ರಾಜ್ಯದ ಬಹುದೊಡ್ಡ ಅಸಂಘಟಿತ ಕಾರ್ಮಿಕ ವಲಯವಾಗಿರುವ ಬೀಡಿ ಕಾರ್ಮಿಕರ ಬದುಕು ಸಂಕಷ್ಟಕ್ಕೀಡಾಗಿದ್ದು ಅವರಿಗೆ ಲಾಕ್ಡೌನ್ ನಿಂದ ಸೀಮಿತ ರಿಯಾಯಿತಿಯನ್ನು ರಾಜ್ಯಾದ್ಯಂತ ಒದಗಿಸಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.
ಕರಾವಳಿಯಂತೆ ಹಾವೇರಿ, ಧಾರವಾಡ ಜಿಲ್ಲೆಗಳಲ್ಲೂ ಬೀಡಿ ಉದ್ಯಮವನ್ನು ಅವಲಂಬಿಸಿ ಸಾವಿರಾರು ಬಡ ಜನರು ಬದುಕುತ್ತಿದ್ದು, ದೀರ್ಘಕಾಲದ ಲಾಕ್ಡೌನ್ ನಿಂದಾಗಿ ತೀವ್ರವಾದ ಸಮಸ್ಯೆ ಎದುರಿಸುತ್ತಿದ್ದಾರೆ. ಬೀಡಿ ಕಟ್ಟುವುದರಿಂದ ಸಿಗುವ ಮಜೂರಿಯನ್ನು ಮಾತ್ರ ಬದುಕು ಸಾಗಿಸಲು ಅವಲಂಬಿಸಿರುವ ಬೀಡಿ ಕಾರ್ಮಿಕರಿಗೆ ಸಾಕಷ್ಟು ಸಾಮಾಜಿಕ ಅಂತರವನ್ನು ಕಾದುಕೊಂಡು ತಮ್ಮ ವೃತ್ತಿ ನಿರ್ವಹಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅವಕಾಶ ನೀಡಲಾಗಿದೆ.
ಈ ಅವಕಾಶವನ್ನು ರಾಜ್ಯಾದ್ಯಂತ ವಿಸ್ತರಿಸುವ ಮೂಲಕ ಬೀಡಿ ಕಾರ್ಮಿಕರ ಜೀವನೋಪಾಯದ ದಾರಿಯನ್ನು ತೆರೆಯಬೇಕೆಂದು ಕರ್ನಾಟಕ ಮುಸ್ಲಿಂ ಜಮಾತ್ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಂ ಶಾಫಿ ಸಅದಿ ರಾಜ್ಯ ಗೃಹ ಸಚಿವ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದರು.