ಸುಬ್ರಹ್ಮಣ್ಯ: ಕಡಬ ತಾಲೂಕು ಕುಕ್ಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನುಷ್ ಎ.ಎಲ್. 2019-20ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದುಕೊಂಡಿದ್ದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ.
ಬಳ್ಪ ಗ್ರಾಮದ ಲೊಕೇಶ್ ಮತ್ತು ಉಷಾ ಎಣ್ಣೆಮಜಲು ದಂಪತಿಗಳ ಪುತ್ರ ಅನುಷ್ ದ.ಕ.ಜಿಲ್ಲೆಗೆ ಅಭಿಮಾನವಾಗಿ ಹೊರಹೊಮ್ಮಿರುತ್ತಾರೆ.
ಅನುಷ್ ಮಹತ್ವಾಕಾಂಕ್ಷೆ
‘ನಾನು ಗ್ರಾಮೀಣ ಭಾಗದಲ್ಲಿ ಬೆಳೆದಿದ್ದು, ನಮ್ಮ ಶಾಲೆಯೂ ಪ್ರಕೃತಿ ಮಡಿಲಲ್ಲಿದೆ. ಪರಿಸರ ಮತ್ತು ವಿಜ್ಞಾನವು ನನ್ನ ಇಷ್ಟದ ವಿಷಯ. ಅದಕ್ಕಾಗಿ ಐಎಫ್ಎಸ್ ಮಾಡಿ, ಅರಣ್ಯ–ವನ್ಯಜೀವಿ ರಕ್ಷಣೆ ಮಾಡಬೇಕು ಎಂಬುದು ನನ್ನ ತುಡಿತ…’ ಎಂದು ಅನುಷ್ ಎ.ಎಲ್. ತನ್ನ ಕನಸುಗಳನ್ನು ಹಂಚಿಕೊಂಡಿದ್ದಾರೆ.
‘ಕೊರೊನಾ ಲಾಕ್ಡೌನ್ನಿಂದ ಓದಲು ಅವಕಾಶ ಸಿಕ್ಕಿತು. ಆದರೆ, ಶಿಕ್ಷಕರ ಹಾಗೂ ಹೆಚ್ಚುವರಿ ಪುಸ್ತಕಗಳ ಪ್ರಯೋಜನ ಪಡೆಯಲು ಹಿನ್ನಡೆಯಾಯಿತು. ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡ ಕೂಡಲೇ ಪೂರ್ಣ ತಯಾರಿಯಲ್ಲಿ ತಲ್ಲೀನನಾದೆ’ ಎಂದು ಲಾಕ್ಡೌನ್ ಕುರಿತು ಪ್ರತಿಕ್ರಿಯಿಸಿದರು.
‘ವಿಜ್ಞಾನ ಮಾದರಿ ತಯಾರಿ, ಭಾಷಣ, ಕಾರ್ಯಕ್ರಮ ನಿರೂಪಣೆ ಹಾಗೂ ವಾಲಿಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ನನ್ನ ಪಠ್ಯೇತರ ಆಸಕ್ತಿಗಳು. ಆದರೆ, ಪ್ರತಿನಿತ್ಯ ಐದು ಗಂಟೆ ಅಧ್ಯಯನ ಮಾಡುತ್ತಿದ್ದೆನು. ಯಾವುದೇ ಕೋಚಿಂಗ್ಗೆ ಹೋಗಿಲ್ಲ’ ಎಂದರು.
‘ಮೊದಲ ರ್ಯಾಂಕ್ ಎಂದು ಅಪ್ಪ ಹೇಳುವಾಗ, ಶಾಕ್, ಖುಷಿ ಎಲ್ಲವೂ ಒಮ್ಮೆಗೆ ಆಯಿತು’ ಎಂದು ಸಂಭ್ರಮಿಸಿದರು.