ಶಿವಮೊಗ್ಗ: ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುವ ಶುಲ್ಕವನ್ನು ಅರ್ಧಕ್ಕಿಳಿಸಬೇಕು ಇದನ್ನು ವಿರೋಧಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ಮಾಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ತ್ಯಾಗ ಮಾಡಬೇಕು. ಈಗ ಬಂದಿರುವ ಸಮಸ್ಯೆ ಇಡೀ ಪ್ರಪಂಚದ ಸಮಸ್ಯೆ. ಕೋವಿಡ್ 19ಗೆ ಸಂಬಂಧಿಸಿದಂತೆ ವಿಶೇಷ ಕಾನೂನುಗಳಿವೆ. ಆ ಕಾನೂನುಗಳನ್ನೇ ಖಾಸಗಿ ಶಿಕ್ಷಣಸಂಸ್ಥೆಗಳ ಮೇಲೆಯೂ ಬಳಕೆ ಮಾಡಬೇಕು ಎಂದು ಅವರು ತಿಳಿಸಿದರು.
ಸದ್ಯ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮುಂಜಾಗ್ರತಾ ಕ್ರಮಕೈಗೊಂಡು ಮಾಡಬೇಕು. ಪರೀಕ್ಷೆ ನಡೆಯುವ ಆರು ದಿನಗಳ ಕಾಲ ಮತ್ತೆ ಲಾಕ್ಡೌನ್ ಘೋಷಣೆ ಮಾಡಬೇಕು. ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಮಾತ್ರ ಹೊರಗೆ ಹೋಗಲು ಅವಕಾಶ ನೀಡಬೇಕು ಎಮದು ಅವರು ಸಲಹೆ ನೀಡಿದರು.
ಇನ್ನು ಶಾಲೆಗಳನ್ನು ಆಗಸ್ಟ್ 15ರ ವರೆಗೆ ಯಾವುದೇ ಕಾರಣಕ್ಕೂ ಆರಂಭಿಸಬಾರದು. ಇಂದಿನ ಸ್ಥಿತಿಗತಿಯಲ್ಲಿ ನಾವು ಹಸಿವು ಹಾಗೂ ಸಾವನ್ನು ಮೆಟ್ಟಿನಿಲ್ಲಬೇಕಿದೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಬಲಿ ಕೊಡುವುದು ಸರಿಯಲ್ಲ. ಜೂನ್ ಅಂತ್ಯ ಅಥವಾ ಜುಲೈನಲ್ಲಿ ಕೋವಿಡ್-19 ಸ್ಥಿತಿಗತಿ ಸಂಪೂರ್ಣವಾಗಿ ತಿಳಿಯಲಿದೆ ಬಳಿಕ ಶಾಲೆ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಕಿಮ್ಮನೆ ರತ್ನಾಕರ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.