಂಡರ ಜೊತೆ ಸಭೆ ನಡೆಸಿದ ದೆಹಲಿ ಪೊಲೀಸರು ಕಡೆಗೂ ರೈತರ ಪಟ್ಟಿಗೆ ಮಣಿದು ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಯಾವ್ಯಾವ ರಸ್ತೆಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಸಾಗಬಹುದೆಂಬ ರೂಟ್ ಮ್ಯಾಪ್ ಅನ್ನು ಪೊಲೀಸರು ಭಾನುವಾರ ರೈತರಿಗೆ ನೀಡಿದ್ದರು. ದೆಹಲಿಯ ಹೊರವಲಯದಲ್ಲಿ ಗಡಿಗೆ ಹೊಂದಿಕೊಂಡಂತೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಒಪ್ಪದ ರೈತರು ದೆಹಲಿಯ ಇನ್ನರ್ ರಿಂಗ್ ರೋಡ್ ವರೆಗೂ ಅವಕಾಶ ನೀಡುವಂತೆ ಕೇಳಿದ್ದಾರೆ.

ಸಿಂಘು, ಗಾಜಿಯಾಬಾದ್ ಹಾಗೂ ಟಿಕ್ರಿ ಗಡಿಗಳಿಂದ ಟ್ರ್ಯಾಕ್ಟರ್ ಮೆರವಣಿಗೆ ಹೊಡಲು ಹೇಳಿರುವುದರಿಂದ ಮೂರು ಗಡಿಗಳಲ್ಲಿ ಈಗಾಗಲೇ ಟ್ರ್ಯಾಕ್ಟರ್ ಗಳು ಸಿದ್ದಗೊಂಡು ನಿಂತಿವೆ. ರಾಜಪಥದಲ್ಲಿ ಕೇಂದ್ರ ಸರ್ಕಾರದ ಅಧಿಕೃತ ಪಥಸಂಚಲನ ಮುಗಿದ ಬಳಿಕ ಗಡಿಯಿಂದ ಟ್ರ್ಯಾಕ್ಟರ್ ಮೆರವಣಿಗೆ ಶುರುವಾಗಲಿದೆ‌.

ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ದೇಶದ ವಿವಿಧ ಭಾಗಗಳ ಕಲೆ, ಸಂಸ್ಕೃತಿ, ಜನ ಜೀವನ ಬಿಂಬಿಸುವ ಸ್ತಬ್ದಚಿತ್ರಗಳ ಪ್ರದರ್ಶನ ಇರಲಿದೆ. ಅದೇ ರೀತಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್ ಮೆರವಣಿಗೆಯಲ್ಲೂ ಸ್ತಬ್ದ ಚಿತ್ರಗಳನ್ನು ಕಾಣಬಹುದಾಗಿದೆ. ರೈತರ ಸ್ತಬ್ದ ಚಿತ್ರಗಳಲ್ಲಿ ಕೃಷಿಕರ ಬದುಕು, ಬವಣೆ, ಕೃಷಿಯ ಜೊತೆಗೆ ಬೆಸೆದುಕೊಂಡಿರುವ ಹೈನುಗಾರಿಕೆ, ದೇಶದ ವಿವಿಧ ಭಾಗಗಳಲ್ಲಿ ಇರುವ ಭಿನ್ನ ಭಿನ್ನ ಕೃಷಿ ಪದ್ಧತಿಗಳ ಪ್ರದರ್ಶನ ಇರಲಿದೆ.

ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಾಖಂಡದಂತಹ ಕಣಿವೆ ಪ್ರದೇಶಗಳಲ್ಲಿ ಕಂಡುಬರುವ ಕೃಷಿ ಪದ್ಧತಿಯನ್ನೂ ಬಿಂಬಿಸಲಾಗಿದೆ. ಪಂಜಾಬ್ ಹಾಗೂ ಹರಿಯಾಣದ ರೈತರು ಹಸಿರು ಕ್ರಾಂತಿ ಬಗ್ಗೆ ಸ್ತಬ್ಧ ಚಿತ್ರಗಳ ಪ್ರದರ್ಶನ ಇರಲಿದೆ. ಮಹಾರಾಷ್ಟ್ರದ ವಿದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಕೂಡ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಲಕ್ಷಗಟ್ಟಲೆ ಟ್ರ್ಯಾಕ್ಟರ್-ಟ್ರಾಲಿಗಳು

ರೈತರ ಪ್ರತಿಭಟನಾತ್ಮಕ ಟ್ರ್ಯಾಕ್ಟರ್ ಪರೇಡ್ನಲ್ಲಿ ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಿಂದಲೇ ಸುಮಾರು ಒಂದು ಲಕ್ಷ ಟ್ರ್ಯಾಕ್ಟರ್-ಟ್ರಾಲಿಗಳು ಭಾಗವಹಿಸಲಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಎಲ್ಲಾ ಟ್ರ್ಯಾಕ್ಟರ್ ಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಶೇಕಡಾ 30ರಷ್ಟು ಟ್ರ್ಯಾಕ್ಟರ್ ಗಳಲ್ಲಿ ರೈತರ ಚಳವಳಿಯ ಇತಿಹಾಸವನ್ನು ತಿಳಿಸುವ ಸ್ತಬ್ದ ಚಿತ್ರಗಳಿರಲಿವೆ.‌

ಕೃಷಿಯಲ್ಲಿ ಮತ್ತು ರೈತ ಚಳವಳಿಯಲ್ಲಿ ಮಹಿಳಾ ರೈತರ ಪಾತ್ರದ ಬಗ್ಗೆಯೂ ಕೂಡ ಸ್ತಬ್ದಚಿತ್ರಗಳು ಬೆಳಕು ಚೆಲ್ಲಲಿವೆ. ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಸುಮಾರು 50ಕ್ಕೂ ಹೆಚ್ಚು ರೈತ ಸಂಘಟನೆಗಳು ಪಾಲ್ಗೊಳ್ಳುತ್ತಿದ್ದು ಎಲ್ಲಾ ಸಂಘಟನೆಗಳಿಗೂ ಭಿನ್ನ ಭಿನ್ನ ವಿಷಯದ ಬಗ್ಗೆ ಸ್ತಬ್ದ ಚಿತ್ರ ರೂಪಿಸಲು ತಿಳಿಸಲಾಗಿದೆ.

error: Content is protected !! Not allowed copy content from janadhvani.com