janadhvani

Kannada Online News Paper

ಕ್ಲಿನಿಕ್ ಗೆ ಆರೋಗ್ಯ ಇಲಾಖೆಯಿಂದ ಬೀಗಮುದ್ರೆ: ಇದು ಸೇಡಿನ ರಾಜಕಾರಣ- ಮುನೀರ್ ಕಾಟಿಪಳ್ಳ

ಉಳ್ಳಾಲ ತಾಲೂಕು ಖಾಸಗಿ ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳ ಕೇಂದ್ರ ಸ್ಥಾನ. ಈ ಎಲ್ಲಾ ಬೃಹತ್ ಆರೋಗ್ಯಸಂಸ್ಥೆಗಳಿಗೆ ನಿಮ್ಮ ಈ ಆರೋಗ್ಯ ಇಲಾಖೆ ಯಾವತ್ತಾದರು ಧಾಳಿ ನಡೆಸಿದೆಯೆ ? ಪರಿಶೀಲನೆ ಕೈಗೊಂಡಿದೆಯೆ ?

ಮಂಗಳೂರು: ಇಲ್ಲಿನ ಹೊರವಲಯದ ದೇರಳಕಟ್ಟೆ ಯಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್ ಒಂದಕ್ಕೆ ಆರೋಗ್ಯ ಇಲಾಖೆ ದಾಳಿ ನಡೆಸಿ, ಬೀಗಮುದ್ರೆ ಜಡಿದ ಕ್ರಮದ ವಿರುದ್ಧ ‘ಸೋಮೀ’ ಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಕ್ಲಿನಿಕ್ ನ ಮಾಲಕರಾದ ಇಸ್ಮತ್ ಪಜೀರ್ ಅವರು, ಇತ್ತೀಚೆಗೆ ಕರಾವಳಿಯಲ್ಲಿ ನಡೆದ ಅಮಾಯಕರ ಹತ್ಯೆ, ಹತ್ಯೆಗೆ ಯತ್ನ ಮುಂತಾದವುಗಳಿಂದ ಜಿಲ್ಲೆಯ ಜನತೆ ಕಂಗಾಲಾಗಿದ್ದ ಸಂದರ್ಭದಲ್ಲಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗದೆ, ಅಸಡ್ಡೆಯ ಮನೋಭಾವವನ್ನು ತೋರಿದ ಹಿನ್ನೆಲೆಯಲ್ಲಿ ಅದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿ, ಪೋಸ್ಟ್ ಗಳನ್ನು ಹಾಕಿದ್ದರು. ಇದರಿಂದ ಕುಪಿತಗೊಂಡ ಶಾಸಕರೇ ಇವರ ಕ್ಲಿನಿಕನ್ನು ಮುಚ್ಚಿಸಿದ್ದಾರೆಂದು ಹೇಳಲಾಗುತ್ತಿದೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಶಾಸಕರೊಂದಿಗೆ ಪತ್ರಕರ್ತರು ಪ್ರಶ್ನಿಸಿದ್ದು, “ಆ ಕ್ಲಿನಿಕನ್ನು ಉದ್ಘಾಟಿಸಿದ್ದು ನಾನೇ, ಮತ್ತೆ ನಾನ್ಯಾಕೆ ಮುಚ್ಚಿಸಲಿ, ಅದನ್ನು ನಡೆಸುವ ಅಗತ್ಯ ದಾಖಲೆಗಳಿಲ್ಲದ ಕಾರಣ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ” ಎಂದು ಉತ್ತರಿಸಿದರು.

ಶಾಸಕರ ಈ ಹೇಳಿಕೆಗೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು, ಇದು ಸೇಡಿನ ರಾಜಕಾರಣಕ್ಕೆ ಸಾಕ್ಷಿ ಎಂದು ತಮ್ಮ ಫೇಸ್‌ಬುಕ್ ಖಾತೆ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಅವರ ಫೇಸ್‌ಬುಕ್ ಪೋಸ್ಟ್‌ನ ಪೂರ್ಣ ರೂಪ

