ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಜಂಕ್ಷನ್ ಬಳಿಯ ಮೇಲ್ಸೇತುವೆಯ ಮೇಲೆ ಇಂದು ಬೆಳ್ಳಂಬೆಳಗ್ಗೆ ಭೀಕರ ಕೊಲೆಯೊಂದು ನಡೆದಿದೆ. ಅಜ್ಜಿನಡ್ಕ ಮುಳ್ಳುಗುಡ್ಡೆ ನಿವಾಸಿ, ಆರಿಫ್ ಯಾನೆ ಟಾಬ್ಲೆಟ್ ಆರಿಫ್ (45) ಎಂಬವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಮೃತ ಆರಿಫ್ ಮಂಗಳೂರಿನ ಧಕ್ಕೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದರು. ಪ್ರತಿದಿನದಂತೆ ಇಂದು ಮುಂಜಾನೆ ಸುಮಾರು 5:00 ಗಂಟೆಯ ಸುಮಾರಿಗೆ ತಮ್ಮ ಮನೆಯಿಂದ ಬೈಕ್ನಲ್ಲಿ ಮೀನುಗಾರಿಕಾ ಬಂದರಿನತ್ತ ತೆರಳುತ್ತಿದ್ದರು. ಅವರು ತೊಕ್ಕೊಟ್ಟು ಫ್ಲೈಓವರ್ ತಲುಪುತ್ತಿದ್ದಂತೆ, ಕಾರಿನಲ್ಲಿ ಅಟ್ಟಿಸಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಅವರ ಬೈಕ್ ಅನ್ನು ಅಡ್ಡಗಟ್ಟಿದೆ.
ಬೈಕ್ನಿಂದ ಕೆಳಕ್ಕೆ ಬೀಳಿಸಿ, ತಲೆ ಮತ್ತು ದೇಹದ ಭಾಗಕ್ಕೆ ಮಾರಕಾಸ್ತ್ರಗಳಿಂದ ಮನಬಂದಂತೆ ದಾಳಿ ನಡೆಸಲಾಗಿದೆ. ತೀವ್ರ ರಕ್ತಸ್ರಾವಕ್ಕೊಳಗಾದ ಆರಿಫ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಕುಟುಂಬದ ಹಿನ್ನೆಲೆ:
ಮೂಲತಃ ಮಂಗಳೂರಿನ ಕುದ್ರೋಳಿ ನಿವಾಸಿಯಾಗಿದ್ದ ಆರಿಫ್, ಕಳೆದ ಆರೇಳು ವರ್ಷಗಳಿಂದ ಕುಟುಂಬ ಸಮೇತ ತಲಪಾಡಿ, ಅಜ್ಜಿನಡ್ಕ ಬಳಿಯ ಮುಳ್ಳುಗುಡ್ಡೆ ಎಂಬಲ್ಲಿ ಮನೆ ಮಾಡಿ ವಾಸವಿದ್ದರು. ಮೃತರು ಪತ್ನಿ ಹಾಗೂ ಮೂವರು ಗಂಡು ಮತ್ತು ಓರ್ವ ಹೆಣ್ಣು ಮಗು ಸೇರಿ ಒಟ್ಟು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಪೊಲೀಸ್ ತನಿಖೆ ಮತ್ತು ಭೇಟಿ:
ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಕುಮಾರ್ ಹಾಗೂ ಸೋಕೋ (SOCO) ವಿಧಿವಿಜ್ಞಾನ ತಂಡ ಭೇಟಿ ನೀಡಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಕೊಲೆಯಾದ ಆರಿಫ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಅವರನ್ನು ರೌಡಿಶೀಟರ್ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ಕೊಲೆಯು ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದ ಸಂಚು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















ಇನ್ನಷ್ಟು ಸುದ್ದಿಗಳು
ಸಾದು ಹಾಜಿ: ಸಾಗ್ ಕುಟುಂಬದ ಪರಂಪರೆಯ ದಾರಿದೀಪ
ಗುರುವಾಯನಕೆರೆಯಲ್ಲಿ ನಾಳೆ ‘ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್’ ಹಾಗೂ ಬೃಹತ್ ‘ಸಮಸ್ತ ಸೆಂಟಿನರಿ ಜಾಥಾ’
ಸಾಗ್ ಕುಟುಂಬದ ‘ಗ್ರ್ಯಾಂಡ್ ಫ್ಯಾಮಿಲಿ ಮೀಟ್-2026: ಮೀಲಾದುನ್ನಬಿ ﷺ ಸಮಾವೇಶ ಹಾಗೂ ದುಆ ಮಜ್ಲಿಸ್
BFR ಕಾಟಿಪಳ್ಳ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ- ಆನ್ಲೈನ್ ಸ್ಪರ್ಧೆಗಳು
ಕರಾವಳಿ ಐಕ್ಯತಾ ವೇದಿಕೆಯಿಂದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ
ನೆಲ್ಲಿಕಾರ್ ಮದ್ರಸ ದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ
ಬಜಗೋಳಿ ನೂರುಲ್ ಹುದಾ ಜುಮ್ಮಾ ಮಸೀದಿ: ಸಂಭ್ರಮದ ಸ್ವಾತಂತ್ರ್ಯೋತ್ಸವ
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