ಹೊಸದಿಲ್ಲಿ,ಮಾ.31 : 15 ದಿನಗಳ ಹಿಂದೆ ದೆಹಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ತೆಲಂಗಾಣದ 6 ಮಂದಿ ಸೇರಿದಂತೆ ಒಟ್ಟು 10 ಜನ ಮೃತಪಟ್ಟಿದ್ದಾರೆ. ನಿಝಾಮುದ್ದೀನ್ ಪಶ್ಚಿಮ ಪ್ರದೇಶದಲ್ಲಿ ದಿಢೀರನೆ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ಅಧಿಕಾರಿಗಳ ನಿದ್ದೆಗೆಡಿಸಿದೆ.
ದೆಹಲಿಯ ಹಝರತ್ ನಿಝಾಮುದ್ದೀನ್ ಪ್ರದೇಶದ ಬಂಗ್ಲೆವಾಲಿ ಮಸೀದಿಯಲ್ಲಿ ಮಾ.13 ಮತ್ತು 15 ರ ಮಧ್ಯೆ ನಡೆದ ತಬ್ಲೀಗ್ ಜಮಾ ಅತ್ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ ಮೃತಪಟ್ಟ ತೆಲಂಗಾಣ ಸ್ವದೇಶಿಗಳು. ತೆಲಂಗಾಣದ ಆರು ಜನರಲ್ಲಿ ಇಬ್ಬರು ಗಾಂಧಿ ಆಸ್ಪತ್ರೆಯಲ್ಲಿ, ಅಪೊಲೊ ಆಸ್ಪತ್ರೆ, ಜಾಗತಿಕ ಆಸ್ಪತ್ರೆ, ನಿಜಾಮಾಬಾದ್ ಮತ್ತು ಗಡ್ವಾಲ್ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಓರ್ವರು ಕಳೆದ ವಾರ ಶ್ರೀನಗರದಲ್ಲಿ ಮೃತಪಟ್ಟಿದ್ದರು. ಅವರು ಉತ್ತರ ಪ್ರದೇಶದ ದಿಯೋಬಂದ್ ಸೆಮಿನಾರಿಗೆ ಭೇಟಿ ನೀಡಿದ್ದರು ಮತ್ತು ಕಾಶ್ಮೀರಕ್ಕೆ ಹಿಂದಿರುಗಿದ ನಂತರ ಅನೇಕ ಸಭೆಗಳಲ್ಲಿ ಪಾಲ್ಗೊಂಡಿದ್ದರು.
ಈಗಾಗಲೇ ಈ ಸಭೆಯಲ್ಲಿ ಭಾಗವಹಿಸಿದ್ದ 850ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಅವರಲ್ಲಿ 24 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಆತಂಕ ಎದುರಾಗಿದೆ. ಕೊರೋನಾ ಭೀತಿಯಿಂದ ನಿಝಾಮುದ್ದೀನ್ನಿಂದ 1,034 ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ತಬ್ಲೀಗ್ ಜಮಾಅತ್ ಆಯೋಜಿಸಿದ್ದ ಸಭೆಯಲ್ಲಿ ವಿದೇಶಿಯರು ಹಾಗೂ ಭಾರತೀಯ ಅನುಯಾಯಿಗಳು ಸೇರಿ ಸುಮಾರು 2,500ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಸಮ್ಮೇಳನದ ಬಳಿಕ ವಿವಿಧ ರಾಜ್ಯಗಳಿಗೆ ಇವರು ಭೇಟಿ ನೀಡಿದ್ದರು.ಭಾನುವಾರದಿಂದ 800ಕ್ಕೂ ಹೆಚ್ಚು ಜನರ ತಪಾಸಣೆ ಮಾಡಲಾಗಿದೆ. ಸಭೆ ವೇಳೆ ಇದ್ದವರು, ಅವರ ಸಂಪರ್ಕದಲ್ಲಿದ್ದವರ ತಪಾಸಣೆ ನಡೆಸಲಾಗಿದೆ. ಈ ಇಸ್ಲಾಮಿಕ್ ಮಿಷನರಿ ಚಳವಳಿಯ ಅನುಯಾಯಿಗಳಾದ 19 ಮಂದಿ ವಿದೇಶಿಯರಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು, ಫಿಲಿಪಿನೊ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.
