ನವದೆಹಲಿ | ಉತ್ತರ ಪ್ರದೇಶದ ಫತ್ಹೇಪುರದಲ್ಲಿ ಶತಮಾನಗಳಷ್ಟು ಹಳೆಯದಾದ ಸಮಾಧಿಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಬಿಜೆಪಿ ನಾಯಕರು ಸೇರಿದಂತೆ 150 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ, ಸಂಘ ಪರಿವಾರದ ಕಾರ್ಯಕರ್ತರ ಗುಂಪಿನ ನೇತೃತ್ವ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಖಲಾಲ್ ಪಾಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಘರ್ಷಣೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಸಮಾಧಿಯ ಸುತ್ತಲೂ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ.
ಸಮಾಧಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರು ಕಳೆದ ದಿನ ಕೆಡವಲು ಪ್ರಯತ್ನಿಸಿದರು. ಫತ್ಹೇಪುರ್ ಜಿಲ್ಲೆಯ ಸದರ್ ತಹಸಿಲ್ನ ರೆಡಿಯಾ ಪ್ರದೇಶದ ಅಬು ನಗರದಲ್ಲಿರುವ ಈ ಸಮಾಧಿಯು ಮೊಘಲ್ ಯುಗದಲ್ಲಿ ಆಗ್ರಾ-ಔದ್ ಪ್ರಾಂತ್ಯದ ಭಾಗವಾಗಿದ್ದ ಛಾತಾರಿ ಮತ್ತು ತಾಲಿಬ್ನಗರದ ನವಾಬ್ ಅಬ್ದುಲ್ ಸಮದ್ ಅವರದ್ದಾಗಿದೆ ಎಂದು ಇತಿಹಾಸ ದಾಖಲೆಗಳು ಹೇಳುತ್ತವೆ.
ಈ ಪ್ರದೇಶದಲ್ಲಿ ಮುಸ್ಲಿಮರು ಯುಗಯುಗಗಳಿಂದ ನಿರ್ವಹಿಸುತ್ತಿದ್ದ ಸಮಾಧಿಯ ಮೇಲಿನ ದಾಳಿಯು ಕೋಮು ಗಲಭೆಗಳನ್ನು ಸೃಷ್ಟಿಸುವ ಯೋಜಿತ ನಡೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಿಂದುತ್ವ ಕಾರ್ಯಕರ್ತರ ಗುಂಪೊಂದು ಬಲವಂತವಾಗಿ ಸಮಾಧಿಯೊಳಗೆ ಪ್ರವೇಶಿಸಿ ಹಾನಿ ಮಾಡಿದೆ. ಸಮಾಧಿಯ ಗೋಡೆಯ ಕೆಲವು ಭಾಗಗಳು ಸಹ ಹಾನಿಗೊಂಡಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ದಾಳಿಕೋರರು ಸ್ಥಳದಿಂದ ಪರಾರಿಯಾಗುವ ಮೊದಲು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.







