janadhvani

Kannada Online News Paper

ನಿಮಿಷಪ್ರಿಯ ಬಿಡುಗಡೆ: ಅನಧಿಕೃತ ಸುದ್ದಿಯನ್ನು ಪ್ರಕಟಿಸಿ ಪ್ರಚಾರ ಗಿಟ್ಟಿಸುವ ಮಾಧ್ಯಮಗಳು

ನಿಮಿಷ ಪ್ರಿಯರಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಪಟ್ಟು ಹಿಡಿದಿರುವ ಮೃತ ತಲಾಲ್ ಸಹೋದರ ಅಬ್ದುಲ್ ಫತ್ತಾಹ್ ಅವರನ್ನು ಇಂತಹಾ ವರದಿಗಳು ಮತ್ತಷ್ಟು ಕೆರಳಿಸಲು ಕಾರಣವಾಗಲಿದೆ.

ನವದೆಹಲಿ : ಯೆಮೆನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಿಮಿಷಪ್ರಿಯ ಅವರ ಬಿಡುಗಡೆಗಾಗಿ ಸಂಧಾನ ಮಾತುಕತೆಗಳು ಮುಂದುವರಿದಿದ್ದು, ಶುಭ ಸುದ್ದಿಯನ್ನು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ ವೀಡಿಯೋ ಸಂದೇಶವೊಂದು ಪ್ರಚಾರಗೊಂಡಿದ್ದು, ಅದರಲ್ಲಿ ನಿಮಿಷಪ್ರಿಯ ಅವರ ಮರಣದಂಡನೆಯನ್ನು ಯೆಮೆನ್ ಸರಕಾರ ರದ್ದುಗೊಳಿಸಿದೆ ಮತ್ತು ನಿಮಿಷಪ್ರಿಯ ಭಾರತಕ್ಕೆ ಮರಳಲಿದ್ದಾರೆ ಎಂದು ವಿವರಿಸಲಾಗಿದೆ.

“ಭಾರತ ಮತ್ತು ಯೆಮೆನ್ ಮುಖಂಡರ ಸತತ ಪ್ರಯತ್ನದ ಫಲವಾಗಿ ಕೊನೆಗೂ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಶಿಕ್ಷೆಯನ್ನು ಯೆಮೆನ್ ರದ್ದುಗೊಳಿಸಿದೆ” ಎಂದು ಧರ್ಮಬೋಧಕ, ಜಾಗತಿಕ ಶಾಂತಿ ಪ್ರವರ್ತಕ ಡಾ.ಕೆ.ಎ.ಪೌಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.ಇದರ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಗಳು ಹೊರಬಂದಿಲ್ಲ.

ಡಾ.ಕೆ.ಎ.ಪೌಲ್ ರಿಲೀಸ್‌ ಮಾಡಿರುವ ವಿಡಿಯೊದಲ್ಲಿ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲು ಸಹಾಯ ಮಾಡಿದ ಎಲ್ಲಾ ನಾಯಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ. ದೇವರ ಆಶೀರ್ವಾದದಿಂದ, ನಿಮಿಷಾ ಪ್ರಿಯಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಮತ್ತು ಶೀಘ್ರದಲ್ಲೇ ಅವರು ಭಾರತಕ್ಕೆ ಹಿಂತಿರುಗುತ್ತಾರೆ. ನಿಮಿಷಾ ಪ್ರಿಯಾ ಅವರನ್ನು ಕರೆದೊಯ್ಯಲು ರಾಜತಾಂತ್ರಿಕರನ್ನು ಕಳುಹಿಸುತ್ತಿರುವ ಪ್ರಧಾನಿ ಮೋದಿ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಇಂತಹಾ ಕಪೋಲಕಲ್ಪಿತ ವರದಿಗಳು ಯೆಮೆನ್‌ನ ಮೃತ ತಲಾಲ್ ಕುಟುಂಬದೊಂದಿಗೆ ನಡೆಸಲಾಗುವ ಮಾತುಕತೆಗೆ ಹಿನ್ನಡೆಯಾಗಲಿದೆ. ಅದೂ ಅಲ್ಲದೇ, ನಿಮಿಷ ಪ್ರಿಯರಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಪಟ್ಟು ಹಿಡಿದಿರುವ ಮೃತ ತಲಾಲ್ ಸಹೋದರ ಅಬ್ದುಲ್ ಫತ್ತಾಹ್ ಅವರನ್ನು ಇಂತಹಾ ವರದಿಗಳು ಮತ್ತಷ್ಟು ಕೆರಳಿಸಲು ಕಾರಣವಾಗಲಿದೆ.