ಮಸೀದಿಯ ಒಳಗೆ 1500ಕ್ಕೂ ಹೆಚ್ಚು ಮಂದಿ ಇನ್ನೂ ಇದ್ದಾರೆ ಎಂದು ಮೂಲಗಳು ಹೇಳಿದ್ದು, 300 ಮಂದಿಗೆ ಜ್ವರ, ಕಫ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿದ್ದರೂ, ಹಲವು ಮಂದಿ ದೆಹಲಿಯ ವಿವಿಧ ಸರ್ಕಾರಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್ಗಳಲ್ಲಿ ದಾಖಲಾಗಿದ್ದಾರೆ. ಪೊಲೀಸರು, ಆರೋಗ್ಯಾಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳು ಇವರನ್ನು ಪತ್ತೆ ಮಾಡಿ ಸಾಂಕ್ರಾಮಿಕ ಹರಡುವುದನ್ನು ತಡೆಯುವ ಪ್ರಯತ್ನದಲ್ಲಿದ್ದಾರೆ.
ರೈಲಿನಲ್ಲಿ ದಿಲ್ಲಿಗೆ ಪ್ರಯಾಣಿಸಿದ 60 ವರ್ಷದ ಕರ್ನಾಟಕದ ತುಮಕೂರಿನ ವ್ಯಕ್ತಿ ಮಾರ್ಚ್ 27 ರಂದು ಆಸ್ಪತ್ರೆಯಲ್ಲಿ ನಿಧನರಾದರು, ನಿಝಾಮುದ್ದೀನ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಭಾಗವಹಿಸಿದ್ದರು, ಇದರಲ್ಲಿ ಇಂಡೋನೇಷ್ಯಾದಿಂದ 72, ಥಾಯ್ಲೆಂಡ್ ನಿಂದ 71, ನೇಪಾಳದಿಂದ 19, ಮಲೇಷ್ಯಾದ 20, ಮೈನಾಮಾರ್ ನ 33, ಶ್ರೀಲಂಕಾದ 34, ಬಾಂಗ್ಲಾದೇಶ 19 ಮತ್ತು 28 ಕಿರ್ಗಿಸ್ತಾನ್ ದ ಪ್ರಜೆಗಳು ಸೇರಿದ್ದಾರೆ.
ಜಮಾಅತ್ನ ಕೇಂದ್ರ ಕಚೇರಿ ಬಂಗ್ಲೆ ವಾಲಿ ಮಸೀದಿಯನ್ನು ಮುಚ್ಚಲಾಗಿದೆ. ಉಳಿದ ಎಲ್ಲ ಸದಸ್ಯರನ್ನು ಕೋವಿಡ್-19 ತಪಾಸಣೆಗೆ ಗುರಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಡಮಾನ್, ತೆಲಂಗಾಣ, ತಮಿಳುನಾಡು ಮತ್ತು ಕಾಶ್ಮೀರ ಪ್ರದೇಶಗಳ ಅಧಿಕಾರಿಗಳು ರೋಗಿಗಳನ್ನು ಪರೀಕ್ಷಿಸಿ ರೋಗಿಗಳ ಪ್ರಯಾಣದ ಇತಿಹಾಸವನ್ನು ಪತ್ತೆಹಚ್ಚಲು ಪ್ರಾರಂಭಿಸಿದಾಗ ನಿಝಾಮುದ್ದೀನ್ ಘಟನೆ ಬೆಳಕಿಗೆ ಬಂದಿತ್ತು.
ಘೋರ ಅಪರಾಧ : ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಇದೊಂದು ಘೋರ ಅಪರಾಧ ಎಂದು ಹೇಳಿದ್ದಾರೆ. ಸಂಘಟನೆಯ ದಿವ್ಯ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ. ಧಾರ್ಮಿಕ ಕೇಂದ್ರದ ಗುರುಗಳ ವಿರುದ್ಧ ಎಫ್ಐಆರ್ ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು, ಆದರೆ ಅವರು ಯಾವುದೇ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.