janadhvani

Kannada Online News Paper

ಬಿಜೆಪಿಯೊಂದಿಗೆ ಶಾಮೀಲು- ರಾಹುಲ್ ಗಾಂಧಿ ಹೇಳಿಕೆಗೆ ನಾಯಕರ ಆಕ್ರೋಶ

ನವದೆಹಲಿ: ಈ ಬಾರಿಯ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಹಿರಿಯ ಹಾಗೂ ಕಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಹಿರಿಯ ನಾಯಕರನ್ನು ಅಕ್ಷರಶ: ಕೆರಳಿಸಿದೆ. ಪಕ್ಷ ಸಂದಿಗ್ಧ ಸ್ಥಿತಿಯಲ್ಲಿ ಇರುವಾಗಲೇ ಉದ್ದೇಶಪೂರ್ವಕಾಗಿ ಕೆಲವರು ನಾಯಕತ್ವದ ಕುರಿತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಲ್ಲದೇ ಕೆಲವು ನಾಯಕರು ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದೂ ರಾಹುಲ್ ಗಂಭೀರ ಆರೋಪ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ಈ ನೇರ ಆರೋಪ ಪಕ್ಷದ ಹಿರಿಯ ನಾಯಕರನ್ನು ಕೆರಳಿಸಿದ್ದು, ನಾಯಕತ್ವದ ಕುರಿತು ಪತ್ರ ಬರೆದಿದ್ದ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಸೇರಿದಂತೆ ಹಲವರನ್ನು ತೀವ್ರ ಘಾಸಿಗೊಳಿಸಿದೆ.

ರಾಜೀನಾಮೆ ಪ್ರಸ್ತಾವ ಮುಂದಿಟ್ಟ ಆಜಾದ್:
ರಾಹುಲ್ ಆರೋಪದಿಂದ ತೀವ್ರ ನೋವಾಗಿದೆ ಎಂದು ಹೇಳಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಒಂದು ವೇಳೆ ರಾಹುಲ್ ಗಾಂಧಿ ಆರೋಪ ಸಾಬೀತಾದರೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಜೀವಮಾನವೀಡಿ ಕಾಂಗ್ರೆಸ್‌ಗಾಗಿ ದುಡಿದಿದ್ದು, ತಮ್ಮ ಸುದೀರ್ಘ ರಾಜಕಾರಣದಲ್ಲಿ ಎಂದಿಗೂ ಬಿಜೆಪಿ ಜೊತೆ ಸೇರುವ ಕೀಳು ಮಟ್ಟದ ರಾಜಕಾರಣವನ್ನು ಮಾಡಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಪಕ್ಷಕ್ಕೆ ಸೂಕ್ತ ಹಾಗೂ ಖಾಯಂ ನಾಯಕತ್ವ ಬೇಕು ಎಂಬ ಕಾರಣಕ್ಕೆ ಸೋನಿಯಾ ಅವರಿಗೆ ಪತ್ರ ಬರೆದಿದ್ದೇವೆಯೇ ಹೊರತು, ಪಕ್ಷವನ್ನು ಸಂಕಷ್ಟಕ್ಕೆ ದೂಡಬೇಕು ಎಂದು ಅಲ್ಲ ಎಂದು ಆಜಾದ್ ಸ್ಪಷ್ಟಪಡಿಸಿದ್ದಾರೆ.

ಸಿಬಲ್ ಆಕ್ರೋಶ:
ಇನ್ನು ರಾಹುಲ್ ಗಾಂಧಿ ಹೇಳಿಕೆಗೆ ಮತ್ತೋರ್ವ ಹಿರಿಯ ನಾಯಕ ಕಪಿಲ್ ಸಿಬಲ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದವರಿಗೆ ರಾಹುಲ್ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಹಿರಿಯ ಹಾಗೂ ಕಿರಿಯ ನಾಯಕರ ನಡುವಿನ ವೈಮನಸ್ಸಿಗೆ ಕನ್ನಡಿ ಹಿಡಿದಿದ್ದು, ರಾಹುಲ್ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪತ್ರದಲ್ಲಿ ಏನಿತ್ತು?:
ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಹಾಗೂ ಖಾಯಂ ಅಧ್ಯಕ್ಷರನ್ನು ನೇಮಿಸುವ ಕುರಿತು ಪಕ್ಷದ 20 ಹಿರಿಯ ನಾಯಕರು ಈ ಹಿಂದೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಪಕ್ಷಕ್ಕೆ ಖಾಯಂ ಅಧ್ಯಕ್ಷರಿಲ್ಲದೇ ಸಂಘಟನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕೂಡಲೇ ಈ ಕುರಿತು ಗಮನಹರಿಸಬೇಕು ಎಂದು ಇವರು ಪತ್ರ ಬರೆದಿದ್ದರು.

ಸೋನಿಯಾಗೆ ಪತ್ರ ಬರೆದ ಕಾಂಗ್ರೆಸ್ ನಾಯಕರಲ್ಲಿ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಶಶಿ ತರೂರ್, ಪೃಥ್ವಿರಾಜ್ ಚೌಹಾಣ್ ಪ್ರಮುಖರು.

ಇದನ್ನೂ ಓದಿರಿ...