ಮಂಗಳೂರು: ಕೇಂದ್ರ ಹಜ್ ಮಂಡಳಿಯು ಈಗಾಗಲೇ ವಿವಿಧ ಕಾರಣಗಳನ್ನು ಮುಂದಿಟ್ಟು,ಮಂಗಳೂರು ನಿರ್ಗಮಿತ ಹಜ್ ವಿಮಾನಗಳನ್ನು ರದ್ದುಗೊಳಿಸಿದ್ದು, ಇದರಿಂದಾಗಿ ದ.ಕ, ಉಡುಪಿ, ಕಾರವಾರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಹಜ್ ಯಾತ್ರಾರ್ಥಿಗಳಿಗೆ ತೀವ್ರ ಅನಾನುಕೂಲವಾಗಿದೆ.
ಕರಾವಳಿ ಜಿಲ್ಲೆಗಳಲ್ಲಿನ ಹಜ್ ಸಂಬಂಧಿತ ವಿಷಯಗಳು ಅತ್ಯಂತ ಮಹತ್ವವಾಗಿದ್ದು, ಕೇಂದ್ರ ಸರಕಾರದ ಮಂಗಳೂರು ನಿರ್ಗಮಿತ ಹಜ್ ವಿಮಾನಗಳನ್ನು ರದ್ದುಗೊಳಿಸಿ ಬೆಂಗಳೂರು ಮುಖಾಂತರ ಯಾತ್ರಾರ್ಥಿಗಳನ್ನು ಕಳುಹಿಸುವುದು, ಹಜ್ ಆಕಾಂಕ್ಷಿಗಳ ಸಂಖ್ಯೆಯನ್ನು ಆಧರಿಸಿ ನೋಡುವುದಾದರೆ, ಕೇಂದ್ರ ಸರ್ಕಾರದ ಈ ನಿಲುವು ಅನ್ಯಾಯ ಆಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಪರಿಗಣನಾತ್ಮಕ ಮತ್ತು ವ್ಯವಸ್ಥಿತ ಮುಸ್ಲಿಮ್ ವಾಸ್ತವ್ಯ, ಧಾರ್ಮಿಕ ಕೇಂದ್ರಗಳು, ಘಾಡ ಆರಾಧನ ರೂಡಿತ್ವ ಮತ್ತು ಯಾತ್ರಾ ಇತಿಹಾಸ ವನ್ನು ಅವಲೋಕಿಸುವು ದಾದರೆ, ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ನಗರದ ಉನ್ನತೀಕರಣ, ಮೂಲಭೂತ ಸೌಕರ್ಯ, ಸಂಪರ್ಕ ಲಭ್ಯತೆಯನ್ನು ಪರಿಗಣಿಸಿ ಮಂಗಳೂರು ಕೇಂದ್ರಿತ ಹಜ್ ಯಾತ್ರಾರ್ಥಿಗಳ ನಿರ್ಗಮಿತ ವ್ಯವಸ್ತೆಯನ್ನು ಕೇಂದ್ರ ಹಜ್ ಮಂಡಳಿ ರದ್ದುಗೊಳಿಸಬಾರದಿತ್ತು.ಇಷ್ಟೆಲ್ಲಾ ಸಂಪರ್ಕ ಸೌಕರ್ಯ ಗಳಿದ್ದು ಕೂಡಾ ವಿಮಾನ ರದ್ದು ಗೊಳಿಸಿದ್ದು ಖೇದಕರ, ಅನ್ಯಾಯ ಮತ್ತು ಖಂಡನೀಯ.
ಮಂಗಳೂರು ಕೇಂದ್ರಿತ ಹಜ್ ನಿರ್ಗಮನ ಕೇಂದ್ರದ ಭಾಗವಾಗಿ ಈ ಹಿಂದಿನ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರಕಾರ ಮಂಗಳೂರಿಗೆ ಹಜ್ ಭವನ ನಿರ್ಮಾಣಕ್ಕೆ ಬಡ್ಜೆಟ್ ನಲ್ಲಿ ಪರಿಗಣನಾತ್ಮಕ ನಿಧಿಯನ್ನು ಕೂಡಾ ಬಿಡುಗಡೆ ಗೊಳಿಸಿದೆ. ಹಾಗಿದ್ದೂ ಕೂಡಾ ವಿಮಾನ ರದ್ದು ಪಡಿಸಿರುವುದು ಅತೀವ ಸಂಶಯಕ್ಕೆ ಕಾರಣವಾಗಿದೆ.
ಮುಂದುವರಿದು, ಕರ್ನಾಟಕ ರಾಜ್ಯದ ಸರ್ವ ಸಂಸದರ ನಿಯೋಗ ಆದಷ್ಟೂ ತುರ್ತಾಗಿ ಕೇಂದ್ರ ಹಜ್ ಸಚಿವರಲ್ಲಿ ಈ ಬಗ್ಗೆ ಚರ್ಚಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ನಿರ್ಗಮಿತ ಹಜ್ ವಿಮಾನದ ಏರ್ಪಾಡು ಮಾಡುವಂತೆ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸಿರುವುದಾಗಿ ಅಧ್ಯಕ್ಷರಾದ ಕೆ.ಅಶ್ರಫ್ (ಮಾಜಿ ಮೇಯರ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.