ನವ ದೆಹಲಿ (ಮೇ.13) : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚುನಾವಣಾ ರ್ಯಾಲಿಗೆ ಪಶ್ಚಿಮ ಬಂಗಾಳದ ಸರ್ಕಾರ ಅನುಮತಿ ನಿರಾಕರಿಸಿರುವ ಹಿನ್ನೆಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಸರ್ವಾಧಿಕಾರಿ ಎಂದು ಜರಿದಿರುವ ಬಿಜೆಪಿ, ಮಮತಾ ಸರ್ಕಾರದ ನಡೆಯ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮೇ.19 ರಂದು ನಡೆಯಲಿರುವ 7ನೇ ಹಂತದ ಚುನಾವಣೆಯಲ್ಲಿ ಕೋಲ್ಕತಾದ ಬರಾಸ್ತಾ, ಮಥುರಾಪುರ್, ಜಾಧವ್ಪುರ್ ಸೇರಿದಂತೆ ಒಟ್ಟು 9 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೋಮವಾರ ಜಾಧವ್ಪುರ್ನಲ್ಲಿ ಚುನಾವಣಾ ರ್ಯಾಲಿ ನಡೆಸಲು ಮುಂದಾಗಿದ್ದರು. ಆದರೆ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರ ಅಮಿತ್ ಶಾ ರ್ಯಾಲಿಗೆ ತಡೆನೀಡಿದೆ. ಅಲ್ಲದೆ ಅಮಿತ್ ಶಾ ಹೆಲಿಕಾಪ್ಟರ್ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಳಿಯುವಂತಿಲ್ಲ ಎಂದು ಆದೇಶಿಸಿದೆ.
ಪಶ್ಚಿಮ ಬಂಗಾಳ ಸರ್ಕಾರದ ಆದೇಶಕ್ಕೆ ಕೆಂಡಾಮಂಡಲವಾಗಿರುವ ಅಮಿತ್ ಶಾ ಸೋಮವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಮತಾ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗಿದ್ದು, ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ರಾಜಕೀಯ ಮುಖಂಡರಿಗೆ ಚುನಾವಣಾ ಪ್ರಚಾರ ನಡೆಸಲು ಅವಕಾಶ ಕಲ್ಪಿಸದಿದ್ದರೆ ಮತ್ಯಾವ ಪುರುಷಾರ್ಥಕ್ಕೆ ಚುನಾವಣೆ ನಡೆಸಬೇಕು.
ಬಂಗಾಳದಲ್ಲಿ ಬಿಜೆಪಿ ಪಕ್ಷ ಹೆಚ್ಚು ಜನಬೆಂಬಲ ಗಳಿಸುತ್ತಿದೆ. ಇದು ಮಮತಾ ನಿದ್ದೆಗೆಡಿಸಿದ್ದು ಇದೇ ಕಾರಣಕ್ಕೆ ಅವರು ನಮ್ಮ ರ್ಯಾಲಿಯನ್ನು ನಿಷೇಧಿಸಿದ್ದಾರೆ. ಚುನಾವಣಾ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಅಲ್ಲದೆ ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.