ಈ ನಿಟ್ಟಿನಲ್ಲಿ ನಿಮಿಷಪ್ರಿಯರ ಬಿಡುಗಡೆಯನ್ನು ಬಯಸುವ ಭಾರತೀಯರು, ಯಾವುದೇ ಸುಳ್ಳು ಸುದ್ದಿಗಳನ್ನು ಪ್ರಚಾರ ಪಡಿಸದೆ, ಅತ್ಯಂತ ಸಂಯಮದಿಂದ ವರ್ತಿಸಬೇಕಾಗಿದೆ. ಈಗಾಗಲೆ ಕೆಲವು ಕಿಡಿಗೇಡಿಗಳು ಮೃತ ತಲಾಲ್ ಸಹೋದರನ ಫೇಸ್‌ಬುಕ್ ಪುಟದಲ್ಲಿ ನಿಮಿಷಪ್ರಿಯರಿಗೆ ಗಲ್ಲುಶಿಕ್ಷೆ ನೀಡಲೇಬೇಕೆಂದು ಕಾಮೆಂಟ್ ಹಾಕಿದ್ದಾರೆ. ಕೆಲವರು ಮಲಯಾಳಂ ನ್ನು ಅರಬಿಗೆ ಭಾಷಾಂತರಿಸಿ ತಲಾಲ್ ಸಹೋದರನನ್ನು ಮತ್ತಷ್ಟು ಕೆರಳಿಸುವ ಪ್ರಯತ್ನ ನಡೆಸಿದ್ದಾರೆ.

ನಿಮಿಷಾ ಪ್ರಿಯಾ ಅವರ ವಕೀಲ ಎಂದು ಹೇಳಿಕೊಳ್ಳುವ ಸ್ಯಾಮ್ಯುಯೆಲ್ ಜೆರೋಮ್ ವಿರುದ್ಧ ಯೆಮೆನ್‌ನಲ್ಲಿ ಹತ್ಯೆಗೀಡಾದ ತಲಾಲ್ ಸಹೋದರ ನಿನ್ನೆ ಹರಿಹಾಯ್ದಿದ್ದಾರೆ. ಅವರು ವಕೀಲರಲ್ಲ ಮತ್ತು ಮಧ್ಯಸ್ಥಿಕೆಯ ಹೆಸರಿನಲ್ಲಿ ವ್ಯಾಪಕವಾಗಿ ಹಣ ಸಂಗ್ರಹಿಸುವ ವ್ಯಕ್ತಿ ಎಂದು ತಲಾಲ್ ಅವರ ಸಹೋದರ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು.

ಇದೀಗ ನಿಮಿಷಪ್ರಿಯ ಬಿಡುಗಡೆಯಾಗಲಿದ್ದಾರೆ ಎಂಬ ಸಂದೇಶವನ್ನು ರವಾನಿಸಿ, ಸಾಮ್ಯುಯೆಲ್ ವಿರುದ್ಧದ ಅಲೆಯನ್ನು ದಿಕ್ಕು ತಪ್ಪಿಸುವ ಉದ್ದೇಶವಿದೆಯೇ ಅಂದು ಅವಲೋಕಿಸಬೇಕಾಗಿದೆ.

ನಿಮಿಷಪ್ರಿಯರ ಬಿಡುಗಡೆಗಾಗಿ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು ಮಧ್ಯಪ್ರವೇಶಿಸಿ, ಯೆಮೆನ್‌ನಲ್ಲಿನ ಪ್ರಮುಖ ಸೂಫಿ ವಿದ್ವಾಂಸರ ಮೂಲಕ ನಿಮಿಷಾಪ್ರಿಯ ಅವರ ಮರಣದಂಡನೆಯನ್ನು ಮುಂದೂಡುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಮೃತ ತಲಾಲ್ ಕುಟುಂಬದೊಂದಿಗೆ ಸಂಧಾನ ಮಾತುಕತೆಯಲ್ಲಿ ತೊಡಗಿರುವ ಯೆಮೆನ್‌ನ ವಿದ್ವಾಂಸರ ನಿಯೋಗವು, ನಿಮಿಷಪ್ರಿಯ ಅವರ ಬಿಡುಗಡೆಗಾಗಿ ಶತ ಪ್ರಯತ್ನವನ್ನು ಮುಂದುವರಿಸಿದ್ದಾರೆ.