janadhvani

Kannada Online News Paper

ಎನ್‍ಡಿಎ, ಇವಿಎಂ ತಿರುಚಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದೆ

ಪಾಟ್ನಾ,ನ.12-ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟ ಹಣಬಲ ಮತ್ತು ತೋಳ್ಬಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದೆ ಎಂದು ಆರ್ ಜೆಡಿಯ ಯುವ ನಾಯಕ ತೇಜಸ್ವಿಯಾದವ್ ಆರೋಪಿಸಿದ್ದಾರೆ

ಆರ್ ಜೆ ಡಿ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಜೊತೆಗೆ ಮಹಾ ಘಟಬಂಧನ್‍ಗೆ ಜನರ ಬೆಂಬಲವಿದೆ.ಹೀಗಾಗಿ ನಾವೇ ಗೆದ್ದಿರುವುದು ಎಂದು ವಿಧಾನಸಭೆ ಉಪ ಚುನಾವಣೆಯ ಬಳಿಕ ಮೊಟ್ಟ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಹುದ್ದೆ ಆರ್‍ಜೆಡಿ ಪಾಲಾಗಬೇಕೆಂದು ಜನ ಬಯಸಿದ್ದರು ಆದರೆ ಎನ್‍ಡಿಎ ಅದನ್ನು ಅಕ್ರಮದ ಮೂಲಕ ಕಸಿದಿದೆ ಎಂದು ಆರೋಪಿಸಿದ್ದಾರೆ.

ಬಿಹಾರದ ಜನತೆ ಮಹಾಘಟಬಂಧನ್ ಗೆ ಮತ ನೀಡಿದ್ದಾರೆ. ಇದು ಮಹಾಘಟಬಂಧನ್‍ಗೆ ಸಿಕ್ಕ ಜಯ ಆದರೆ ಎನ್‍ಡಿಎ ಅಕ್ರಮದ ಮೂಲಕ ಅದನ್ನು ತನ್ನದಾಗಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಎನ್‍ಡಿಎ ಮೈತ್ರಿಕೂಟ ಹಿಂಬಾಗಿಲ ಮೂಲಕ ಅಧಿಕಾರ ಹಿಡಿದಿದೆ. ಹೆಚ್ಚು ದಿನ ಇರುವುದಿಲ್ಲ ಮುಂದೊಂದು ದಿನ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ. ಜನರ ಬೆಂಬಲ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಭುತ್ವ ಉಳಿಸಲು ಮತಪತ್ರಗಳೇ ಬರಬೇಕು

ವಿದ್ಯುನ್ಮಾನ ಮತ ಯಂತ್ರಗಳನ್ನು ತಮ್ಮ ಬಳಕೆಗೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ಉಳಿಸಬೇಕಾದಲ್ಲಿ, ಮತ್ತೆ ಮತಪತ್ರಗಳೇ ಬರಬೇಕು ಎಂದು ಅವರು ತಿಳಿಸಿದ್ದಾರೆ.

ನಿತೀಶ್ ಕುಮಾರ್ ಅವರು ಮತ್ತೆ ಮುಖ್ಯಮಂತ್ರಿಯಾಗಿರಬಹುದು ಆದರೆ ಜನರ ಮನಸ್ಸಿನಲ್ಲಿ ನಾವು ಇದ್ದೇವೆ. ಮುಂದೆ ಜನರು ನಮಗೆ ಅಧಿಕಾರ ನೀಡಲಿದ್ದಾರೆ. ಈ ರೀತಿಯ ಹಿಂಬದಿಯಿಂದ ಅಧಿಕಾರ ಹಿಡಿಯುವ ಮಂದಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

error: Content is protected !! Not allowed copy content from janadhvani.com