ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಈ ವೇಳೆಯಲ್ಲಿ ಇನ್ನು ಮೂರು ತಿಂಗಳಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆ ಸಕಾಲಕ್ಕೆ ನಡೆಯುತ್ತಿದೆಯೋ ಇಲ್ಲವೋ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಇದೇ ವೇಳೆ, 2019ರ ಸಾರ್ವತ್ರಿಕ ಚುನಾವಣೆ ಸಕಾಲದಲ್ಲಿ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಅಲ್ಲದೇ, ಸದ್ಯದ ಪರಿಸ್ಥಿತಿ ಚುನಾವಣಾ ವೇಳಾಪಟ್ಟಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಮಂಗಳವಾರ ಪಾಕಿಸ್ತಾನ ಆಕ್ರಮಿತ ಬಾಲ್ಕೋಟ್ ಪ್ರದೇಶದಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಅಡಗುತಾಣಗಳನ್ನು ಭಾರತ ವಾಯು ದಾಳಿ ನಡೆಸುವ ಮೂಲಕ ನಾಶ ಮಾಡಿತ್ತು. ಆನಂತರ ಭಾರತ ಮತ್ತು ಪಾಕ್ ನಡುವೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.