janadhvani

Kannada Online News Paper

ಸ್ವಾಮೀಜಿ ಭಾಷಣಕ್ಕೆ ಸಿಎಂ ಗರಂ: ನಾಳೆಯೇ ರಾಜೀನಾಮೆ ನೀಡುತ್ತೇನೆ- ಬಿ ಎಸ್ ವೈ

ದಾವಣಗೆರೆ: ಪಂಚಮಸಾಲಿ ಸಮಾಜದ ಮೂವರಿಗೆ ಸಚಿವ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟ ವಚನಾನಂದ ಸ್ವಾಮೀಜಿ ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಹರಿಹರದಲ್ಲಿ ನಡೆದ ಹರ ಜಾತ್ರೆ ವೇಳೆ ಪಂಚಮಸಾಲಿ ಪೀಠದಲ್ಲಿ ವಚನಾನಂದ ಸ್ವಾಮೀಜಿ ಭಾಷಣಕ್ಕೆ ಸಿಎಂ ವಿರೋಧ ವ್ಯಕ್ತಪಡಿಸಿದ್ದು, ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಲೇಬೇಕು, ನೀಡದೆ ಹೋದರೆ ಸಮಾಜದಿಂದ ವಿರೋಧ ವ್ಯಕ್ತವಾಗುತ್ತೆ ಎಂದು ಸ್ವಾಮೀಜಿ ಆಗ್ರಹಿಸಿದರು.

ಸ್ವಾಮೀಜಿ ನಡೆಯಿಂದ ಸಿಡಿಮಿಡಿಗೊಂಡ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ‘ನಾಳೆಯೇ ರಾಜೀನಾಮೆ ಕೊಟ್ಟು ಹೋಗಲು ಸಿದ್ಧ’ ಎಂದು ಗುಡುಗಿದರು.ನೀವು ನನಗೆ ಬೆದರಿಸಬೇಡಿ ಎಂದು ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ರೀತಿ ಮಾತನಾಡುವುದಾದರೆ ನಾನು ಹೊರಡುತ್ತೇನೆ’ ಎಂದು ಎದ್ದುನಿಂತರು. ಈ ರೀತಿ ಮಾತನಾಡದಂತೆ ಸ್ವಾಮೀಜಿಗೆ ಸೂಚಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ ಅವರಿಗೆ ತಾಕೀತು ಮಾಡಿದರು.

ಅಷ್ಟೇ ಅಲ್ಲದೇ, ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. 17 ಜನ ರಾಜೀನಾಮೆ ನೀಡದೇ ಇದ್ದರೆ ನಾನು ಸಿಎಂ ಆಗ್ತಾ ಇರಲಿಲ್ಲ,ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಸ್ವಾಮೀಜಿಗಳು ಏನು ಬೇಕಾದರೂ ಸಲಹೆ ನೀಡಿ, ನಾನು ಬಂದು ಚರ್ಚೆ ಮಾಡುತ್ತೇನೆ. ಸಲಹೆಗೆ ತಲೆ ಬಾಗುತ್ತೇನೆ ಎಂದರು.

ಆಗ ಮುಖ್ಯಮಂತ್ರಿ ಅವರನ್ನು ಸಮಾಧಾನಪಡಿಸಿ ಕೂರಿಸಿದ ಸ್ವಾಮೀಜಿ, ‘ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಿಮ್ಮ ಪರಿಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೂ ಗೊತ್ತಾಗಲಿ ಎಂದೇ ಹೀಗೆ ಹೇಳುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡರು.

ಬಳಿಕ ಭಾವುಕರಾಗಿ ಮಾತನಾಡಿದ ಯಡಿಯೂರಪ್ಪ, ‘ಸ್ವಾಮೀಜಿ ಏನು ಬೇಕಾದರೂ ಸಲಹೆ ನೀಡಲಿ. ವೈಯಕ್ತಿಕವಾಗಿ ಕುಳಿತು ಚರ್ಚಿಸುತ್ತೇನೆ. ಬೇಡ ಅಂದರೆ ನಾಳೆಯೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲು ಸಿದ್ಧನಿದ್ದೇನೆ’ ಎಂದು ಗುಡುಗಿದರು.

ಇದನ್ನೂ ಓದಿರಿ...