“ನಿಯಮಗಳನ್ನು ಪಾಲಿಸದ ಕಾರಣ ಇಸ್ಮತ್ ಪಜೀರ್ ಅವರ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಕ್ರಮ ಜರುಗಿಸಿದೆ” ಎಂದು ಹೇಳಿದ್ದೀರಿ. ಉಳ್ಳಾಲ ತಾಲೂಕು ಖಾಸಗಿ ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳ ಕೇಂದ್ರ ಸ್ಥಾನ. ಈ ಎಲ್ಲಾ ಬೃಹತ್ ಆರೋಗ್ಯಸಂಸ್ಥೆಗಳಿಗೆ ನಿಮ್ಮ ಈ ಆರೋಗ್ಯ ಇಲಾಖೆ ಯಾವತ್ತಾದರು ಧಾಳಿ ನಡೆಸಿದೆಯೆ ? ಪರಿಶೀಲನೆ ಕೈಗೊಂಡಿದೆಯೆ ? ಯಾಕೆ, ಈ ಖಾಸಗಿ ಕಾರ್ಪೊರೇಟ್ ಆರೋಗ್ಯ, ಮೆಡಿಕಲ್ ಸಂಸ್ಥೆಗಳಲ್ಲಿ ನಿಯಮಗಳ ಉಲ್ಲಂಘನೆ ನಡೆಯುವುದೇ ಇಲ್ಲವೆ ? ವೈದ್ಯಕೀಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆಯೆ ?

ಈ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ನೀಡುವಾಗ, ಅವುಗಳ ಸೀಟು ಹೆಚ್ಚಳ ಮಾಡುವಾಗ, ನವೀಕರಣ ಸಂದರ್ಭಗಳಲ್ಲಿ, ಸಂಬಂಧ ಪಟ್ಟ ಸಮಿತಿಗಳು ಪರಿಶೀಲನೆಗೆ ಬರುವಾಗ ಎಲ್ಲವೂ ಸರಿ ಇರುತ್ತದೆಯೆ ? ಹಾಸಿಗೆಯ ಬೆಡ್ ಗಳಲ್ಲಿ ಇರಬೇಕಾದಷ್ಟು ರೋಗಿಗಳು (ರೋಗಿಗಳೇ) ಇರುತ್ತಾರೆಯೆ ? ರೋಗಿಗಳ ಪರೀಕ್ಷೆ, ದರ ವಿಧಿಸುವಿಕೆ, ವೈದ್ಯರ ನಿಯೋಜನೆ, ಬಿಲ್ಲುಗಳು ಎಲ್ಲವೂ ಕ್ರಮಬದ್ದವಾಗಿ ಇರುತ್ತದೆಯೆ ? ಇದನ್ನೆಲ್ಲ ದಿಢೀರ್ ಕಾರ್ಯಾಚರಣೆ ನಡೆಸಿ ಪರಿಶೀಲಿಸಿ ಎಂದು ಪೊಲೀಸ್ ಬಲದೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಕಾರ್ಯಾಚರಣೆ ನಡೆಸಲು ಕಳುಹಿಸಿದ್ದು ಉಂಟೆ ?

ಇದಕ್ಕೆಲ್ಲ “ಹೌದು” ಎಂದು ಎದೆಯ ಮೇಲೆ ಕೈ ಇಟ್ಟು ಉತ್ತರ ನೀಡುತ್ತೀರಿ ಅಂತಾದರೆ, ಇಸ್ಮತ್ ಪಜೀರ್ ಕ್ಲಿನಿಕ್ ನ ಕುರಿತು ನೀವು ಮಾಡಿದ ಆರೋಪ, ಆಡಿದ ಮಾತುಗಳು ಪ್ರಾಮಾಣಿಕ ಅಂತ ಒಪ್ಪಬಹುದು. ಆದರೆ, ಸತ್ಯ ಖಂಡಿತಾ ಹಾಗಿಲ್ಲ. ಇಸ್ಮತ್ ಪಜೀರ್ ರ ಮೇಲೆ ನಡೆದಿರುವುದು ರಾಜಕೀಯ ದ್ವೇಷದ ಸೇಡಿನ ಕ್ರಮ. ಇದು ಉಳ್ಳಾಲ ತಾಲೂಕಿನ ಸಣ್ಣ ಮಕ್ಕಳಿಗೂ ತಿಳಿದಿರುವ ಸತ್ಯ.

ಮುನೀರ್ ಕಾಟಿಪಳ್ಳ ಅವರ ಫೇಸ್‌ಬುಕ್ ಪುಟದಿಂದ

https://www.facebook.com/share/1JFppLr74J/

ಇದನ್ನೂ ಓದಿರಿ...