janadhvani

Kannada Online News Paper

ವಿಶ್ವಾಸ(ಈಮಾನ್)ದ ಸಂರಕ್ಷಣೆಯಾಗಿದೆ ಸಂಘಟನೆಗಳ ಮುಖ್ಯ ಗುರಿ- ತೋಕೆ ಉಸ್ತಾದ್

ಮಾಣಿ : ನೂತನವಾದವು ಮೊಳಕೆಯೊಡೆದು ವ್ಯಾಪಕವಾಗಿ ಪಸರಿಸಿದ ಸಂದರ್ಭದಲ್ಲಿ ಪೂರ್ವಿಕರಾದ ಮಹಾತ್ಮರು ಮನಗಂಡು, ನೂತನವಾದದಿಂದ ಮುಸ್ಲಿಂ ಸಮುದಾಯವನ್ನು ಸಂರಕ್ಷಿಸಲು ಸುನ್ನಿ ಸಂಘಟನೆಯನ್ನು ಸ್ಥಾಪಿಸಿದರು. ಸುನ್ನಿ ಸಂಘಟನೆಯ ಮುಖ್ಯ ಗುರಿ ಎಂದರೆ, ಇಮಾನಿ(ವಿಶ್ವಾಸ)ನ ಸಂರಕ್ಷಣೆಯಾಗಿದೆ ಎಂದು ದಕ್ಷಿಣ ಕನ್ನಡ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಮೌಲಾನಾ ಟಿ. ಎಂ. ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಹೇಳಿದರು.

ಅವರು 2025 ಜುಲೈ 13ರಂದು ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ದಾರುಲ್ ಇರ್ಶಾದ್ ಕಟ್ಟಡ ಮಾಣಿಯಲ್ಲಿ ಸುನ್ನಿ ಸಂಘಟನಾ ನಾಯಕರಿಗಾಗಿ ಆಯೋಜಿಸಿದ ಅಲ್ ಇಸ್ತಿಖಾಮ ಎಂಬ ವಿಷಯದಲ್ಲಿ ತರಗತಿ ಮಂಡಿಸಿ ಮಾತನಾಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಅಧ್ಯಕ್ಷರಾದ ಅಲ್ಹಾಜ್ ಇಬ್ರಾಹಿಂ ಸ‌ಅದಿ ಮಾಣಿ ಉಸ್ತಾದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಕುದುಂಬ್ಲಾಡಿ ಇದರ ಸಾರಥಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿದರು.

ಎಸ್‌ವೈಎಸ್ ಸೌಹಾರ್ದ ಸಂಚಾರ ಸರ್ಕಲ್ ಭೇಟಿ

ಇದೇ ಸಂದರ್ಭದಲ್ಲಿ ಎಸ್‌ವೈಎಸ್ ರಾಜ್ಯ ಸಮಿತಿಯು ಹಮ್ಮಿಕೊಂಡ ಸೌಹಾರ್ದ ಸಂಚಾರ ಜಾಥಾವು ಮಾಣಿ ಸರ್ಕಲ್ ವ್ಯಾಪ್ತಿಯ ಕಲ್ಲಡ್ಕ ಹಾಗೂ ಪುತ್ತೂರು ಕೇಂದ್ರಗಳಿಗೆ ಆಗಮಿಸಲಿದ್ದು, ಈ ಬಗ್ಗೆ ಮಾಣಿ ಸರ್ಕಲ್ ವ್ಯಾಪ್ತಿಯ ಎಲ್ಲರನ್ನೂ ಆಹ್ವಾನಿಸಲು ಪುತ್ತೂರು ಕೇಂದ್ರದ ಸ್ವಾಗತ ಸಮಿತಿಯ ನಾಯಕರಾದ ಅಬೂ ಶಝಾ ಇಸ್ತಾದ್, ಇಕ್ಬಾಲ್ ಬಪ್ಪಳಿಗೆ, ಸ್ವಾಲಿಹ್ ಮುರಾ ಸಹಿತ ಹಲವು ನಾಯಕರು ಸರ್ಕಲ್ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಯಶಸ್ವಿಗೊಳಿಸಲು ಕರೆ ನೀಡಿದರು.

ಖುರ್ರತುಸ್ಸಾದಾತ್, ಪೊಸೋಟು ತಂಙಳ್ ರವರ ಅನುಸ್ಮರಣೆ

ನಮ್ಮೆಲ್ಲರ ಆಧ್ಯಾತ್ಮಿಕ ನೇತಾರರಾದ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ಹಾಗೂ ಪೊಸೋಟು ತಂಙಳ್ ರವರ ಹೆಸರಿನಲ್ಲಿ ತಹ್ಲೀಲ್ ಹೇಳಿ ದುಆಃ ನಡೆಸಲಾಯಿತು.

*ಚರ್ಚಾ ಕೂಟ* : ಸಂಘಟನೆ ಅಭಿವೃದ್ಧಿ ಹಾಗೂ ನಾಯಕರು ಪರಸ್ಪರ ಹೊಂದಾಣಿಕೆಗಾಗಿ ಮಾಣಿ ಸರ್ಕಲ್ ಯಲ್ಲಿ ಬರುವ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ನಾಯಕರ ಚರ್ಚಾ ಕೂಟ ನಡೆಯಿತು. ಚರ್ಚಾ ಕೂಟದ ನೇತೃತ್ವವನ್ನು ಇಬ್ರಾಹಿಂ ಸ‌ಅದಿ ಮಾಣಿ, ಅಬ್ದುಲ್ ರಝಾಕ್ ಮದನಿ ಕಾಮಿಲ್ ಉಸ್ತಾದ್ ಹಾಗೂ ಕೆ. ಬಿ. ಕಾಸಿಂ ಹಾಜಿ ರವರು ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಮಾಣಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ಹನೀಫಿ, ಇಸ್ಮಾಯಿಲ್ ಮದನಿ ನೇರಳಕಟ್ಟೆ, ಅಬ್ದುಲ್ ರಝಾಕ್ ಸ‌ಅದಿ ಸೂರ್ಯ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಕಾರ್ಯಕಾರಿ ಸಮಿತಿ ಸದಸ್ಯರು, ಎಸ್‌ವೈಎಸ್ ಕಾರ್ಯಕಾರಿ ಸಮಿತಿಯ ಸದಸ್ಯರು, ಯುನಿಟ್ ಸದಸ್ಯರು ಭಾಗವಹಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ಸ್ವಾಗತಿಸಿ, ನಿರೂಪಿಸಿದರು. ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸದಸ್ಯರಾದ ಹೈದರ್ ಸಖಾಫಿ ಬುಡೋಳಿ ರವರು ಧನ್ಯವಾದಗೈದರು. ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ನೆಲ್ಲಿರವರು ಸಹಕರಿಸಿದರು.

ವರದಿ : ಅಬೂಸೈಹಾನ್ ಪುತ್ತೂರು
14.07.2025

ಇದನ್ನೂ ಓದಿರಿ...