janadhvani

Kannada Online News Paper

ಮಾಸ್ಕ್ ಗೊಂದಲ: ವೈದ್ಯರೆನ್ನುತ್ತಾರೆ ಧರಿಸುವುದು ಅಪಾಯ- ಧರಿಸದಿದ್ರೆ ಅಧಿಕಾರಿಗಳಿಂದ ದಂಡ

ಬೆಂಗಳೂರು:ಕೋವಿಡ್ ಮಹಾಮಾರಿಯನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳದಲ್ಲಿ ಓಡಾಡುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಬಿಬಿಎಂಪಿ ಆದೇಶಿಸಿದ್ದು, ಮಾಸ್ಕ್ ಧರಿಸದಿರುವ ಜನರಿದೆ ಪೊಲೀಸರು ದಂಡವನ್ನು ವಿಧಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ವೈದ್ಯರು ಮಾತ್ರ ಜನಸಂದಣಿ ಇರದ ಜಾಗದಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಸುದೀರ್ಘ ಕಾಲ ಮಾಸ್ಕ್ ಧರಿಸುವುದೂ ಕೂಡ ಆರೋಗ್ಯಕ್ಕೆ ಅಪಾಯ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಹಾಗೂ ವೈದ್ಯರು ನೀಡುತ್ತಿರುವ ಈ ಭಿನ್ನ ರೀತಿಯ ಹೇಳಿಕೆಗಳು ಯಾವುದನ್ನು ಪಾಲನೆ ಮಾಡಬೇಕೆಂದು ಜನತೆಯನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ.

ಮಾಸ್ಕ್ ಧರಿಸುವ ಕುರಿತು ಹಲವಾರು ವೈದ್ಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದು, ಸುದೀರ್ಘವಾಗಿ ಮಾಸ್ಕ್ ಧರಿಸುವುದರಿಂದ ರಕ್ತಕ್ಕೆ ಸೂಕ್ತ ರೀತಿಯ ಆಮ್ಲಜನಕ ದೊರೆಯದೆ,ಉಸಿರಾಟಕ್ಕೆ ಸಮಸ್ಯೆ ಎದುರಾಗಬಹುದು. ಕೆಲವರಿಗೆ ಹೃದಯಾಘಾತ ಕೂಡ ಸಂಭವಿಸಬಹುದು ಎಂದು ಹೇಳುತ್ತಿದ್ದಾರೆ. ಈ ನಡುವೆ ಇದನ್ನು ಸಾಬೀತುಪಡಿಸಲು ಯಾವುದೇ ರೀತಿಯ ಅಧ್ಯಯನಗಳ ಸಾಕ್ಷ್ಯಾಧಾರಗಳಿಲ್ಲ. ಆದರೆ, ಸಾಕಷ್ಟು ಜನರು ಮಾಸ್ಕ್ ಧರಿಸುವುದರಿಂದ ಕಿರಿಕಿರಿ ಹಾಗೂ ಉಸಿರಾಟ ಸಮಸ್ಯೆ ಎದುರಾಗಿತ್ತಿದೆ ಎಂದು ಸಮಸ್ಯೆ ಹೇಳುತ್ತಿದ್ದಾರೆಂದು ಹೇಳಿಕೊಳ್ಳುತ್ತಿದ್ದಾರೆ.

ಫೋರ್ಟೀಸ್ ಆಸ್ಪತ್ರೆಯ ವೈದ್ಯ ಡಾ.ಮನೀಶ್ ಮಟ್ಟೂ ಮಾತನಾಡಿ, ಈ ವಿಚಾರದ ಬಗ್ಗೆ ಬಹಳಷ್ಟು ತಿಳಿದಿಲ್ಲ. ಮಾಸ್ಕ್ ಧಾರಣೆಯಿಂದ ಸೋಂಕು ಹರಡುವುದು ನಿಯಂತ್ರಣಗೊಳ್ಳುತ್ತದೆ. ಜನರು ಸಾರ್ವಜನಿಕ ಸ್ಥಳಗಳಿಗೆ ತೆರಳಿದಾಗ ಮಾಸ್ಕ್ ಧರಿಸಲು ಸೂಚಿಸಲಾಗುತ್ತಿದೆ. ಆದರೆ, ಅನಾರೋಗ್ಯ ಇದ್ದ ಸಂದರ್ಭದಲ್ಲಿ ಧರಿಸುವುದು ಉತ್ತಮವಲ್ಲ. ಇಂತಹ ಸಂದರ್ಭದಲ್ಲಿ ಹೊರಗೆ ಹೋಗದಿರುವುದೇ ಉತ್ತಮ ಎಂದು ಹೇಳಿದ್ದಾರೆ.

ಎಲ್ಲರೂ ಎನ್-95 ಮಾಸ್ಕ್ ಗಳನ್ನು ಧರಿಸಬಾರದು. ಮನೆಯಲ್ಲಿ ಬಟ್ಟೆಗಳಿಂದ ತಯಾರಿಸಿದ ಮಾಸ್ಕ್ ಗಳನ್ನು ಧರಿಸಬೇಕು. ಇದರಿಂದ ಉಸಿರಾಟ ಸಮಸ್ಯೆಗಳಾಗುವುದಿಲ್ಲ. ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಆದರೆ, ದಂಡ ವಿಧಿಸುವವರು ಜನರು ಯಾವ ಸ್ಥಳದಲ್ಲಿ ಧರಿಸಬೇಕು , ಯಾವ ಸ್ಥಳದಲ್ಲಿ ಅಗತ್ಯವಿರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ದಂಡ ವಿಧಿಸಬೇಕೆಂದು ಮತ್ತೊಬ್ಬ ವೈದ್ಯ ರವಿ ಮೆಹ್ತಾ ಅವರು ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಅವರು ಮಾತನಾಡಿ, ಜನನಿಬಿಡ ಪ್ರದೇಶವಲ್ಲದೆ, ಒಬ್ಬಂಟಿಯಾಗಿ ರಸ್ತೆಯಲ್ಲಿ ಹೋಗುವ ವ್ಯಕ್ತಿ ಮಾಸ್ಕ್ ಧರಿಸಿದಿದ್ದರೆ ಅಂತಹವರಿಗೆ ದಂಡ ಹಾಕದಿರುವ ಕುರಿತು ಇಲಾಖೆ ಚರ್ಚೆ ನಡೆಸುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲಾಗುತ್ತದೆ ಎಂದಿದ್ದಾರೆ.

error: Content is protected !! Not allowed copy content from janadhvani.com