ಮಂಗಳೂರು: ಕೇಂದ್ರ ಸರ್ಕಾರದ Govt.of India NCIB Director ಎಂಬ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು ನಡೆಸುತ್ತಿದ್ದ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ ಹರ್ಷ ತಿಳಿಸಿದ್ದಾರೆ.
ಆರೋಪಿಗಳಿಂದ 20 ಲಕ್ಷ ರೂ.ಮೌಲ್ಯದ ಮಹೀಂದ್ರಾ ಟಿಯುವಿ 300 ಮತ್ತು ಎಕ್ಸ್ ಯುವಿ ಕಾರು, ಒಂದು ಪಿಸ್ತೂಲ್, ಒಂದು ರಿವಾಲ್ವರ್, 8 ಜೀವಂತ ಗುಂಡುಗಳು ಹಾಗೂ 10 ಮೊಬೈಲ್ ಫೋನ್ ಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಣಿಪಾಲ ಮಾಂಡೋವಿ ರೆಸಿಡೆನ್ಸ್ ಎಂಟ್ ಪಾಯಿಂಟ್ ನಿವಾಸಿ, ಕೇರಳ ಮೂಲಕ ಟಿ.ಶ್ಯಾಮ್ ಪೀಟರ್ (53), ಬೆಂಗಳೂರಿನ ಯಲಹಂಕ ನೆಹರೂ ನಗರದ ಸುರಭಿ ಲೇಔಟ್ ನಿವಾಸಿ, ಮಡಿಕೇರಿಯ ಸಿದ್ದಾಪುರ ಮೂಲದ ಟಿ.ಕೆ.ಬೋಪಣ್ಣ (33), ಬೆಂಗಳೂರು ದಕ್ಷಿಣ ನೀಲಸಂದ್ರದ ನಿವಾಸಿ ಮದನ್ (41), ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕಾಕೂಟಪುರ ಗ್ರಾಮದ ನಾಲ್ಕೇರಿ ಎಂಬಲ್ಲಿಯ ನಿವಾಸಿ ಚಿನ್ನಪ್ಪ (38), ಬೆಂಗಳೂರು ಕನಕಪುರ ಮುಖ್ಯರಸ್ತೆಯ ಕಲಘಟ್ಟಪುರ ಪಿಳ್ಳಿಕಾಮ ದೇವಸ್ಥಾನದ ಹತ್ತಿರದ ನಿವಾಸಿ ಸುನೀಲ್ ರಾಜು (35), ಬೆಂಗಳೂರು ಉತ್ತರ ಹಳ್ಳಿ ಗೌಡನಪಾಳ್ಯ ನಿವಾಸಿ ಕೋದಂಡರಾಮ (39), ಮಂಗಳೂರು ಕೂಳೂರು ಕಾರ್ಪೋರೇಷನ್ ಆಫೀಸ್ ಹತ್ತಿರದ ನಿವಾಸಿ ಜಿ.ಮೊಯಿದ್ದೀನ್ (70), ಮಂಗಳೂರು ಪಳ್ನೀರ್ ನಿವಾಸಿ ಎಸ್ ಎ.ಕೆ.ಅಬ್ದುಲ್ ಲತೀಫ್ (59) ಬಂಧಿತ 8 ಆರೋಪಿಗಳು.