janadhvani

Kannada Online News Paper

ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ದಾರಿ ತಪ್ಪಿದ ಕೆಲವು ಗುಂಪುಗಳ ನಡವಳಿಕೆಯಿಂದ ಇಡೀ ಧರ್ಮದ ಬಗ್ಗೆ ಜಾಗತಿಕ ಮಟ್ಟದಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ.

ಪುತ್ತೂರು: “ಇಸ್ಲಾಂ ಧರ್ಮವು ಮುಸ್ಲಿಮೇತರ ಸಮುದಾಯವನ್ನು ದ್ವೇಷಿಸುವುದನ್ನಾಗಲಿ ಅಥವಾ ವಿರೋಧಿಸುವುದನ್ನಾಗಲಿ ಎಂದೂ ಕಲಿಸಿಲ್ಲ. ಸರ್ವ ಜನರ ಹಿತವನ್ನು ಬಯಸುವ ಈ ಧರ್ಮವು ಎಲ್ಲರೊಂದಿಗೆ ಕರುಣೆ ಮತ್ತು ಪ್ರೀತಿಯಿಂದ ವರ್ತಿಸುವುದನ್ನು ಮಾತ್ರ ಬೋಧಿಸುತ್ತದೆ,” ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದ್ದಾರೆ.
ಎಸ್.ವೈ.ಎಸ್. ಕರ್ನಾಟಕ ವತಿಯಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ “ಮಾದರಿ ಮದುವೆ”ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಗಾರರಾಗಿ ಅವರು ಮಾತನಾಡುತ್ತಿದ್ದರು.

ಪ್ರತಿರೋಧ ಅನಿವಾರ್ಯವಾಗಿತ್ತು: ಇಸ್ಲಾಮಿನ ಇತಿಹಾಸದಲ್ಲಿ ಮುಸ್ಲಿಮರು ಎಂದೂ ತಾವಾಗಿ ಯುದ್ಧಕ್ಕಿಳಿದಿಲ್ಲ. ಸತ್ಯನಿಷೇಧಿಗಳು ಮುಸ್ಲಿಮರ ನಿರ್ಮೂಲನೆ, ಪವಿತ್ರ ಕಅಬಾ ಮತ್ತು ಆಸ್ತಿಪಾಸ್ತಿಗಳ ನಾಶಕ್ಕೆ ಮುಂದಾದಾಗ, ಆತ್ಮರಕ್ಷಣೆಗಾಗಿ ಅನಿವಾರ್ಯವಾಗಿ ಪ್ರತಿರೋಧ ಒಡ್ಡಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದರು.
ತಪ್ಪು ಕಲ್ಪನೆಗಳ ನಿವಾರಣೆ: ಇಸ್ಲಾಂ ಧರ್ಮವು ಖಡ್ಗದಿಂದ ಹರಡಿದೆ ಎಂಬುದು ಕೇವಲ ಅಪಪ್ರಚಾರವಾಗಿದೆ. ದಾರಿ ತಪ್ಪಿದ ಕೆಲವು ಗುಂಪುಗಳ ನಡವಳಿಕೆಯಿಂದ ಇಡೀ ಧರ್ಮದ ಬಗ್ಗೆ ಜಾಗತಿಕ ಮಟ್ಟದಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ. ಈ ಸತ್ಯವನ್ನು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.
ಮಾನವೀಯ ಮೌಲ್ಯಗಳ ಕರೆ:ಮನುಷ್ಯರೆಲ್ಲರೂ ದ್ವೇಷವನ್ನು ಮರೆತು ಪರಸ್ಪರ ಪ್ರೀತಿ ಮತ್ತು ವಿಶ್ವಾಸದೊಂದಿಗೆ ಸಹಬಾಳ್ವೆ ನಡೆಸಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಸಯ್ಯಿದ್ ಮಲ್‌ಜ‌ಅ್ ತಂಙಳ್,ಪೇರೋಡ್ ಉಸ್ತಾದ್, ತೋಕೆ ಉಸ್ತಾದ್, ಡಾ. ಝೈನಿ ಉಸ್ತಾದ್, ಸ್ವಾಗತ ಸಮಿತಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಪದ್ಮಶ್ರೀ ಡಾ. ಹರೇಕಳ ಹಾಜಬ್ಬ, ಜಿ.ಎಂ. ಉಸ್ತಾದ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಎಲ್.ಟಿ. ಅಬ್ದುರ್ರಝಾಖ್ ಹಾಜಿ, ಎಂ.ಎಸ್. ಮುಹಮ್ಮದ್ ಸುನ್ನೀ ಫೈಝಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿರಿ...