janadhvani

Kannada Online News Paper

ಬೆಂಗಳೂರು: ಎಸ್ಸೆಸ್ಸೆಫ್‌ನಿಂದ ಯುವ ಪ್ರತಿಭೆಗಳಿಗೆ ಸನ್ಮಾನ

ಬೆಂಗಳೂರು: ಕಳೆದ ಫೆಬ್ರವರಿ ತಿಂಗಳಲ್ಲಿ ಗುಜರಾತ್ ನಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಕರ್ಣಾಟಕ ರಾಜ್ಯವನ್ನು ಪ್ರತಿನಿಧಿಸಿ, ದೇಶದ 25 ಕ್ಕೂ ರಾಜ್ಯದ ಸ್ಪರ್ಧಾರ್ಥಿಗಳ ಪೈಪೋಟಿಯನ್ನು ಮೀರಿನಿಂತು ವಿಜೇತರಾದ ಬೆಂಗಳೂರಿನ ಪ್ರತಿಭೆಗಳಿಗೆ ಅಭಿನಂಧನಾ ಸಮಾರಂಭ “ಪ್ರತಿಭಾ ಸಂಗಮ” ಕಾರ್ಯಕ್ರಮ ಮಾ.15ರಂದು ಮಡಿವಾಳದ ಹೋಟೆಲ್ ಸೇವರಿ ಸಭಾಂಗಣದಲ್ಲಿ ನಡೆಯಿತು .

ಕಾರ್ಯಕ್ರಮವನ್ನು ರಾಜ್ಯ ಕಾರ್ಯಕಾರಿಣಿ ಸದಸ್ಯ ಶಾಫಿ ಸಅದಿ ದುವಾಶೀರ್ವಚನಗೈದು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಮಾಜವು ಕೋಮು ದ್ರುವೀಕರಣದ ಮೂಲಕ ಕಲುಷಿತಗೊಂಡ ಪ್ರಸಕ್ತ ಸನ್ನಿವೇಶದಲ್ಲಿ ಉತ್ತಮ ಸಮಾಜಕ್ಕಾಗಿ , ಸಾಹಿತಿಗಳು , ಲೇಖನಗಳ ಜವಾಬ್ದಾರಿ ಬಗ್ಗೆ ವಿವರಿಸಿದರು .

ಜಿಲ್ಲಾಧ್ಯಕ್ಷ ಸಂಶುದ್ದೀನ್ ಅಝ್ಹರಿಯವರು ಮಾತನಾಡಿ, ಯುದ್ಧ ಸಮಯದಲ್ಲಿ ಕವನಗಳು , ಕ್ರಾಂತಿಗೀತೆಗಳ ಮೂಲಕ ಶತ್ರು ಪಾಳಯದ ಧೈರ್ಯವಡಗಿಸುತ್ತಿದ್ದ ಅಸ್ಸಾನ್ ಬಿನ್ ಸಾಬಿತ್ ರಳಿಯಲ್ಲಾಹು ಅನ್ಹು ರವರ ಚರಿತ್ರೆ ಉಲ್ಲೇಖಿಸಿ ಪ್ರತಿಯೊಬ್ಬರಲ್ಲೂ ಅಸ್ಸಾನ್ ಬಿನ್ ಸಾಬಿತ್ ಹುಟ್ಟಿಬರಬೇಕೆಂದು ಯುವಪ್ರತಿಭೆಗಳನ್ನು ಹುರಿದುಂಬಿಸಿದರು . ಭಾರತವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟಿದ್ದ ಬ್ರಿಟಿಷರು ಆಯುಧಗಳಿಗಿಂತ ಹೆಚ್ಚು ಲೇಖನಿಯನ್ನು ಭಯಪಟ್ಟಿದ್ದರು ಎಂದು ಸಂಧರ್ಭಕ್ಕನುಸಾರವಾಗಿ ಲೇಖನಿಯ ಮಹತ್ವವನ್ನು ವಿವರಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿಹಾಬ್ ಮಡಿವಾಳ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ವಿಜೇತರಿಗೆ ಜಿಲ್ಲಾ ಸಮಿತಿಯ ವತಿಯಿಂದ ಉಡುಗೊರೆಗಳನ್ನು ನೀಡಿ ಅಭಿನಂದಿಸಲಾಯಿತು.

ಎಸ್ಸೆಸ್ಸೆಫ್ ಜಿಲ್ಲಾ ಪ್ರ.ಕಾರ್ಯದರ್ಶಿ ಶಬೀಬ್ ಹಲಸೂರು ಸ್ವಾಗತಿಸಿ , ಮೀಡಿಯಾ ಕಾರ್ಯದರ್ಶಿ ಫಾರೂಖ್ ಅಮಾನಿ ವಂದಿಸಿದರು.