janadhvani

Kannada Online News Paper

ಮೈಸೂರು ಅತ್ಯಾಚಾರ : ಬಂಧಿತ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಡಿಜಿಪಿ

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.

ಆರೋಪಿಗಳನ್ನು ತಮಿಳುನಾಡಿನಿಂದ ಬಂಧಿಸಿ ಮೈಸೂರಿಗೆ ಕರೆದುಕೊಂಡು ಬಂದ ಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಒಟ್ಟು ಆರು ಮಂದಿ ಆರೋಪಿಗಳಿದ್ದು, ಇವರೆಲ್ಲರೂ ತಮಿಳುನಾಡಿನ ತಿರ್ಪೂರ್‌ನವರು. ಇವರಲ್ಲಿ ಐವರನ್ನು ಬಂಧಿಸಲಾಗಿದ್ದು, ಒಬ್ಬ ನಾಪತ್ತೆಯಾಗಿದ್ದಾನೆ. ಬಂಧಿತ ಐವರಲ್ಲಿ ಒಬ್ಬಾತ ಬಾಲಾಪರಾಧಿಯಾಗಿದ್ದಾನೆ. ಆತನ ವಯಸ್ಸು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಆರೋಪಿಗಳೆಲ್ಲರೂ ಕಾರ್ಮಿಕರಾಗಿದ್ದಾರೆ. ಚಾಲಕ, ವೈರಿಂಗ್, ಗಾರೆ ಕೆಲಸದವರು, ಮರಗೆಲಸ ಮಾಡುವವರು ಆರೋಪಿಗಳಲ್ಲಿದ್ದಾರೆ. ಒಬ್ಬ ಅನಕ್ಷರಸ್ಥ, ಇಬ್ಬರು ಏಳನೇ ತರಗತಿ ಓದಿದವರು ಇದ್ದಾರೆ. ಬಂಡಿಪಾಳ್ಯಕ್ಕೆ ತರಕಾರಿ ತರುವ ವಾಹನದವರು ಸ್ನೇಹಿತರನ್ನೂ ಕರೆದುಕೊಂಡು ಬರುತ್ತಾರೆ. ಹಾಗೆಯೇ ಇವರೂ ಮೈಸೂರಿಗೆ ಬಂದಿದ್ದರು. ಬಂದಾಗ ಅವರು ಪಾರ್ಟಿ ಮಾಡುವುದು ಸಾಮಾನ್ಯ ಚಟುವಟಿಕೆ. ಇಂತಹದೇ ಪಾರ್ಟಿ ವೇಳೆ ಅತ್ಯಾಚಾರ ಎಸಗಿದ್ದಾರೆ ಎಂದು ಮಾಹಿತಿ ನೀಡಿದರು.

’’ಪ್ರಕರಣವನ್ನು ಭೇದಿಸಲು ಏಳು ತಂಡಗಳನ್ನು ರಚಿಸಿ, ಕಾರ್ಯಾಚರಣೆಗೆ ಇಳಿಸಲಾಗಿತ್ತು. ಸಂತ್ರಸ್ಥೆಯಿಂದ ಯಾವುದೇ ಹೇಳಿಕೆ ಸಿಕ್ಕಿಲ್ಲ. ಆಕೆಯ ಸ್ನೇಹಿತನಿಂದ ಸ್ವಲ್ಪ ಮಾಹಿತಿ ಸಿಕ್ಕಿತ್ತು. ಆದರೆ ಅದು ಅಪೂರ್ಣವಾಗಿತ್ತು. ಬಳಿಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದೆವು. ಆಗ ಆರೋಪಿಗಳು ಸಿಕ್ಕಿ ಬಿದ್ದರು. ನನಗೆ ಇದನ್ನು ಘೋಷಣೆ ಮಾಡೋಕೆ ಖುಷಿ ಆಗ್ತಿದೆ ಅಂತ ಹೇಳೋಕೆ ಆಗಲ್ಲ. ಈ ಕೇಸ್ನಲ್ಲಿ ಒಟ್ಟು 5 ಮಂದಿಯನ್ನು ಬಂಧಿಸಲಾಗಿದೆ. ಹೈಕೋರ್ಟ್ ಆರ್ಡರ್ ಆಗಿರುವ ಕಾರಣಕ್ಕೆ ಈ ಸಂಬಂಧ ಹೆಚ್ಚು ಹೇಳಲು ಸಾಧ್ಯವಿಲ್ಲ’’ ಎಂದರು.