ಕಲ್ಲಿಕೋಟೆ: ಚಂದ್ರಿಕಾ ಪತ್ರಿಕೆಗೆ ಸಂಬಂಧಿಸಿ ಇಡಿ ಅನ್ವೇಷಣೆಯ ಭಾಗವಾಗಿ, ಮುಸ್ಲಿಂ ಲೀಗ್ ಅಧ್ಯಕ್ಷ ಪಾಣಕ್ಕಾಡ್ ಹೈದರ್ ಅಲಿ ಶಿಹಾಬ್ ತಂಙಳ್ ಅವರಿಗೆ ಇಡಿ ನೋಟಿಸ್ ನೀಡಿದೆ. ಹೈದರ್ ಅಲಿ ತಂಙಳರ ಪುತ್ರ ಮುಈನಲಿ ಶಿಹಾಬ್ ತಂಙಳ್ ಕುಂಞಾಲಿಕುಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷವು ಕುಂಞಾಲಿಕುಟ್ಟಿಯ ಮೇಲೆ ಕೇಂದ್ರೀಕರಿಸಿದೆ ಮತ್ತು ಅವರ ಭಯದಿಂದ ಎಲ್ಲರೂ ಮೌನವಾಗಿದ್ದಾರೆ ಎಂದು ಅವರು ಹೇಳಿದರು. ಚಂದ್ರಿಕಾ ಪತ್ರಿಕೆಯ ಪ್ರಸ್ತುತ ಸಮಸ್ಯೆಗಳೇ ಹೈದರಾಲಿ ತಂಙಳ್ ಅವರು ಎದುರಿಸುತ್ತಿರುವ ಕಾಯಿಲೆಗಳಿಗೆ ಕಾರಣ ಎಂದು ಮುಈನಲಿ ತಂಙಳ್ ಹೇಳಿದರು.ಅವರು ಮುಸ್ಲಿಂ ಲೀಗ್ನ ಪ್ರಧಾನ ಕಚೇರಿಯಾದ ಲೀಗ್ ಹೌಸ್ನಲ್ಲಿ ಚಂದ್ರಿಕಾ ಸಂಬಂಧಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ತಂಙಳ್ ಈ ರೀತಿ ಹೇಳುತ್ತಿದ್ದಂತೆ, ಸ್ಥಳದಲ್ಲಿದ್ದ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತನೊಬ್ಬ ಕುಪಿತಗೊಂಡು ‘ಎಡಾ’ ಎಂದು ಕೂಗಿ ತಂಙಳರ ವಿರುದ್ಧ ತಿರುಗಿಬಿದ್ದ ಪರಿಣಾಮ ಪತ್ರಿಕಾಗೋಷ್ಠಿಗೆ ಅಡಚಣೆ ಉಂಟಾಯಿತು.ನಂತರ, ಸ್ವತಃ ಲೀಗ್ ಕಾರ್ಯಕರ್ತರೇ ತಂಙಳ್ ರನ್ನು ವಾಹನ ಹತ್ತಿಸಿದರು.
ಕಳೆದ 40 ವರ್ಷಗಳಿಂದ ಪಕ್ಷದ ನಿಧಿಯನ್ನು ಕುಂಞಾಲಿಕುಟ್ಟಿ ನಿರ್ವಹಿಸುತ್ತಿದ್ದಾರೆ. ಚುನಾವಣೆ ಸೇರಿದಂತೆ ಎಲ್ಲಾ ನಿಧಿಗಳನ್ನು ಅವರೇ ನಿರ್ವಹಿಸುತ್ತಿದ್ದು,ಪಾಣಕ್ಕಾಡ್ ಕುಟುಂಬದಲ್ಲಿ ಯಾರೂ ಅದನ್ನು ನಿಭಾಯಿಸುವುದಿಲ್ಲ. ಶುದ್ಧತೆಯನ್ನು ಕಾಪಾಡುವ ಭಾಗವಾಗಿದೆ ಅದು.
ಆದರೆ ಚಂದ್ರಿಕಾ ನಿಧಿಯನ್ನು ಕುಂಞಾಲಿಕುಟ್ಟಿಯ ಆಪ್ತ, ಹಣಕಾಸು ನಿರ್ದೇಶಕರಾದ ಶಮೀರ್ ನಿರ್ವಹಿಸುತ್ತಿದ್ದರು. ಕುಂಞಾಲಿಕುಟ್ಟಿ ಶಮೀರ್ನನ್ನು ಕುರುಡಾಗಿ ನಂಬಿದ್ದರು. ಚಂದ್ರಿಕಾ ನಿಧಿಯನ್ನು ನಿರ್ವಹಿಸುವಲ್ಲಿ ಶಮೀರ್ ವಿಫಲರಾಗಿದ್ದಾರೆ. ಶಮೀರ್ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಪಕ್ಷವು ಒಂದು ನಿಲುವನ್ನು ತೆಗೆದುಕೊಳ್ಳಬೇಕು ಆದರೆ, ಕುಂಞಾಲಿಕುಟ್ಟಿಯ ಭಯದಿಂದ ಎಲ್ಲರೂ ಮೌನವಾಗಿದ್ದಾರೆ ಎಂದು ಮುಯೀನ್ ಅಲಿ ತಂಙಳ್ ಹೇಳಿದರು.
ಚಂದ್ರಿಕಾ ಹಣ ವರ್ಗಾವಣೆ ಪ್ರಕರಣದಲ್ಲಿ ಹೈದರ್ ಅಲಿ ತಂಙಳ್ ತೀವ್ರ ಮಾನಸಿಕ ಒತ್ತಡದಲ್ಲಿದ್ದಾರೆ. ಪಾಣಕ್ಕಾಡ್ ಕುಟುಂಬದ ಇತಿಹಾಸದಲ್ಲಿ ಇದು ಎಂದಿಗೂ ಸಂಭವಿಸಿರಲಿಲ್ಲ. ಚಂದ್ರಿಕಾದಲ್ಲಿನ ಪ್ರಸ್ತುತ ಸಮಸ್ಯೆಗಳೇ ಅವರು ಎದುರಿಸುತ್ತಿರುವ ಅನಾರೋಗ್ಯಗಳಿಗೆ ಕಾರಣ ಎಂದೂ ಅವರು ಸ್ಪಷ್ಟಪಡಿಸಿದರು.