janadhvani

Kannada Online News Paper

ನಕಲಿ ಅಂಕಪಟ್ಟಿ ಬಳಕೆ : ಬಿಜೆಪಿ ಶಾಸಕನಿಗೆ 5 ವರ್ಷ ಜೈಲು- ವಿಧಾನಸಭೆ ಸದಸ್ಯತ್ವ ರದ್ದು

28 ವರ್ಷಗಳ ಹಿಂದೆ ಕಾಲೇಜು ಪ್ರವೇಶಾತಿಗಾಗಿ ನಕಲಿ ಅಂಕಪಟ್ಟಿ ಬಳಸಿದ್ದ ತಿವಾರಿ

ಅಯೋಧ್ಯೆ: ಕಾಲೇಜು ಪ್ರವೇಶಾತಿಗಾಗಿ ನಕಲಿ ಅಂಕಪಟ್ಟಿ ಬಳಸಿದ ಆರೋಪಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಅಯೋಧ್ಯೆಯ ಗೋಸಾಯಿಗಂಜ್‌ನ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ಅಲಿಯಾಸ್ ಖಬ್ಬು ತಿವಾರಿ ವಿಧಾನಸಭೆಯ ಸದಸ್ಯತ್ವ ಕಳೆದುಕೊಂಡಿದ್ದಾರೆ.

28 ವರ್ಷಗಳ ಹಿಂದೆ ಕಾಲೇಜು ಪ್ರವೇಶಾತಿಗಾಗಿ ನಕಲಿ ಅಂಕಪಟ್ಟಿ ಬಳಸಿದ್ದಕ್ಕಾಗಿ ವಿಶೇಷ ನ್ಯಾಯಾಲಯವು ಖಬ್ಬು ತಿವಾರಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ವಿಧಾನಸಭಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ದುಬೆ ಇಂದ್ರ ಪ್ರತಾಪ್ ರನ್ನು ಉತ್ತರ ಪ್ರದೇಶದ ವಿಧಾನಸಭೆಯ ಸದಸ್ಯತ್ವದಿಂದಲೂ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಯೋಧ್ಯೆ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲ ಯದುವಂಶ್ ರಾಮ್ ತ್ರಿಪಾಠಿ ಅವರು ತಿವಾರಿ ವಿರುದ್ಧ ನಕಲಿ ಅಂಕಪಟ್ಟಿ ಬಳಕೆಗೆ ಸಂಬಂಧಿಸಿದಂತೆ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಯುತ್ತಿತ್ತು. ಅಯೋಧ್ಯೆಯ ವಿಶೇಷ ನ್ಯಾಯಾಲಯದ ನ್ಯಾಯಧೀಶ ಪೂಜಾ ಸಿಂಗ್ ಅವರು ಅಕ್ಟೋಬರ್ 18ರಂದು ತೀರ್ಪು ನೀಡಿದ್ದರು. ನಂತರ ಇಂದ್ರ ಪ್ರತಾಪ್ ರನ್ನು ಜೈಲಿಗೆ ರವಾನಿಸಲಾಯಿತು.

ಯುಪಿಯ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಖಬ್ಬು ತಿವಾರಿ ಅವರ ಸದಸ್ಯತ್ವವನ್ನು ಅಕ್ಟೋಬರ್ 18 ರಿಂದ ಕೊನೆಗೊಳಿಸಲಾಗುತ್ತದೆ ಎಂದು ಪರಿಗಣಿಸಲಾಗಿದೆ.2017ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.