janadhvani

Kannada Online News Paper

ಮಂಗಳೂರು: ಹಿಜಾಬ್‌ ಧರಿಸಿದ್ದ ವಿದ್ಯಾರ್ಥಿನಿಗೆ ಬೆದರಿಕೆ- ಆಸರೆಯಾದ ಮುಸ್ಲಿಂ ಐಕ್ಯತಾ ವೇದಿಕೆ

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯ

ಮಂಗಳೂರು: ಹಿಜಾಬ್ ಧರಿಸಿದ್ದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಬೆದರಿಸಿ ಹಲ್ಲೆ ಮಾಡಲು ಮುಂದಾದ ಕಾರ್ ಸ್ಟ್ರೀಟ್ ಕಾಲೇಜಿನ ವಿದ್ಯಾರ್ಥಿ ದಯಾನಂದ ಪೈ ಹಾಗೂ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿಗಳ ದುಷ್ಕೃತ್ಯದ ವಿಡಿಯೋವೊಂದು ಇಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಮುಸ್ಲಿಂ ಐಕ್ಯತಾ ವೇದಿಕೆಯ ಕುದ್ರೋಳಿ ನಿಯೋಗವು ಬಂದರ್ ಪೋಲಿಸ್ ಠಾಣೆಗೆ ಭೇಟಿ ನೀಡಿದ ವೇಳೆಯಲ್ಲಿ, ಬೆದರಿಕೆಗೊಳಗಾದ ವಿದ್ಯಾರ್ಥಿನಿಯರು ದೂರು ದಾಖಲು ಮಾಡಲು ಬಂದರ್ ಠಾಣೆಯಲ್ಲಿ ಮೂರು ಘಂಟೆಗಳ ಕಾಲ ಕಾಯುತಿದ್ದ ಪ್ರಸಂಗ ಬೆಳಕಿಗೆ ಬಂದಿದೆ.

ಕೂಡಲೇ ಮಧ್ಯಪ್ರವೇಶಿಸಿ ದೂರು ದಾಖಲಿಸುವಂತೆ ಮಾತುಕತೆ ನಡೆಸುತ್ತಿದ್ದಂತೆ, ಅಲ್ಲಿಗೆ ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಆಗಮಿಸುತ್ತಾರೆಂಬ ಮಾಹಿತಿ ದೊರೆತಿದ್ದು, ತಕ್ಷಣವೇ ಪೊಲೀಸ್ ಅಧಿಕಾರಿಗಳು ಕಾರ್ಯಪ್ರವರ್ತರಾಗಿ, ವಿದ್ಯಾರ್ಥಿನಿಯರನ್ನು ವಿಚಾರಿಸಿ, ದೂರು ಸ್ವೀಕರಿಸುವಂತೆ ಎಸಿಪಿ ಸೂಚಿಸಿದ್ದಾರೆ.

ನಂತರ ಮಾದ್ಯಮದೊಂದಿಗೆ ಐಕ್ಯತಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ ಅಬೂಬಕ್ಕರ್ ರವರು ಮಾಹಿತಿ ನೀಡುತ್ತಾ, ಕೂಡಲೇ ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಿ ಕೊಡುವಂತೆ ಕಮಿಷನರಲ್ಲಿ ವಿನಂತಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮಾಜಿ ಅಧ್ಯಕ್ಷರಾದ ಕೆ ಆಶ್ರಫ್ ಮಾಜಿ ಮೇಯರ್ ಮಾತನಾಡಿ, ಇಂತಹ ಸೂಕ್ಷ್ಮ ವಿಷಯಗಳು ಬಿಗಡಾಯಿಸದಂತೆ ಎಲ್ಲಾ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು ಕಾರ್ಯೋನ್ಮುಖರಾಗಬೇಕು.ಈ ವಿಷಯದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷರಾದ ಯಾಸೀನ್ ಕುದ್ರೋಳಿ, ಕಾರ್ಪೋರೇಟರ್ ಶಂಸುದ್ದೀನ್ ಎಚ್ ಬಿಟಿ ,ಕೋಶಾಧಿಕಾರಿ ಮಕ್ಬೂಲ್ ಜಾಮಿಅ, ವೇದಿಕೆಯ ಸಂಚಾಲಕರಾದ ಅಝೀಝ್ ಕುದ್ರೋಳಿ, ಮುಝೈರ್ ಕುದ್ರೋಳಿ,ಲತೀಫ್ ಕ್ರಿಸ್ಟಲ್ ನಿಯೋಗದಲ್ಲಿದ್ದರು.